2.5 ಲಕ್ಷ ಮೌಲ್ಯದ ಸ್ವತ್ತು ಕದ್ದ ಇಬ್ಬರು ಕಳ್ಳರ ಬಂಧನ
ಬೆಂಗಳೂರು, ಸೆಪ್ಟೆಂಬರ್, 26 : ರೆಫ್ರಿಜರೇಟರ್ ಹಾಗೂ ಎಲ್ ಇಡಿ ಟಿವಿಗಳನ್ನು ತುಂಬಿದ್ದ ಕ್ಯಾಂಟರ್ ಕದ್ದು ತಲೆಮರೆಸಿಕೊಳ್ಳಲು ಮುಂದಾದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ. ಆರ್ ಪೇಟೆಯ ನಿವಾಸಿ ಪ್ರದೀಪ (25) ಹಾಗೂ ಈತನ ಸ್ನೇಹಿತ ಸಿ.ಎಚ್ ವೆಂಕಟೇಶ್ ಅಲಿಯಾಸ್ ಅರುಣ (25) ಬಂಧಿತ ಆರೋಪಿಗಳು. ಇವರನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ ವಿವಿಧ ಕಂಪೆನಿಗಳ 11 ಎಲ್ ಇಡಿ ಟಿವಿ, ಫ್ರಿಜ್ ಸೇರಿದಂತೆ 2.5 ಲಕ್ಷ ಮೌಲ್ಯದ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.[ಈ ಎರಡು ಕೆಜಿ ಚಿನ್ನದಲ್ಲಿ ನಿಮ್ಮ ಸರವೂ ಇದೆಯಾ ನೋಡಿ?]
ಘಟನೆ ವಿವರ :
ಬನಶಂಕರಿಯಲ್ಲಿ ಟ್ರಾನ್ಸ್ ಪೋರ್ಟ್ ಏಜೆನ್ಸಿ ನಡೆಸುತ್ತಿದ್ದ ಗೋಕುಲ್ ದಾಸ್ ಪೈ ಅವರ ಬಳಿ ಆರೋಪಿ ಪ್ರದೀಪ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ವೆಂಕಟೇಶ್ ಮೊದಲ ಇವರ ಬಳಿಯೇ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆಯಷ್ಟೇ ಈ ಕಚೇರಿಯನ್ನು ತೊರೆದಿದ್ದನು.
ರಾಮನಗರದ ಬಳಿ ನೆಲೆಸಿದ್ದ ಇಬ್ಬರು ಆರೋಪಿಗಳು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಬೇರೆ ಯಾವ ದಾರಿ ಕಾಣದೆ ಕಳ್ಳತನದ ಕೃತ್ಯಕ್ಕೆ ಮುಂದಾದ ಇವರನ್ನು ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸರು ಒಂದು ದಿನದೊಳಗೆ ಬಂಧಿಸಿದ್ದಾರೆ.
ಏನೇನಾಯ್ತು?
ಹೆಬ್ಬಗೋಡಿ ಸಮೀಪದ ಶೋರೂಂನಿಂದ ಸೆಪ್ಟೆಂಬರ್ 21ರಂದು ಫ್ರಿಜ್ ಹಾಗೂ ಎಲ್ ಇಡಿಗಳನ್ನು ಮೈಸೂರಿಗೆ ಸಾಗಿಸಬೇಕಿತ್ತು. ಸರಕನ್ನು ಮಾಲೀಕರ ಸೂಚನೆಯಂತೆ ಮರುದಿನ ಸಾಗಿಸಲು ನಿರ್ಧರಿಸಿದ ಪ್ರದೀಪ್, ರಾತ್ರಿಯೇ ತನ್ನ ಕೆಲವು ಸಹಚರರನ್ನು ಕರೆದುಕೊಂಡು ಬಂದು ಕ್ಯಾಂಟರ್ ಕದ್ದು ಪರಾರಿಯಾಗಿದ್ದನು.
ಈ ವಿಚಾರ ತಿಳಿದ ಮಾಲೀಕರು ಸಿ. ಕೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದರು. ಬಳಿಕ ತನಿಖೆ ಕೈಗೊಂಡ ಪೊಲೀಸರು ಪ್ರದೀಪ್ ಮತ್ತು ಆತನ ಸ್ನೇಹಿತ ನಗರದ ನೈಸ್ ರಸ್ತೆಯ ಬಳಿ ಫ್ರಿಜ್ ಹಾಗೂ ಎಲ್ ಇಡಿಗಳನ್ನು ಸರಕು ಸಾಗಣೆ ಆಟೋಗೆ ಬದಲಾಯಿಸಿರುವುದನ್ನು ಸಿಸಿಟಿವಿ ಕ್ಯಾಮಾರದಿಂದ ಪತ್ತೆಮಾಡಿದರು.[ಮೊಬೈಲ್ ಕದಿಯಲು ಬಂದವನಿಗೆ ಯುವತಿಯರಿಂದ ಸರಿಯಾಗೇ ಬಿತ್ತು!]
ಸಿಸಿಟಿವಿ ಕ್ಯಾಮರದಿಂದ ಮಾಹಿತಿ ಪಡೆದ ಪೊಲೀಸರು ಸರಕು ಸಾಗಾಣೆಯ ಆಟೋ ನೀಡಿದ ಮಾಲೀಕರ ಹುಡುಕಾಟ ನಡೆಸಿ ಅವರ ಬಳಿ ವಿಚಾರಿಸಿದಾಗ ಆಟೋವನ್ನು ಅರುಣ್ ಗೆ ಬಾಡಿಗೆಗೆ ನೀಡಿರುವುದಾಗಿ ಹೇಳಿದರು. ನಂತರ ಇವರಿಬ್ಬರ ಬೆನ್ನ ಹಿಂದೆ ಬಿದ್ದ ಪೊಲೀಸರು ಫ್ರಿಜ್ ಹಾಗೂ ಎಲ್ ಇ ಡಿಗಳೊಂದಿಗೆ ಇಬ್ಬರನ್ನು ಬಂಧಿಸಿದ್ದಾರೆ.