ಪ್ರಕಾಶ್ ರಾಜ್ ಪ್ರಣಾಳಿಕೆಯಲ್ಲಿ ಟ್ರಾಫಿಕ್ ನಿಂದ ರಿಪೋರ್ಟ್ ಕಾರ್ಡ್ ತನಕ
ಬೆಂಗಳೂರು, ಏಪ್ರಿಲ್ 12: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕ್ರಮ ಸಂಖ್ಯೆ 14, ವಿಷಲ್ ನ ಗುರುತು ಅವರಿಗೆ ಸಿಕ್ಕಿದೆ. ರಾಜಾಜಿನಗರ, ಗಾಂಧೀನಗರ, ಚಾಮರಾಜಪೇಟೆ, ಶಿವಾಜಿನಗರ, ಸಿ.ವಿ.ರಾಮನ್ ನಗರ, ಸರ್ವಜ್ಞ ನಗರ, ಶಾಂತಿನಗರ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳುರಿನ ಟ್ರಾಫಿಕ್ ಸಮಸ್ಯೆ, ಶಿಕ್ಷಣ-ಆರೋಗ್ಯ, ವಸತಿ ವ್ಯವಸ್ಥೆ ಸೇರಿದಂತೆ ಜ್ವಲಂತವಾಗಿರುವ ವಿವಿಧ ವಿಚಾರಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾವ ಮಾಡಿದ್ದಾರೆ ಪ್ರಕಾಶ್ ರಾಜ್. ಹಾಗಿದ್ದರೆ ಪ್ರಣಾಳಿಕೆಯಲ್ಲಿ ಏನಿದೆ ಅನ್ನೋದನ್ನು ಒಂದೊಂದಾಗಿ ಗಮನಿಸುತ್ತಾ ಹೋಗೋಣ.
ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ ಯಾವುದು, ಎಷ್ಟು ಪ್ರಮಾಣದಲ್ಲಿ ಅನುಷ್ಠಾನ ಆಗಿದೆ ಎಂಬ ಮಾಹಿತಿಯನ್ನು ಪ್ರತಿ ವರ್ಷ ಜನರ ಮುಂದಿಡುವುದು ಆಸಕ್ತಿಕರವಾದ ಸಂಗತಿ. ದೇಶದ ವಿವಿಧೆಡೆ ಈಗಾಗಲೇ ಕೆಲವು ಸಂಸದರು ಹೀಗೆ ಮಾಡುತ್ತಿದ್ದಾರೆ. ಅದರಲ್ಲಿ ತಿರುವನಂತಪುರಂನಿಂದ ಆಯ್ಕೆ ಆದ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಮುಖರು.
ಟ್ರಾಫಿಕ್ ಕಿರಿಕಿರಿ ಮುಕ್ತ ಬೆಂಗಳೂರು
ಮುಂದಿನ ನಾಲ್ಕು ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಅನ್ನು ಸಂಪೂರ್ಣ ಸುಗಮಗೊಳಿಸಲು ಸಮಗ್ರ ಯೋಜನೆ ರೂಪಿಸಲಾಗುವುದು. ಅದು ಸಬರ್ಬನ್ ರೈಲು, ಮೆಟ್ರೋ ರೈಲು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿನೂತನವಾದ ರೀತಿಯಲ್ಲಿ ವೈಜ್ಞಾನಿಕವಾಗಿ ಹೇಳಿದ ಸಮಗ್ರ ಪರಿಹಾರ ಆಗಲಿದೆ.
ಶಿಕ್ಷಣ ಮತ್ತು ಆರೋಗ್ಯ
ಸರ್ವರಿಗೂ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ರೂಪುಗೊಳ್ಳಲು ಬೇಕಾದ ಯೋಜನೆಗಳು. ಅದನ್ನು ಕಾರ್ಯರೂಪಕ್ಕಿಳಿಸಲು ಸರಕಾರ ಮತ್ತು ಜನಸಾಮಾನ್ಯರನ್ನು ಒಳಗೊಂಡ ವಿಶೇಷ ಕಾರ್ಯಪಡೆ ರಚನೆ. ಇದಕ್ಕಾಗಿ ಬೆಂಗಳೂರಿನಲ್ಲಿ ಮಾದರಿ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಅನುದಾನದ ಮೂಲಕ ಜಾರಿಗೆ ತರಲು ಯತ್ನ.
ವಸತಿ ವ್ಯವಸ್ಥೆ
ಹತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿರುವ ಎಲ್ಲರಿಗೂ ಕೈಗೆಟುಕುವ ದರದ ವಸತಿ ವ್ಯವಸ್ಥೆ ಮಾಡಲು ವಿಶೇಷ ಯೋಜನೆ. ಈಗಾಗಲೇ ಶ್ರಮಿಕ ನಗರಗಳಲ್ಲಿ (ಕೊಳೆಗೇರಿಗಳಲ್ಲಿ) ವಾಸವಿರುವ ಎಲ್ಲರಿಗೂ ಕಾನೂನು ಬದ್ಧವಾಗಿ ನಿವೇಶನಗಳ ಹಕ್ಕುಪತ್ರ ನೀಡಲು ಆಡಳಿತಾತ್ಮಕ ಕ್ರಮ.
ಉದ್ಯೋಗದ ಹಕ್ಕು ಮತ್ತು ಉದ್ಯೋಗದ ಸ್ಥಳದಲ್ಲಿನ ಹಕ್ಕುಗಳು
ಬೆಂಗಳೂರಿನ ಸ್ಥಳೀಯರಿಗೆ ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಯ ಆವಕಾಶಗಳಿಗೆ ಯೋಜಿತ ಪ್ರಯತ್ನ ಹಾಗೂ ಎಲ್ಲ ಬಗೆಯ ಉದ್ಯೋಗ ಸ್ಥಿರತೆ, ಘನತೆ ಮತ್ತು ಭದ್ರತೆ ಒದಗಿಸಲು ಕಾನೂನಾತ್ಮಕ, ಆಡಳಿತಾತ್ಮಕ ಚೌಕಟ್ಟಿನ ನಿರ್ಮಾಣ ಜಾರಿ. ಮೊದಲ ಹಂತದ ಪ್ರಕ್ರಿಯೆ ಎರಡು ವರ್ಷಗಳಲ್ಲಿ ಜಾರಿ.
ಗುತ್ತಿಗೆ ಮತ್ತು ಅಸಂಘಟಿತ ವಲಯಗಳಲ್ಲಿರುವವರಿಗೂ ಎಲ್ಲ ಕೆಲಸಕ್ಕೆ ಸಂಬಂಧಿಸಿದ ಎಲ್ಲ ಸಂವಿಧಾನಾತ್ಮಕ ಹಕ್ಕುಗಳನ್ನು ದೊರಕಿಸಲು ಹಂತಹಂತವಾಗಿ ಕಾರ್ಯ ಯೋಜನೆ.
ಉದ್ಯೋಗದ ಸ್ಥಳಗಳು ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತವಾಗಿ ಮತ್ತು ಪ್ರೋತ್ಸಾಹದಾಯಕವಾಗಿರುವಂತಹ ವಾತಾವರಣ ರೂಪಿಸಲು ಸರಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಜೊತೆಗೂಡಿಸಿಕೊಂಡು ಪರಿಣಾಮಕಾರಿ ಹೆಜ್ಜೆಗಳು ಇಡಲಾಗುವುದು.
ಸೌಹಾರ್ದ, ಸಹಬಾಳ್ವೆಯ ಅಶಯಗಳಿಗೆ ಕಟಿಬದ್ಧ
ವಿವಿಧ ಜನ ಸಮುದಾಯಗಳ ಮಧ್ಯೆ ದ್ವೇಷದ ಬದಲು ಪ್ರೀತಿ, ಅಸಹನೆಯ ಬದಲು ಪರಸ್ಪರ ಕೊಡುಕೊಳ್ಳುವಿಕೆ ಬೆಳೆಸಲು ಹಾಗೂ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಬೇಕಾದ 'ವೈವಿಧ್ಯತೆಯಲ್ಲಿ ಏಕತೆ'ಯ ಮಂತ್ರದ ಸಾಕಾರಕ್ಕಾಗಿ ವಿನೂತನ ಕಾರ್ಯಕ್ರಮಗಳ ಜಾರಿ.
ಹೆಸರಿಗೆ ತಕ್ಕಂತಹ ಉದ್ಯಾನ ನಗರಿ ಆಗಿಸಲು ಮುಂದಡಿ
ಸ್ವಚ್ಛತೆ ಮತ್ತು ಹಸಿರು ನಗರಾದ್ಯಂತ ವ್ಯಾಪಿಸಲು ವಿಶೇಷ ಯೋಜನೆ, ವಿಶೇಷ ಅನುದಾನ ಮತ್ತು ವಿಶೇಷ ಆಂದೋಲನಗಳ ಅಗತ್ಯವಿದೆ. ಬೆಂಗಳೂರಿನ ಎಲ್ಲ ಜನಪ್ರತಿನಿಧಿಗಳು ಸೇರಿ ಅದನ್ನು ಸಾಧ್ಯ ಮಾಡಿದರೆ ನಮ್ಮ ಬ್ರ್ಯಾಂಡ್ ಬೆಂಗಳೂರು ವಿಶ್ವಕ್ಕೆ ಮಾದರಿಯಾಗುವ ನಗರವಾಗುತ್ತದೆ. ಈ ಕೆಲಸದಲ್ಲಿ ನಿರಂತರ ವೇಗವರ್ಧಕವಾದ ಪಾತ್ರ ನನ್ನದಾಗಿರುತ್ತದೆ. ಅಗತ್ಯ ಇರುವೆಡೆ ಎಚ್ಚರಿಕೆಯ ಚಾಟಿ ಬೀಸುತ್ತಾ ಐದು ವರ್ಷದೊಳಗೆ ಕ್ಲೀನ್-ಗ್ರೀನ್ ಬೆಂಗಳೂರನ್ನು ಸಾಕಾರಗೊಳಿಸುತ್ತೇವೆ.
ಸಾಮಾಜಿಕ ನ್ಯಾಯದ ಪಾಲನೆ
ಮಹಿಳೆಯರು ಸೇರಿದಂತೆ ಎಲ್ಲ ಬಗೆಯ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಸಮಾನ ಅವಕಾಶ ಮತ್ತು ಸುರಕ್ಷತೆಯನ್ನು ಖಾತ್ರಿಗೊಳಿಸಲು ಸಂವಿಧಾನಾತ್ಮಕವಾದ ಮತ್ತು ಶಾಸನಾತ್ಮಕವಾದ ಕ್ರಮಗಳ ಜಾರಿಗೆ ಒತ್ತಾಸೆಯಾಗಿ ನಿಲ್ಲುವುದು ಹಾಗೂ ಪ್ರಜ್ಞಾಪೂರ್ವಕವಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಿಸುವುದು.
ರಾಜ್ಯಗಳಿಗೆ ಹೆಚ್ಚಿನ ಅಧಿಕಾರ-ನಿಜವಾದ ಫೆಡರಲ್ ಮಾದರಿ ಸರಕಾರ
ಸಂಸತ್ ಸದಸ್ಯನಾಗಿ ಅಧಿಕಾರವು ಸಂಸತ್ತಿನಲ್ಲಿ ಕೇಂದ್ರಿತವಾಗಬೇಕೆಂದು ಬಯಸುವುದಿಲ್ಲ. ಈ ಬೃಹತ್ ದೇಶವು ಅಪೂರ್ವ ರೀತಿಯಲ್ಲಿ ಬೆಳವಣಿಗೆ ಹೊಂದಬೇಕೆಂದರೆ, ರಾಜ್ಯಗಳು ಗಟ್ಟಿ ಆಗಬೇಕು. ರಾಜ್ಯಗಳ ನಡುವೆ ಬಂಧ ಗಟ್ಟಿಯಾಗಬೇಕು. ಅದಕ್ಕಾಅಗಿ ಆಧಿಕಾರ ಮತ್ತು ಅನುದಾನದ ವಿಕೇಂದ್ರೀಕರಣ ಆಗಬೇಕು. ಕರ್ನಾಟಕವೂ ಸೆರಿದಂತೆ ಎಲ್ಲ್ ರಾಜ್ಯಗಳಿಗೂ ಹೆಚ್ಚಿನ ಅಧಿಕಾರ ಪ್ರಾಪ್ತವಾಗಲು ಅಗತ್ಯ ಶಾಸನಾತ್ಮಕ ಬದಲಾವಣೆಗೆ ಸಂಸತ್ತಿನ ಮೂಲಕ ಪ್ರಯತ್ನ.
ಜವಾಬ್ದಾರಿಯುತ, ಸಮರ್ಥ ಸಂಸದ
ಸಮರ್ಥ ಸಂಸತ್ ಸದಸ್ಯನಾಗಿ, ತಜ್ಞರು ಮತ್ತು ಜನರ ಅಭಿಪ್ರಾಯ ಪಡೆದು, ಸಂಸತ್ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ದೇಶದ ಒಳಿತಿಗಾಗಿ ಸದಾ ಚಿಂತಿಸುತ್ತಾ ಸಂಸತ್ತಿನ ಮೂಲಕ ಬದಲಾವಣೆಯ ಎಲ್ಲ ಮಾರ್ಗಗಳನ್ನು ತೆರೆಯಲು ಪರಿಣಾಮಕಾರಿ ಮಧ್ಯಪ್ರವೇಶ.
ರಿಪೋರ್ಟ್ ಕಾರ್ಡ್
ಪ್ರಣಾಳಿಕೆಯ ಅನುಷ್ಠಾನದಲ್ಲಿ ನಿಟ್ಟಿನಲ್ಲಿ ಪ್ರತಿ ವರ್ಷ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದಿಡಲಾಗುವುದು.