ರೌಡಿ ಕುಣಿಗಲ್ ಗಿರಿ ಬರ್ತ್ ಡೇಗೆ ಭರ್ಜರಿ ತಯಾರಿ; ಪೊಲೀಸರ ರೇಡ್
ಬೆಂಗಳೂರು, ಜೂನ್ 16: ಸಿಸಿಬಿಯಿಂದ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಇರುವ ಹೆಸರಾಂತ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದು, ಡ್ಯಾನ್ಸ್ ಬಾರ್ ನ 266 ಕಲಾವಿದರನ್ನು ರಕ್ಷಿಸಲಾಗಿದೆ. ಇಷ್ಟು ಮಂದಿ ಅಲ್ಲಿ ಸೇರಿದ್ದು ರೌಡಿ ಕುಣಿಗಲ್ ಗಿರಿಯ 34ನೇ ವರ್ಷದ ಜನ್ಮ ದಿನದ ಆಚರಣೆ ಸಲುವಾಗಿ.
ಆದರೆ, ಅಲ್ಲೇ ಪಕ್ಕದ ಕಟ್ಟಡಕ್ಕೆ ಹಾರಿಕೊಂಡು ಕುಣಿಗಲ್ ಗಿರಿ ಪರಾರಿಯಾಗಿದ್ದಾನೆ. ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮುನ್ನವೇ ಹೀಗಾಗಿದ್ದು, ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಡಿಸಿಪಿ (ಅಪರಾಧ) ಎಸ್.ಗಿರೀಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. 266 ಮಹಿಳೆಯರನ್ನು ಕರೆತಂದು, ತನ್ನ ಸ್ನೇಹಿತರ ಎದುರು ನೃತ್ಯ ಮಾಡುವಂತೆ ಒತ್ತಾಯಿಸಿದ್ದ.
ತಂದೆ-ತಾಯಿ ಜೊತೆ ಎಸ್ಐಟಿ ಕಚೇರಿಗೆ ಬಂದ ಕುಣಿಗಲ್ ಗಿರಿ
ಆ ಮಹಿಳೆಯರ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು, ರಾಜ್ಯ ಸರಕಾರ ನಡೆಸುವ ಮಹಿಳಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇನ್ನು ಆ ಬಾರ್ ಮತ್ತು ರೆಸ್ಟೋರೆಂಟ್ ನ ಬೇಸ್ ಮೆಂಟ್ ಕೂಡ ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಮೂರು ಅಂತಸ್ತಿನಲ್ಲಿರುವ ಏಳು ಹಾಲ್ ಗಳಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.
ರೆಸಿಡೆನ್ಸಿ ರಸ್ತೆಯಲ್ಲಿ ಇರುವ ಟೈಮ್ಸ್ ಬಾರ್ ಮತ್ತು ರೆಸ್ಟೋರೆಂಟ್ ಗೆ ಗಿರಿ ತನ್ನ ಅಂಡರ್ ವರ್ಲ್ಡ್ ಗೆಳೆಯರನ್ನು ಹುಟ್ಟು ಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದ. ಇತ್ತೀಚಿನ ವರ್ಷಗಳಲ್ಲಿ ರೌಡಿಯೊಬ್ಬ ಇತರ ರೌಡಿಗಳಿಗಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಅತಿ ದೊಡ್ಡ ಪಾರ್ಟಿ ಇದಾಗಿತ್ತು.
ಗಿರೀಶ್ ಎಚ್.ವಿ. ಅಲಿಯಾಸ್ ಕುಣಿಗಲ್ ಗಿರಿ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನವನು. ದರೋಡೆ, ಡಕಾಯಿತಿ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಹೀಗೆ ತೊಂಬತ್ತರಷ್ಟು ಕೇಸುಗಳು ಆತನ ವಿರುದ್ಧ ಇವೆ. ಹೈಸ್ಕೂಲ್ ಗೆ ಶಾಲೆ ಬಿಟ್ಟಿರುವ, ಅರ್ಚಕರ ಮಗನಾಗಿರುವ ಗಿರಿಯ ಅಪರಾಧಿ ಬದುಕು ದರೋಡೆಯಿಂದ ಆರಂಭವಾಗಿತ್ತು.