ಬೆಂಗಳೂರಿನ ಜಾಗೃತ್ ಕರಾಟೆಯಲ್ಲಿ ಜಗತ್ತಿಗೇ ಎರಡನೇ ರ್ಯಾಂಕ್
ಬೆಂಗಳೂರು, ಜೂನ್ 7: ಬೆಂಗಳೂರಿನ ಬಾಲ ಪ್ರತಿಭೆ ಎಂ.ಪಿ.ಜಾಗೃತ್ ವಿಶ್ವದ ನಂ.2 ಕರಾಟೆ ಪಟುವಾಗಿ ಹೊರಹೊಮ್ಮಿದ್ದಾನೆ. ಜಾಗೃತ್ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಕರಾಟೆ 1 ಯೂತ್ ಲೀಗ್ 14 ವರ್ಷಗಳಿಗಿಂತ ಕಿರಿಯರ ಪುರುಷರ ಕತಾ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾನೆ.
ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಮೂಲಕ ಜಾಗೃತ್ ವಿಶ್ವದಲ್ಲಿ ನಂ.2 ಸ್ಥಾನ ಪಡೆದಿದ್ದಾನೆ. ಈಗ ಜಾಗೃತ್ 74 ದೇಶಗಳ 1,870 ಅಭ್ಯರ್ಥಿಗಳು ಭಾಗವಹಿಸಿದ್ದು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಭಾರತೀಯನೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾನೆ.
ಜಾಗೃತ್ ಹಲವು ಜಾಗತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಕಳೆದ ವರ್ಷ ಜಾಗೃತ್ ಕ್ರೊಯೇಷಿಯಾದ ಉಮಾಗ್ನಲ್ಲಿ ನಡೆದ 10ನೇ ವರ್ಲ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಚಿನ್ನದ ಪದಕ(ಕತಾ)ಗೆದ್ದಿದ್ದಾನೆ. ಅಲ್ಲದೆ ಅಲ್ಲಿಯೇ ನಡೆದ 10ನೇ ವರ್ಲ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಕುಮಿತೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ; ಈ ಎರಡೂ ಪದಕಗಳನ್ನು ಗೆಲ್ಲುವ ಮೂಲಕ ಈ ಎರಡೂ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಆಟಗಾರ ಎನಿಸಿದ್ದಾನೆ.
ಜಾಗೃತ್ ಮಾತನಾಡಿ, ವಿಶ್ವದಲ್ಲಿ ನಂ.2ನೇ ಸ್ಥಾನದಲ್ಲಿರುವುದು ನನಗೆ ಬಹಳ ಸಂತೋಷ ತಂದಿದೆ. ಆದರೆ ಒಲಂಪಿಕ್ಸ್ನಲ್ಲಿ ಭಾಗವಹಿಸಿ ನನ್ನ ದೇಶಕ್ಕೆ ಪದಕ ಗೆದ್ದು ತರುವುದು ನನ್ನ ಕನಸು. ಭಾರತದಲ್ಲಿ ಅಷ್ಟು ಮಾನ್ಯತೆ ಪಡೆಯದ ಈ ಮಾರ್ಷಲ್ ಆರ್ಟ್ಸ್ ಅನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಬಯಸಿದ್ದೇನೆ' ಎಂದರು.
ಜಾಗೃತ್ ತಂದೆ ಝೆನ್ ಸ್ಪೋಟ್ರ್ಸ್ ಅಂಡ್ ಫಿಟ್ನೆಸ್ ಮಾಸ್ಟರ್ ಟ್ರೈನರ್ ಮತ್ತು ಅಂತಾರಾಷ್ಟ್ರೀಯ ಕರಾಟೆ ಗೋಲ್ಡ್ ಮೆಡಲಿಸ್ಟ್ ಶ್ರೀ ಎಂ.ಜಿ. ಪ್ರಸಾದ್ ಅವರಿಗೆ ಈ ಪ್ರಯಾಣದಲ್ಲಿ ಉತ್ತೇಜನಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.
ಎಂ.ಪಿ.ಜಾಗೃತ್ ಅಸಂಖ್ಯ ಸರಣಿ ಪ್ರಶಸ್ತಿಗಳನ್ನು ಗೆದ್ದಿದ್ದು ಮಕ್ಕಳಲ್ಲಿ ಕರಾಟೆಯ ಹೊಸ ಭರವಸೆಯಾಗಿದ್ದಾನೆ. ಜಾಗೃತ್ ತನ್ನ ಕರಾಟೆಯ ಆಸಕ್ತಿ ಕರಾಟೆ ಆಧರಿತ ಚಿತ್ರಗಳಿಂದ ಮೂಡಿಬಂದಿತು ಎನ್ನುತ್ತಾನೆ. ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಅಸಂಖ್ಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾನೆ.