ಬ್ರೇಕಿಂಗ್ ನ್ಯೂಸೋ, ತಲೆ ಬ್ರೇಕ್ ಮಾಡುವಂಥ ಸುದ್ದಿಯೋ!
ಬೆಂಗಳೂರು, ಜನವರಿ 16 : ಕಾವೇರಿ ಚಿತ್ರಮಂದಿರದ ಬಳಿ ಬಿಟ್ಟುಹೋಗಲಾಗಿದ್ದ ಬ್ಯಾಗೊಂದು ಬೆಂಗಳೂರಿನ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದು ದಿಟ. ಬಾಂಬ್ ಇರಬಹುದೆಂದು ಊಹಿಸಲಾಗಿದ್ದ ಬ್ಯಾಗಿನಲ್ಲಿ ಇದ್ದಿದ್ದು ಒಂದಿಷ್ಟು ವೈರು ಮತ್ತು 30 ಎಂಎಲ್ ಮದ್ಯವಿದ್ದ ಬಾಟಲಿ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರೀಕ್ಷಿಸಿದಾಗ ಅದು ಹುಸಿ ಬಾಂಬ್ ಎಂದು ಸಾಬೀತಾಯಿತಾದರೂ ಈ ಘಟನೆಯಿಂದ ನಾವು ಕಲಿಯಬೇಕಾದ ಪಾಠ ಇದ್ದೇಇದೆ.
ಸಂಕ್ರಾಂತಿ ಬೆಳಗಿನಂದು ಸುದ್ದಿಯ ಸ್ಫೋಟವಾಗುತ್ತಿದ್ದಂತೆ ಊಹಾಪೋಹಗಳ ಬಾಂಬಿಗೂ ಬೆಂಕಿ ಹೊತ್ತಿಕೊಂಡಿತ್ತು. ಟಿವಿ ಸುದ್ದಿ ವಾಹಿನಿಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಇದರದೇ ಸುದ್ದಿ. ಸುದ್ದಿಗೆ ಹಲವಾರು ಮಗ್ಗಲುಗಳು. ಎಲ್ಲರೂ ತಮಗೆ ಮನಬಂದಂತೆ ಊಹಿಸಲು ಆರಂಭಿಸಿದರು. ಇದಕ್ಕೆ ತುಪ್ಪ ಸುರಿದಿದ್ದು ಟಿವಿ ವಾಹಿನಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಜನರಲ್ಲಿ ಆತಂಕ ಮೂಡದೆ ಇರುತ್ತದೆಯೆ?
ಇದು ಅಲ್ ಖೈದಾದ್ದೇ ಕೃತ್ಯವಿರಬಹುದು ಎಂದು ಟಿವಿ ಚಾನಲ್ಲುಗಳು ಒದರಿದವು. ಬೆಂಗಳೂರಿನಲ್ಲಿ ಭಾರೀ ಹೈಅಲರ್ಟ್ ಘೋಷಿಸಲಾಗಿದೆ ಎಂದು ಕೆಲ ಪೊಲೀಸರು ಕೂಡ ಘೋಷಿಸಿದರು. ಇಂಥ ಸಂದರ್ಭದಲ್ಲಿ ಎಚ್ಚರ ವಹಿಸಬೇಕಾಗಿರುವುದು ಅಗತ್ಯವಾದರೂ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕಾಗಿದ್ದುದು ಕೂಡ ಅಷ್ಟೇ ಅಗತ್ಯವಾಗಿತ್ತು. [ಬೆಂಗಳೂರನ್ನು ಬೆಚ್ಚಿಸಿದ ಬಾಂಬ್ ವದಂತಿ!]
ಇತ್ತೀಚಿನ ಆತಂಕದ ಕ್ಷಣಗಳು
ಕಳೆದ ಮೂರು ವಾರಗಳಲ್ಲಿ ಬೆಂಗಳೂರು ಹಲವಾರು ಆತಂಕದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೆಲ ದಿನಗಳ ಹಿಂದೆ, ಅಲ್ ಖೈದಾಗೆ ಸಹಕಾರ ಕೊಡುತ್ತಿದ್ದಾನೆಂದು ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು ಮೌಲ್ವಿಯನ್ನು ಬಂಧಿಸಿದರು. ಅಲ್ ಖೈದಾ ನಗರದಲ್ಲಿ ತನ್ನ ಘಟಕ ಸ್ಥಾಪಿಸಿದೆ ಎಂದು ಕೆಲ ವಾಹನಿಗಳು ಸುದ್ದಿ ಬಿತ್ತರಿಸಿದವು. ಇದರಿಂದ ಬೆಂಗಳೂರಿನ ನಾಗರಿಕರು ಬೆಚ್ಚಿಬಿದ್ದಿದ್ದು ಸತ್ಯ. [ಅಲ್ ಖೈದಾ ಪರ ಪ್ರಚಾರ : ಬೆಂಗಳೂರಲ್ಲಿ ಮೌಲ್ವಿ ಬಂಧನ]
ನಂತರ, ಬೆಂಗಳೂರು ಅಂತಾರಾಷ್ಟ್ರೀ ವಿಮಾನ ನಿಲ್ದಾಣದಲ್ಲಿ ಹಲ ಗಂಟೆಗಳ ಕಾಲ ನಿಲ್ಲಿಸಿ ಹೋಗಿದ್ದ ಕಾರೊಂದು ಆತಂಕ ಸೃಷ್ಟಿಸಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಧಾವಿಸಿ ಕೂಲಂಕಷವಾಗಿ ತಪಾಸಣೆ ನಡೆಸಿದ ನಂತರ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿತ್ತು. ಕಾರಿನ ಮಾಲಿಕರು ತನ್ನ ಸ್ನೇಹಿತರನ್ನು ಬೀಳ್ಕೊಡಲೆಂದು ಸುಮಾರು ಹೊತ್ತು ಅಲ್ಲಿಯೇ ನಿಲ್ಲಿಸಿದ್ದು ಇದಕ್ಕೆಲ್ಲ ಕಾರಣವಾಗಿತ್ತು. [ಐಎಸ್ ಐಎಸ್ ಸೇರೋದ್ರಲ್ಲಿ ಕರ್ನಾಟಕದವರೇ ಫಸ್ಟ್!]
ವಾರದ ಹಿಂದೆ, ವಿಕಾಸಸೌಧದಲ್ಲಿ ಎನ್ಎಸ್ಜಿ ಕಮಾಂಡೋಗಳು ಅಣಕು ಕಾರ್ಯಾಚರಣೆ ನಡೆಸಿದ್ದರು. ಏನು ನಡೆಯುತ್ತಿದೆ ಎಂದೇ ತಿಳಿಯದ ದಾರಿಹೋಕರು ಗಲಿಬಿಲಿಗೊಂಡಿದ್ದರು, ಏನೋ ಘಟಿಸಿದೆ ಎಂದು ಆತಂಕದಿಂದ ವೀಕ್ಷಿಸಿದ್ದರು. ಇದು ನಡೆದ ಕೆಲವೇ ದಿನಗಳಲ್ಲಿ ಕಾವೇರಿ ಚಿತ್ರಮಂದಿರದ ಬಳಿ ಸಿಕ್ಕ ಚೀಲ ಊಹಾಪೋಹಕ್ಕೆ ಕಾರಣವಾಯಿತು.
ಪೊಲೀಸರಿಗೆ ಇದು ಬಲು ಸಂದಿಗ್ಧ ಸಂದರ್ಭ. ಯಾವ ಘಟನೆಯನ್ನೂ ಲಘುವಾಗಿ ಪರಿಗಣಿಸುವಹಾಗಿಲ್ಲ. ತ್ವರಿತವಾಗಿ ಕಾರ್ಯಾಚರಣೆ ನಡೆಸುವುದಲ್ಲದೆ, ಜನರಲ್ಲಿ ಆತಂಕ ದೂರವಾಗುವಂತೆ ವರ್ತಿಸಬೇಕು. ಆದರೆ, ಈ ಘಟನೆಯನ್ನು ಭಯೋತ್ಪಾದಕ ಕೃತ್ಯದೊಡನೆ ಲಿಂಕ್ ಮಾಡಿ ಜನರಲ್ಲಿ ಭಯ ಹುಟ್ಟುವಂತೆ ಮಾಡಿದ್ದು ಮಾಧ್ಯಮಗಳು.
ಮಾಧ್ಯಮಗಳು ಸುದ್ದಿಗೆ ಅನಗತ್ಯ ರೆಕ್ಕೆಪುಕ್ಕ ಹಚ್ಚದೆ, ತಾಳ್ಮೆಯಿಂದ ವರದಿ ಮಾಡುವತ್ತ ಗಮನ ಹರಿಸಬೇಕು. ಟಿವಿಯಲ್ಲಿ ಬಂದಿದ್ದನ್ನು ಜನ ಕೂಡಲೆ ನಂಬುವುದರಿಂದ ಮಾಧ್ಯಮಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ವರದಿಗಾರಿಕೆ ಮಾಡಬೇಕು ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದರು.