ಪ್ರಿಯಕರನ ಬಿಡಲೊಲ್ಲೆ ಎಂದ ಹೆಂಡತಿ, ಗಂಡ ಮಾಡಿದ್ದೇನು?
ಬೆಂಗಳೂರು, ಡಿಸೆಂಬರ್, 10 : ಹೆಂಡತಿಯ ಅನೈತಿಕ ಸಂಬಂಧದಿಂದ ನೊಂದ ಗಂಡ ಆಕೆ ಮೇಲೆ ಹಲ್ಲೆ ಮಾಡಿ ನಂತರ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ನಡೆದ ಘಟನಾವಳಿಗಳನ್ನು ಮೊಬೈಲ್ ನಲ್ಲಿ ನೊಂದ ಪತಿರಾಯ ವಿಡಿಯೋ ಮಾಡಿ ಇಟ್ಟಿದ್ದಾನೆ. ಕಳೆದ ತಿಂಗಳು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿ ನಿವಾಸಿ ಕ್ಯಾಬ್ ಚಾಲಕ ವೆಂಕಟೇಶ್(29) ಆತ್ಮಹತ್ಯೆ ಮಾಡಿಕೊಂಡವರು. ನನ್ನ ಹೆಂಡತಿ ಪರ ಪುರುಷನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಗೊತ್ತಾಗಿದೆ. ನಾನು ಎಷ್ಟು ಬಾರಿ ಬುದ್ಧಿವಾದ ಹೇಳಿದರೂ ಆಕೆ ಸರಿಯಾಗಿಲ್ಲ. ಆಕೆಯನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದನ್ನು ರೆಕಾರ್ಡ್ ಮಾಡಿ ಇಡಲಾಗಿದೆ.[ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]
ವೆಂಕಟೇಶ್ ಮತ್ತು ವಿಜಯಲಕ್ಷ್ಮಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ವಿಜಯಲಕ್ಷ್ಮಿ, ಶಿವು ಎಂಬಾತನ ಜತೆ ಅನೈತಿಕ ಸಂಬಂಧ ಬೆಳೆಸಿದ್ದಳು. ವಿಚಾರ ವೆಂಕಟೇಶ್ ಗೆ ಗೊತ್ತಾಗಿದೆ. ನೊಂದ ವೆಂಕಟೇಶ್ ಆಕೆಯನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ.
ನವೆಂಬರ್ 26 ರಂದು ಗಂಡ ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಹೆಂಡತಿಯ ಮೇಲೆ ತೀವ್ರ ತೆರನಾಗಿ ಹಲ್ಲೆ ಮಾಡಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ತಾನು ಸೀರೆಯಿಂದ ನೇಣು ಹಾಕಿಕೊಂಡಿದ್ದಾನೆ.[ಪತ್ನಿಯನ್ನು ಕಿಡ್ನಾಪ್ ಮಾಡಿದ ಮಾಜಿ ಪ್ರಿಯಕರ!]
ಕೆಲ ಸಮಯದ ನಂತರ ವಿಜಯಲಕ್ಷ್ಮಿಗೆ ಪ್ರಜ್ಞೆ ಬಂದಿದೆ. ಈ ವೇಳೆ ಗಂಡನ ಶವ ನೇತಾಡುತ್ತಿರುವುದನ್ನು ನೋಡಿ ಕೂಡಲೇ ಶವವನ್ನು ಇಳಿಸಿ ತವರು ಮನೆಗೆ ಮಕ್ಕಳನ್ನು ಕರೆದುಕೊಂಡು ಬಂದಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ವೆಂಕಟೇಶ್ ತಮ್ಮ ದೂರು ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸರು ವಿಜಯಲಕ್ಷ್ಮಿ ಪ್ರಿಯಕರ ಶಿವುನನ್ನು ಬಂಧಿಸಿದ್ದಾರೆ.