ಅಕ್ಷಯ ತೃತೀಯಾ: ಚಿನ್ನ ಖರೀದಿ ಮಾಡಿದವರು ಏನು ಹೇಳಿದರು?
ಬೆಂಗಳೂರು, ಮೇ 09: ಅಕ್ಷಯ ತೃತೀಯಾದಂದು ಚಿನ್ನ ಕೊಂಡರೆ ದ್ವಿಗುಣವಾಗುತ್ತದೆಂದು ನಂಬಿದವರಿಗೆ, ದುಡ್ಡಿಲ್ಲದೆ ಹಿಂದೇಟು ಹಾಕಿದವರಿಗೆ, ಇದೆಲ್ಲ ಮೂಢನಂಬಿಕೆ ಅಂದುಕೊಂಡವರಿಗೆಲ್ಲ ಅಕ್ಷಯ ತೃತೀಯಾ ಹಬ್ಬದ ಹಾರ್ದಿಕ ಶುಭಾಶಯಗಳು.
ಪ್ರತಿ ವರ್ಷದಂತೆ ಈ ಬಾರಿಯೂ ಚಿನ್ನ ಖರೀದಿ ಭರಾಟೆ ಜೋರಾಗಿಯೇ ಇದೆ. ದರ ಹೆಚ್ಚಳದ ಬಿಸಿ, ಬೇಸಿಗೆ ಬಿಸಿ ಗ್ರಾಹಕರನ್ನು ಕಾಡುತ್ತಿದ್ದರೂ ಚಿನ್ನ ಖರೀದಿ ಮೇಲೆ ಪರಿಣಾಮ ಬೀರಿಲ್ಲ. ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ನುಕುನೂಗ್ಗಲು ಕಡಿಮೆ ಇತ್ತು.
ಬಸವ ಜಯಂತಿ ಮತ್ತು ಅಕ್ಷಯ ತೃತೀಯಾ ಎರಡೂ ಒಟ್ಟಿಗೆ ಬಂದಿದ್ದು ಜನರಿಗೆ ಸಾರ್ವಜನಿಕ ರಜೆಯ ಕೊಡುಗೆಯೂ ಸಿಕ್ಕಿದೆ. ಜಯನಗರ, ಎಂಜಿ ರಸ್ತೆ, ಕೋರಮಂಗಲ, ಮಲ್ಲೇಶ್ವರಂ ಸೇರಿದಂತೆ ನಗರದ ಚಿಕ್ಕ ಚಿಕ್ಕ ಆಭರಣ ಮಳಿಗೆಗಳಿಂದ ಹಿಡಿದು ದೊಡ್ಡ ಅಂಗಡಿಗಳಲ್ಲೂ ಜನರು ಚಿನ್ನಾಭರಣ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡುಬಂತು.[ಅಕ್ಷಯ ತದಿಗೆ : ಆನ್ ಲೈನ್ ಚಿನ್ನ ಖರೀದಿ ಜೋರು!]
ಜಯನಗರ 3 ನೇ ಹಂತದ ಸುತ್ತಮುತ್ತಲಿರುವ ಜೊಯಾಲುಕ್ಕಾಸ್, ಸುಲ್ತಾನ್, ಆರ್ ಆರ್ ಗೋಲ್ಡ್ ಪ್ಯಾಲೇಸ್, ಭೀಮಾ, ಕಲ್ಯಾಣ್, ಮಲಬಾರ್ ಎಲ್ಲ ಮಳಿಗೆಗಳಲ್ಲೂ ಗ್ರಾಹಕರಿದ್ದರು. ಮಹಿಳೆಯರೇ ಹೆಚ್ಚಿದ್ದದ್ದು ವಿಶೇಷ. ಚಿನ್ನ ಖರೀದಿ ಭರಾಟೆಯ ಕೆಲ ತುಣುಕುಗಳು ನಿಮ್ಮ ಮುಂದಿವೆ.
ನಿಮ್ಮನಗರದ ಚಿನ್ನದ ದರ ಎಷ್ಟಿದೆ?
ಮಗಳಿಗೋಸ್ಕರ ಖರೀದಿ ಮಾಡಿದ್ದೇನೆ
20 ವರ್ಷಗಳಿಂದ ಅಕ್ಷಯ ತೃತೀಯಾ ದಿನ ಖರೀದಿ ಮಾಡುತ್ತಿದ್ದೇನೆ. ನನ್ನ ಮಗಳಿಗೋಸ್ಕರ ಖರೀದಿ ಮಾಡಿದ್ದೇನೆ. ಮನೆಗೆ ತೆರಳಿ ಪೂಜೆ ಮಾಡಿ ಆಭರಣವನ್ನು ಧರಿಸುತ್ತೇನೆ.
ಅಕ್ಷಯ ತೃತೀಯಾ ಸಮೃದ್ಧಿ ಸಂಕೇತ
ಅಕ್ಷಯ ತೃತೀಯಾ ಸಮೃದ್ಧಿ ಸಂಕೇತ. ಖರೀದಿ ಮಾಡಿದ್ದು ಒಂದಕ್ಕೆ ಎರಡರಷ್ಟು ಆಗುತ್ತೆ ಎಂಬ ನಂಬಿಕೆ ನನಗೆ ಇದೆ. ಉಂಗುರ ತೆಗೆದುಕೊಂಡಿದ್ದೇನೆ. ಖರೀದಿ ಮಾಡಿದ ಆಭರಣವನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತೇನೆ -ಆಶಾ, ಗೃಹಿಣಿ
ಶೇ. 20 ಅಧಿಕ ವ್ಯಾಪಾರದ ನಿರೀಕ್ಷೆ
ಕಳೆದ ವರ್ಷಕ್ಕಿಂತ ಶೇ. 20 ಅಧಿಕ ವ್ಯಾಪಾರ ನಿರೀಕ್ಷೆ ಹೊಂದಿದ್ದೇವೆ. ದರ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಾರಣ, ಆನ್ ಲೈನ್ ಮಾರುಕಟ್ಟೆ ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರಿಲ್ಲ, ಅಕ್ಷಯಾ ತೃತೀಯಾ ಹಿನ್ನೆಲೆಯಲ್ಲಿ ರಿಯಾಯಿತಿ ಆಫರ್ ಗಳನ್ನು ನೀಡಲಾಗಿದೆ. - ಭೀಮಾ ಜ್ಯುವೆಲರ್ಸ್ ಮ್ಯಾನೇಜರ್
ಇದೊಂದು ಮೂಢನಂಬಿಕೆ
ನನಗೆ ಅಕ್ಷಯ ತೃತೀಯಾ ಎಂಬುವಂಥದ್ದೇನಿಲ್ಲ. ಇದೊಂದು ಮೂಢನಂಬಿಕೆ, 12ನೇ ಶತಮಾನದಲ್ಲೆ ಇಂಥ ಮೂಢನಂಬಿಕೆ ಹೋಗಲಾಡಿಸಬೇಕು ಎಂದು ಹೇಳಿದ್ದ ಬಸವಣ್ಣನವರ ಜನ್ಮದಿನ ಇಂದು. ವಿದ್ಯಾವಂತರು ಸಹ ವ್ಯಾಪಾರಿಗಳ ತಂತ್ರಕ್ಕೆ ಬಲಿಯಾಗುತ್ತಿದ್ದಾರೆ.- ನಾಗೇಶ್
ಕುಟುಂಬದವರ ಒತ್ತಾಯ
ರಿಂಗ್ ಮತ್ತು ಚಿನ್ನದ ನಾಣ್ಯ ಖರೀದಿ ಮಾಡಿದ್ದು ಉತ್ತಮ ಪರಿಣಾಮ ಸಿಕ್ಕಿದೆ. ದರ ಏರಿಕೆಯಾಗಿದ್ದರೂ ಕುಟುಂಬದವರ ಒತ್ತಡಕ್ಕೆ ಮಣಿದು ಖರೀದಿ ಮಾಡಲೇಬೇಕಿದೆ. ದರ ಕಡಿಮೆ ಇದ್ದರೆ ಇನ್ನು ಸ್ಪಲ್ಪ ಜಾಸ್ತಿ ಖರೀದಿ ಮಾಡುತ್ತಿದ್ದೆವು-ಮಂಜುನಾಥ, ಉದ್ಯಮಿ
ಸಂಪ್ರದಾಯವಾಗಿದೆ
ಇದೊಂದು ಪ್ರತಿಷ್ಠೆ ಪ್ರಶ್ನೆ ಮತ್ತು ಸಂಪ್ರದಾಯವಾಗಿ ಮಾರ್ಪಟ್ಟಿದೆ. ಅಗತ್ಯವಿರಲಿ, ಬಿಡಲಿ ಚಿನ್ನದ ವ್ಯಾಮೋಹಕ್ಕೆ ಸಿಕ್ಕು ಕೂಡಿಟ್ಟಿದ್ದ ಅಲ್ಪ ಹಣವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂಬುದು ಹೆಸರೇಳಲು ಇಚ್ಛಿಸದ 'ಪತಿರಾಯ'ರೊಬ್ಬರ ಮಾತು.
ಮೊದಲೆ ಬುಕಿಂಗ್
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಗ್ರಾಹಕರು ಮೊದಲೇ ಬುಕಿಂಗ್ ಮಾಡಿದ್ದರು. ಸಮಯದ ಅಭಾವವಿದ್ದವರು ಕೂಪನ್ ಆಧಾರದಲ್ಲಿ ಆಭರಣ ಖರೀದಿ ಮಾಡಿ ಬಲು ವೇಗದಿಂದಲೇ ಮಾಯವಾಗುತ್ತಿದ್ದರು.