ಖತರ್ನಾಕ್ ಜಾಕಿ, ಐವಿನ್, ಕರಿಯಾಗೆ ಪೊಲೀಸರ 'ಆತಿಥ್ಯ'
ಬೆಂಗಳೂರು, ಡಿ. 15: ನಗರ ಪೊಲೀಸ್ ಆಯುಕ್ತರ ಆದೇಶದಂತೆ ಕೇಂದ್ರ ಪೊಲೀಸರು ಮೂವರು ರೌಡಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಕೇಶ್ ಅಲಿಯಾಸ್ ಜಾಕಿ (30), ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಐವಿನ್ ಕುಮಾರ್ ಅಲಿಯಾಸ್ ಐವಿನ್ (27) ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಶಾಂತ ಅಲಿಯಾಸ್ ಕರಿಯಾ (28) ಬಂಧಿತ ರೌಡಿಗಳು.
ಜಾಕಿ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನು ಕುಖ್ಯಾತ ರೌಡಿ ಕವಳನ ಸಂಬಂಧಿ. ಕವಳನ ಜೊತೆಯಲ್ಲಿದ್ದಾಗ ಅನೇಕ ಕೊಲೆ, ಕೊಲೆ ಯತ್ನ, ದರೋಡೆ ಇತರೆ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಅಲ್ಲದೆ, ನಕರಾ ಬಾಬು ಕೊಲೆಯ ಮುಖ್ಯ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ. [ಓವೈಸಿ ಹತ್ಯೆಗೆ ಸಂಚು: ರೌಡಿಗಳ ಬಂಧನ]
ಐವಿನ್ ಕುಮಾರ್ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ 17 ಅಪರಾಧ ಪ್ರಕರಣಗಳು ದಾಖಲಾಗಿವೆ. ಹಲ್ಲೆ, ಕೊಲೆಗೆ ಯತ್ನ, ದರೋಡೆಗೆ ಸಿದ್ಧತೆ ಮುಂತಾದ ಆರೋಪಗಳು ಈತನ ಮೇಲಿವೆ. ಸಾರ್ವಜನಿಕರಿಗೆ ಶಾಂತಿ ಭಂಗ ಉಂಟುಮಾಡುತ್ತಿದ್ದ ಕೃತ್ಯದಲ್ಲಿ ಹಾಗೂ ಫುಟ್ಪಾತ್ ವ್ಯಾಪಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪವನ್ನು ಈತ ಎದುರಿಸುತ್ತಿದ್ದ.
ಆರೋಪಿ ಕರಿಯಾ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ಹಣಕ್ಕಾಗಿ ಕೊಲೆ ಯತ್ನ, ಡಕಾಯಿತಿ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. [ಬೀದಿ ರೌಡಿ ಬಂಧನ]
ಇಬ್ಬರು ಬೈಕ್, ಸರಗಳ್ಳರ ಬಂಧನ
ಬೆಂಗಳೂರಿನ ವಿವಿಧೆಡೆ ಬೈಕ್ ಹಾಗೂ ಮಹಿಳೆಯರ ಸರಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪ್ಪಾಜಿ ಮುನಿವೆಂಕಟಪ್ಪ (35) ಹಾಗೂ ಗಣಪತಿ ಶಾಮನಾಯಕ್ (23) ಬಂಧಿತ ಆರೋಪಿಗಳು. ಅವರಿಂದ 8 ಲಕ್ಷ ರೂ. ಬೆಲೆಯ 12 ದ್ವಿ ಚಕ್ರ ವಾಹನ, 100 ಗ್ರಾಂ. ತೂಕದ ಚಿನ್ನದ ಚೈನ್ ವಶಪಡಿಸಿಕೊಳ್ಳಲಾಗಿದೆ. [ನಕಲಿ ನೋಕಿಯಾ ಮೊಬೈಲ್ ಮಾರಾಟಗಾರರ ಸೆರೆ]
ಇವರ ಬಂಧನದ ಮೂಲಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಸರ ಅಪಹರಣ ಪ್ರಕರಣಗಳು ಹಾಗೂ ಬೆಂಗಳೂರು ನಗರದ ಬಸವನಗುಡಿ ಪೊಲೀಸ್ ಠಾಣೆಯ ಮೂರು ದ್ವಿ ಚಕ್ರ ವಾಹನಗಳು, ರಾಜರಾಜೇಶ್ವರಿ ನಗರ ಠಾಣೆಯ ಒಂದು ದ್ವಿ ಚಕ್ರ ವಾಹನ, ಉಪ್ಪಾರಪೇಟೆ ಠಾಣೆಯ ಒಂದು ದ್ವಿ ಚಕ್ರ ವಾಹನ, ಅತ್ತಿಬೆಲೆ ಪೊಲೀಸ್ ಠಾಣೆಯ ಒಂದು ದ್ವಿ ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಮೊಬೈಲ್ ಕಳ್ಳರ ಬಂಧನ
ಆಟೋ ರಿಕ್ಷಾದಲ್ಲಿ ಬಂದು ಮೊಬೈಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. [ಫ್ಲಿಪ್ ಕಾರ್ಟ್ ನಿಂದ ಮೊಬೈಲ್ ಕದ್ದು ಸಿಕ್ಕಿಬಿದ್ದ]
ಚಂದ್ರಶೇಖರ್ ಪಾಪಣ್ಣ, ಗಣೇಶ ಬಿ ಬಸವರಾಜ್ ಹಾಗೂ ಕಿರಣ್ಕುಮಾರ್ ಇ ಎಳುಮಲೈ ಬಂಧಿತ ಆರೋಪಿಗಳು. ಅವರಿಂದ 1.5 ಲಕ್ಷ ರೂ. ಮೌಲ್ಯದ ಒಂದು ಮೊಬೈಲ್ ಪೋನ್, ಒಂದು ನಕಲಿ ಚಿನ್ನದ ಚೈನು ಮತ್ತು ಸುಲಿಗೆ ಮಾಡಲು ಬಳಸಿದ್ದ ಆಟೋ ರಿಕ್ಷಾ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.