ಹಲಸೂರು ಕೆರೆ ಶುದ್ಧೀಕರಣಕ್ಕೆ 20 ದಿನ ಗಡುವು
ಬೆಂಗಳೂರು, ಜೂನ್, 02: ಬೆಂಗಳೂರು ಆಡಳಿತ ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಸ್ವಾಗತಾರ್ಹ ಹೆಜ್ಜೆ ಇಟ್ಟಿದೆ. ಜಲಚರಗಳ ಸಾವಿಗೆ ಕಾರಣವಾಗಿದ್ದ ಹಲಸೂರು ಕೆರೆಯನ್ನು 20 ದಿನಗಳೊಳಗೆ ಅಭಿವೃದ್ಧಿ ಮಾಡಲು ಸೂಚನೆ ನೀಡಲಾಗಿದೆ.
ಹಲಸೂರು ಕೆರೆ ಪ್ರದೇಶಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಮಾಹಿತಿ ಹಾಗೂ ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. [ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು]
ಕೆರೆಯ ನೀರಿನ ಗುಣಮಟ್ಟ ಹೆಚ್ಚಿಸಲು ಮೊದಲ ಆದ್ಯತೆ ನೀಡಬೇಕು. ಕರೆಗೆ ಅಶುದ್ಧ ನೀರು ಹರಿದು ಬರುತ್ತಿದ್ದರೆ ಮೊದಲು ತಡೆ ಹಾಕಬೇಕು ಎಂದು ಸಚಿವರುಗಳು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್ ಕೆ.ಆರ್ ಮಂಜುನಾಥ್ ಮಾತನಾಡಿ, ಕೆರೆಯಲ್ಲಿ ಬಂದು ಸೇರುತ್ತಿದ್ದ ಒಳಚರಂಡಿ ನೀರಿಗೆ ಬ್ರೇಕ್ ಹಾಕಲಾಗಿದೆ. ಈ ನೀರನ್ನು ಕೋರಮಂಗಲ ಮತ್ತು ಚಲ್ಲಘಟ್ಟ ವಿಲ್ಲೆ ಎಎಸ್ ಪಿ ಗೆ ಬಿಡಲಾಗಿದೆ. ಇನ್ನು ಕೆರೆಗೆ ಕಸ ಚೆಲ್ಲದಂತೆ ಸೂಚನೆ ನೀಡಲಾಗಿದ್ದು ಬಿಬಿಎಂಪಿ ಉಸ್ತುವಾರಿ ವಹಿಸಿಕೊಂಡಿದೆ ಎಂದು ತಿಳಿಸಿದರು.[ಬೆಂಗಳೂರು ಕೆರೆಗಳ ದಿಕ್ಕೆಟ್ಟ ಸ್ಥಿತಿ]
ಒಳಚರಂಡಿ ನೀರಿನ ಸಮಸ್ಯೆಗೆ ಈಗಾಗಲೇ ಎಂಇಜಿ ಗೇಟ್ ಬಳಿ ಸ್ಥಾವರವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾರ್ಯಗಳು ಗಡುವು ನೀಡಲಾಗಿರುವ 18 ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.[ಸಾವಿರಾರು ಮೀನು ಸಾವು: ಹೆಬ್ಬಾಳ ಕೆರೆಗೂ ಮಾಲಿನ್ಯದ ಕಳಂಕ?]
ಸಮಸ್ಯೆ ಬೆಂಗಳೂರಿನ ಒಂದು ಕೆರೆಗೆ ಮಾತ್ರ ಸೀಮಿತವಾಗಿಲ್ಲ. ಬೆಳ್ಳಂದೂರು ಕೆರೆ ಸಮಸ್ಯೆ ಜಗಜ್ಜಾಹೀರಾಗಿದೆ. ವರ್ತೂರು ಕೆರೆಯಲ್ಲಿ ರಾಸಾಯನಿಕ ನೊರೆ ಕಾಣಿಸಿಕೊಂಡಿದೆ. ಹೆಬ್ಬಾಳ ಕೆರೆಯಲ್ಲಿ ಜಲಚರಗಳು ಅಸುನೀಗಿದ್ದು ಮಾಲಿನ್ಯ ತಡೆಯ ಬೃಹತ್ ಜವಾಬ್ದಾರಿ ಆಡಳಿತದ ಮೇಲಿದೆ. ಕರೆ ಸಂರಕ್ಷಣಗೆ ನಾವೇನು ಮಾಡಬಹುದು ಎಂಬ ಸಲಹೆಯನ್ನು ನೀವು ನೀಡಬಹುದು.