ಚಂದಿರನ ನೆರಳು-ಬೆಳಕಿನಾಟ ನೋಡಲು ಮೋಡಗಳ ಹರತಾಳ
ಬೆಂಗಳೂರು, ಜು.28: ಮೋಡಗಳ ಕಣ್ಣಾಮುಚ್ಚಾಲೆ ಮಧ್ಯದಲ್ಲಿ ಖಗ್ರಾಸ ಚಂದ್ರಗ್ರಹಣವನ್ನು ಬೆಂಗಳೂರಿನ ಜನತೆ ಕಣ್ತುಂಬಿಸಿಕೊಂಡರು. ಜವಾಹರ್ನೆಹರೂ ತಾರಾಲಯದಲ್ಲಿ ವಿಶೇಷವಾಗಿ ಮಾಡಲಾಗಿದ್ದ ವ್ಯವಸ್ಥೆಯಲ್ಲಿ ಈ ವಿಸ್ಮಯವನ್ನು ಕಣ್ತುಂಬಿಕೊಂಡರು.
ತಡ ರಾತ್ರಿ ದೀರ್ಘಾವಾಧಿ ಚಂದ್ರಗ್ರಹಣವಾದರೂ ಸಾಕಷ್ಟು ಮಂದಿ ಮಕ್ಕಳು, ಮಹಿಳೆಯರು ನೆಹರು ಉತ್ಸುಕತೆಯಿಂದ ತಾರಾಲಯಕ್ಕೆ ಆಗಮಿಸಿ ಆಗಸದ ಅಪರೂಪದ ಸೊಬಗನ್ನು ನೋಡಿದರು. ತಾರಾಲಯದಲ್ಲಿ ಸಾಕಷ್ಟು ಮಂದಿ ಖಗೋಳಾಸಕ್ತರು ಆಗಮಿಸಿ ಭೂ ಮಂಡಲದ ವಿಸ್ಮಯವನ್ನುಸನಿಹದಿಂದ ವೀಕ್ಷಿಸಿದರು. ತಾರಾಲಯದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಚಂದ್ರಗ್ರಹಣದ ಅಪರೂಪದ ಕೌತುಕತೆಯ ಕುರಿತಾದ ಸಾರ್ವಜನಿಕರ ಹಲವು ಅನುಮಾನ, ಪ್ರಶ್ನೆಗಳಿಗೆ ಉತ್ತರ ನೀಡಿದರು.
ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ!
ಜು.27ರ ರಾತ್ರಿ11.54ಕ್ಕೆ ಭೂಮಿಯ ನೆರಳು ಚಂದ್ರನನ್ನು ಸ್ಪರ್ಶಿಸಿತು. ಸರಿ ಒಂದು ಗಂಟೆಗೆ ಗ್ರಹಣದ ಪೂರ್ಣಾವಸ್ಥೆ ಆರಂಭಗೊಂಡಿತು. 2.43 ಗಂಟೆಗೆ ಚಂದ್ರ ಭೂಮಿಯ ಸಂಪೂರ್ಣ ನೆರಳಿನಿಂದ ಹೊರಬರಲು ಪ್ರಾರಂಭವಾಯಿತು. ಚಂದ್ರ ಸಂಪೂರ್ಣ ಕೆಂಪು ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತ ಇದ್ದ ಹಾಗೇ ಖಗೋಳಾಸಕ್ತರ ಉತ್ಸಾಹ, ಕೌತುಕ ಇಮ್ಮಡಿಗೊಂಡಿತು.
ಸುಮಾರು 103 ನಿಮಿಷಗಳ ಕಾಲ ಭೂಮಿಯ ದಟ್ಟವಾದ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಟ್ಟಿತ್ತು. ಅಂದರೆ ಅಷ್ಟುಹೊತ್ತುಗಳ ಕಾಲ ಸಂಪೂರ್ಣ ಚಂದಿರ ಕೆಂಪು ಬಣ್ಣದಲ್ಲಿ ಗೋಚರಿಸಿತು. ಈ ಅಪರೂಪದ ಖಗೋಳ ವಿದ್ಯಾಮಾನವಾದ ಕೆಂಪು ಚಂದಿರನನ್ನು ಕಂಡು ಸಂತಸಪಟ್ಟರು.
In Pics: ವಿಶ್ವದೆಲ್ಲೆಡೆ ರಕ್ತವರ್ಣದಲ್ಲಿ ಕಂಡ ಚಂದಿರನ ಕಣ್ತುಂಬಿಸಿಕೊಳ್ಳಿ
ಖಗೋಳಾಸಕ್ತರು ಭಾರಿ ಪ್ರಮಾಣದಲ್ಲಿ ನಗರದ ನೆಹರೂ ತಾರಾಲಯಕ್ಕೆ ಆಗಮಿಸಿದ್ದು, ಅಚ್ಚರಿಯನ್ನು ನೋಡಿ ಪುಳಕಿತರಾದರು. ತಾರಾಲಯದಲ್ಲಿ ಚಂದ್ರಗ್ರಹಣದ ಅದ್ಭುತವನ್ನು ಸಾಕ್ಷಾತ್ಕರಿಸುವ ನಿಟ್ಟಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ತಾರಾಲಯದಲ್ಲಿ ದೂರದರ್ಶಕಗಳನ್ನು ಅಳವಡಿಸಿದ್ದು, ಆ ಮೂಲಕ ಸಾರ್ವಜನಿಕರು ಸುದೀರ್ಘ ಕೆಂಪು ಚಂದ್ರಗ್ರಹಣದ ಅವಿಸ್ಮರಣೀಯ ದೃಶ್ಯಗಳನ್ನು ಹತ್ತಿರದಿಂದ ನೋಡಿದರು.