ಬೆಂಗಳೂರಲ್ಲಿ 6 ನೇ ಅಂತಾರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ
ಬೆಂಗಳೂರು, ಡಿಸೆಂಬರ್, 21: ಆರನೇ ಅಂತಾರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ಸಮ್ಮೇಳನ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಡಿಸೆಂಬರ್ 23, 24, ಮತ್ತು 25ರಂದು ನಡೆಯಲಿದೆ.
ವ್ಯಕ್ತಿಯ 'ಜಾತಕದ ಆಧಾರದ ಮೇಲೆ ಆತನ ಆರೋಗ್ಯದ ಸ್ಥಿತಿಗತಿ' ಎಂಬ ವಿಚಾರದ ಮೇಲೆ ಮೂರು ದಿನಗಳ ಕಾಲ ಚರ್ಚೆ ಮಾಡಲಾಗುವುದು. ವ್ಯಕ್ತಿಯ ಜಾತಕದಲ್ಲಿ ಸೂಚಿಸುವಂತಹ ರೋಗಗಳನ್ನು ನಿಖರವಾಗಿ ವಿಮರ್ಶೆ ಮಾಡಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಯಾವ ಕಾಯಿಲೆ ಯಾರಿಗೆ ಯಾವಾಗ ಯಾಕೆ ಬರುತ್ತದೆ ಹಾಗೂ ಅದಕ್ಕೆ ಸೂಕ್ತ ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ವಿವಿಧ ಗಣ್ಯ ಜ್ಯೋತಿಷಿಗಳ ವಿಚಾರಧಾರೆಗಳು ಈ ಬಾರಿಯ ಸಮ್ಮೇಳನದಲ್ಲಿ ಗಹನವಾಗಿ ಚರ್ಚಿಸಲಾಗುವುದು ಎಂದು ದಿವ್ಯಜ್ಯೋತಿ ಜ್ಯೋತಿಷ್ಯ ಮಹಾವಿದ್ಯಾಲಯದ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲ ಎಚ್.ಚಂದ್ರಶೇಖರ್ ತಿಳಿಸಿದ್ದಾರೆ.[ಮಾರ್ಗಶಿರ ಮಾಸದ ವಾರದ ಪಂಚಾಂಗ: ಡಿ.20ರಿಂದ 26]
ಜ್ಯೋತಿಷ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಶ್ರೀಬೇಲಿಮಠದ ಶಿವರುದ್ರ ಮಹಾ ಸ್ವಾಮೀಜಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಜಯನಗರ ಶಾಸಕರಾದ ವಿಜಯ ಕುಮಾರ್, ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ವೆಂಕಟಾಚಲಯ್ಯ ಸಹಿತ ಹಲವು ಗಣ್ಯರು ಪಾಲ್ಗೊಳ್ಳುವರು.[ರಸ್ತೆ ಗುಂಡಿಗಳ ಜೊತೆ ಢೋಂಗಿ ಜ್ಯೋತಿಷ್ಯವನ್ನೂ ಮುಚ್ಚಿ!]
ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಅಧಿಕ ಜ್ಯೋತಿಷಿಗಳು ಹಾಜರಿರುವರು. ಮಲೇಷಿಯಾ, ಸಿಂಗಾಪುರ, ನೇಪಾಳ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದಲ್ಲಿರುವ ಜ್ಯೊತಿಷಿಗಳು ಪಾಲ್ಗೊಳ್ಳುವರು. ಜ್ಯೋತಿಷದಲ್ಲಿನ ಹಲವು ವಿಭಾಗಗಳ ಜ್ಯೋತಿಷಿಗಳು ಒಂದೆಡೆ ಸೇರುವ ಅಪರೂಪದ ವಿದ್ಯಮಾನವೂ ಇದಾಗಿರುತ್ತದೆ.
ಜ್ಯೋತಿಷ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನೂರಾರು ಗಣ್ಯಮಾನ್ಯರಿಗೆ, ವಿದ್ವಾಂಸರಿಗೆ ಈ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಊಟ ಸಹಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9880036277ನ್ನು ಸಂಪರ್ಕಿಸಬಹುದು.