ವೃದ್ಧೆಗೆ ಪುನರ್ಜನ್ಮ ನೀಡಿದ ಬೇಲೂರು ಮಹಿಳೆಯ ಹೃದಯ
ಬೆಂಗಳೂರು, ಮೇ 25: ಬೇಲೂರು ಮಹಿಳೆಯ ಹೃದಯವೊಂದು 62 ವರ್ಷದ ವೃದ್ಧೆಗೆ ಪುನರ್ಜನ್ಮ ಕೊಟ್ಟಿದೆ. ನಗರದ ನಾರಾಯಣ ಹೃದಯಾಲಯದಲ್ಲಿ ವೃದ್ಧೆಗೆ ಬೇಲೂರು ಮಹಿಳೆಯರ ಹೃದಯ ಕಸಿ ಮಾಡಲಾಗಿದ್ದು, ವೃದ್ಧೆ ಆರೋಗ್ಯ ನಿಧಾನವಾಗಿ ಸುಧಾರಿಸುತ್ತಿದೆ.
ಹೃದಯವನ್ನು ಪಡೆದ ವೃದ್ಧೆಯು ಖಾಸಗಿ ಕಂಪನಿಯೊಂದರ ನಿವೃತ್ತ ಉದ್ಯೋಗಿ. ಅವರು ಸುಮಾರು ನಾಲ್ಕು ವರ್ಷಗಳಿಂದ ಕಾರ್ಡಿಯೋ ಮಿಯೋಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ, ಅವರಿಗೆ ಹೃದಯ ಕಸಿಯ ಅವಶ್ಯಕತೆಯಿಂದು ಅವರ ಸಂಬಂಧಿಗಳಿಗೆ ನಾರಾಯಣ ಹೆಲ್ತ್ ಸಿಟಿಯ ಹಿರಿಯ ವೈದ್ಯರಾದ ಡಾ. ಬಾಗೀರಥ ರಘುರಾಮ್ ಅವರು ತಿಳಿಸಿದ್ದರು.[ಚೆನ್ನೈ ವ್ಯಕ್ತಿಯ ಜೀವ ಉಳಿಸಿದ ಬೆಂಗಳೂರು ಮಹಿಳೆಯ ಹೃದಯ!]
ಹಾಗಾಗಿ, ಅವರು ಆರು ತಿಂಗಳ ಹಿಂದೆಯೇ ಹೃದಯ ಕಸಿಗೆ ನೆರವಾಗುವ ಯೋಜನೆಯಾದ 'ಜೀವ ಸಾರ್ಥಕತೆ'ಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದ್ದರು. ಹಲವಾರು ದಿನಗಳೇ ಕಳೆದರೂ ಅವರ ರಕ್ತಕ್ಕೆ ಹೊಂದುವಂಥ ಜೀವಂತ ಹೃದಯ ದಾನಿಗಳು ಸಿಗಲೇ ಇಲ್ಲ.
ಆದರೆ, ಅದೊಂದು ದಿನ ಬೆಂಗಳೂರಿನ ಅಪೊಲೊ ಆಸ್ಪತ್ರೆಯಿಂದ ಕರೆಯೊಂದು ಬಂತು. ಮೇ 13ರಂದು ಅಪಘಾತಕ್ಕೀಡಾಗಿ ಬಹು ಅಂಗ ವೈಫಲ್ಯಕ್ಕೊಳಗಾಗಿದ್ದ, ಬದುಕುವುದು ಅಸಾಧ್ಯವೆನಿಸಿದ್ದ ಬೇಲೂರಿನ 42 ವರ್ಷದ ಮಹಿಳೆಯೊಬ್ಬರ ಸಂಬಂಧಿಗಳು ಅವರ ಹೃದಯ ದಾನಕ್ಕೆ ಮುಂದಾಗಿದ್ದರು.[ಗ್ರೀನ್ ಕಾರಿಡಾರಿನಲ್ಲಿ ಹೃದಯ ರವಾನೆ, ಯಶಸ್ವಿಯಾದ ಕಸಿ]
ಈ ವಿಚಾರ ತಿಳಿದಿದ್ದೇ ತಡ, ನಾರಾಯಣ ಆಸ್ಪತ್ರೆಯ ವೈದ್ಯರು ತಡ ಮಾಡಲೇ ಇಲ್ಲ. ಅದಕ್ಕೆ ಬೇಕಾದ ವೈದ್ಯಕೀಯ ಕ್ರಮಗಳನ್ನು ಕೈಗೊಂಡು ತಕ್ಷಣವೇ ಆ ಹೃದಯವನ್ನು ನಾರಾಯಣ ಆಸ್ಪತ್ರೆಗೆ ರವಾನಿಸುವಂತೆ ಅಪೊಲೊ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರನ್ನು ಕೋರಿದ್ದರು. ಅದರಂತೆ, ಎಲ್ಲಾ ಏರ್ಪಾಟುಗಳೂ ನಡೆದವು.
Live heart reached video at Narayana Hrudayalaya,Bommasandra. pic.twitter.com/3qTSjO621U
— BTP (@blrcitytraffic) 24 May 2017
ಈ ಸಂದರ್ಭದಲ್ಲಿ ಜೀವರಕ್ಷಣೆಗೆ ಅನನ್ಯವಾಗಿ ನೆರವಾಗಿದ್ದು ಬೆಂಗಳೂರು ಟ್ರಾಫಿಕ್ ಪೊಲೀಸ್. ವಿಚಾರ ತಿಳಿದ ನಗರ ಟ್ರಾಫಿಕ್ ಪೊಲೀಸ್ ಇಲಾಖೆಯು, ನಾರಾಯಣ ನೇತ್ರಾಲಯದ ವೈದ್ಯರ ಮನವಿಗೆ ಉತ್ತಮವಾಗಿ ಸ್ಪಂದಿಸಿತು. ಅಪೊಲೊ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯದ ನಡುವಿನ ಸುಮಾರು 29 ಕಿ.ಮೀ. ದಾರಿಯನ್ನು ಸಂಪೂರ್ಣವಾಗಿ ಟ್ರಾಫಿಕ್ ಮುಕ್ತವಾಗಿಸಿ, 'ಗ್ರೀನ್ ಕಾರಿಡಾರ್' ಆಗಿ ಪರಿವರ್ತಿಸಲಾಯಿತು.
ಇದರಿಂದಾಗಿ, ಅಷ್ಟು ದೂರವನ್ನು ಕೇವಲ 25 ನಿಮಿಷಗಳಲ್ಲಿ ಕ್ರಮಿಸಿದ ಆ ಜೀವಂತ ಹೃದಯ, ನಾರಾಯಣ ಹೆಲ್ತ್ ಸಿಟಿಯಲ್ಲಿನ ಆ ವೃದ್ಧ ಮಹಿಳೆಯೊಳಗೆ ಸೇರಿಕೊಂಡಿತು. ಹೃದಯ ಆಗಮಿಕೆಯನ್ನು ತುದಿಗಾಲಲ್ಲಿ ಎದುರು ನೋಡುತ್ತಿದ್ದ 13 ವೈದ್ಯರ ತಂಡ, ಯಶಸ್ವಿ ಶಸ್ತ್ರ ಚಿಕಿತ್ಸೆಯೊಂದಿಗೆ ಆ ಹೃದಯಕ್ಕೆ, ಮಾನವೀಯ ಪ್ರಯತ್ನಗಳಿಗೆ ಸಾರ್ಥಕತೆಯನ್ನು ನೀಡಿತು.