ಹಂಗೇರಿ ಕೈಯಲ್ಲಿ ಬೆಂಗಳೂರನ್ನು ರಕ್ಷಿಸಲು ಸಾಧ್ಯವೇ?
ನವದೆಹಲಿ, ಡಿಸೆಂಬರ್. 01: ಹಂಗೇರಿ ಕೈಯಲ್ಲಿ ಬೆಂಗಳೂರನ್ನು ರಕ್ಷಿಸಲು ಸಾಧ್ಯವೇ? ಹೌದು ಇಂಥದ್ದೊಂದು ಪ್ರಶ್ನೆ ಕೇಳುವ ಸಂದರ್ಭ ಬಂದಿದೆ. ರಾಸಾಯನಿಕ ತುಂಬಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಯನ್ನು ಸ್ವಚ್ಛಮಾಡಲು ರಾಜ್ಯ ಸರ್ಕಾರ ಹಂಗೇರಿಯ ತಂತ್ರಜ್ಞರೊಂದಿಗೆ ಮಾತುಕತೆ ನಡೆಸಿದೆ.
ಹಂಗೇರಿಯ ತಂತ್ರಜ್ಞರ ಜತೆ ಕರ್ನಾಟಕದ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಹಂಗೇರಿಯ ತಂತ್ರಜ್ಞರಿಗೆ ಮಾಲಿನ್ಯ ಮತ್ತು ಅದರಿಂದಾಗುತ್ತಿರುವ ಸಮಸ್ಯೆ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.[ಒಡಲಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕೆರೆಯ ಕಥೆ ವ್ಯಥೆ]
ಹಂಗೇರಿ ತಂಡ ಭೇಟಿ ನೀಡಲಿದೆ
ಹಂಗೇರಿಯ ತಂಡ ಬೆಳ್ಳಂದೂರು ಮತ್ತು ವರ್ತೂರು ಕೆರೆಗೆ ಭೇಟಿ ನೀಡಲಿದೆ. ಅಲ್ಲದೇ ಈ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ಸಲಹೆಗಳನ್ನೊಳಗೊಂಡ ಪ್ರಸ್ತಾವೆಯೊಂದು ರಾಜ್ಯ ಸರ್ಕಾರದ ಮುಂದೆ ಇಡಲಿದೆ.[ಗೂಗಲ್ ಮ್ಯಾಪ್ ನಲ್ಲಿ 'ಬೆಳ್ಳಂದೂರು ಲೇಕ್' ಹುಡುಕಬೇಡಿ!]
ರಾಜ್ಯ ಸರ್ಕಾರ 'ಪುರೆಕೋ' ಲಿಮಿಟೆಡ್ ಕಂಪನಿಯೊಂದಿಗೆ ಮಾತುಕತೆ ಮಾಡಿದೆ. ಇಂಥ ಸಮಸ್ಯೆಗಳನ್ನು ಬಗೆಹರಿಸಿದ ಇತಿಹಾಸ ಕಂಪನಿಯ ಹಿಂದಿದೆ. ರಾಸಾಯನಿಕ ನೊರೆ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು ಸ್ಥಳೀಯರು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿಲ್ಲ. ಅಲ್ಲದೇ ರಾಜ್ಯ ಸರ್ಕಾರ ಸಹ ಶಾಶ್ವತ ಪರಿಹಾರಕ್ಕಾಗಿ ಪರ್ಯಾಯ ಯೋಜನೆಗಳತ್ತ ಗಮನ ಹರಿಸುತ್ತಿದೆ ಎಂಬುದಕ್ಕೆ ಈ ಮಾತುಕತೆಯೇ ಸಾಕ್ಷಿಯಾಗಿದೆ.