ಬೇಲೇಕೇರಿ ಪ್ರಕರಣ : ಜನಾರ್ದನ ರೆಡ್ಡಿ ಆರೋಪಿ ನಂ.1
ಬೆಂಗಳೂರು, ಡಿ. 18: ಮಾಜಿ ಸಚಿವ ಜನಾರ್ದನ ರೆಡ್ಡಿ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಪ್ರಥಮ ಆರೋಪಿ ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ. ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್ಬಾಬು, ಆನಂದ್ಸಿಂಗ್ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಮಂಗಳವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜನಾರ್ದನ ರೆಡ್ಡಿ, ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್ಬಾಬು, ಆನಂದ್ಸಿಂಗ್ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಇದೀಗ ಮೂರನೇ ಬಾರಿ ಸಲ್ಲಿಸಲಾಗಿದ್ದು, ಜನಾರ್ದನ ರೆಡ್ಡಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನರೆಡ್ಡಿ, ಕಂಪ್ಲಿ ಶಾಸಕ ಸುರೇಶ್ಬಾಬು, ಕೂಡ್ಲಿಗಿ ಶಾಸಕ ನಾಗೇಂದ್ರ, ವಿಜಯನಗರ ಶಾಸಕ ಆನಂದ್ಸಿಂಗ್, ಕಾರವಾರ ಶಾಸಕ ಸತೀಶ್ ಸೈಲ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. [ಬೇಲೇಕೇರಿ : ಸ್ವಸ್ತಿಕ್, ಕಾರದಪುಡಿ ಮೇಲೆ ಚಾರ್ಜ್ ಶೀಟ್]
ಯಾರ ವಿರುದ್ಧ ಚಾರ್ಜ್ಶೀಟ್?
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಥಮ ಆರೋಪಿ ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ. ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್ಬಾಬು, ಆನಂದ್ಸಿಂಗ್ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ 18 ಮಂದಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳ ವಿರುದ್ಧವೂ ಚಾರ್ಜ್ಶೀಟ್
ಮಂಗಳವಾರ ಸಲ್ಲಿಸಿರುವ ಚಾರ್ಜ್ಶೀಟ್ ನಲ್ಲಿ ಅರಣ್ಯಾಧಿಕಾರಿಗಳಾದ ಮುತ್ತಯ್ಯ, ಶುಕ್ಲಾ, ಹಿತ್ತಲಮಕ್ಕಿ, ಚಂದ್ರಕಾಂತ್, ಪೊಲೀಸ್ ಅಧಿಕಾರಿ ರಮಾಕಾಂತ್, ಬಂದರು ಅಧಿಕಾರಿ ಕ್ಯಾಪ್ಟನ್ ಸ್ವಾಮಿ, ಮಹೇಶ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ 18 ಆರೋಪಿಗಳ ಹೆಸರು ಸೇರಿಸಲಾಗಿದೆ.
ಯಾವ ಕಂಪನಿಗಳು ಸೇರಿವೆ
ಮಲ್ಲಿಕಾರ್ಜುನ ಶಿಪ್ಪಿಂಗ್, ಸಾಲ್ಗಾಂವ್ಕರ್ ಶಿಪ್ಪಿಂಗ್ ಕಂಪನಿಗಳ ಮೂಲಕ 6.5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಿರುವ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 800 ಪುಟಗಳ ಚಾರ್ಜ್ಶೀಟ್ 4500 ದಾಖಲಾತಿಗಳನ್ನು ಹೊಂದಿದೆ.
ಸತೀಶ್ ಸೈಲ್ ವಿರುದ್ಧ ಆರೋಪವೇನು?
ಕಾರವಾರದ ಶಾಸಕ ಸತೀಶ್ ಸೈಲ್ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ(SMSC Pvt Ltd)ಯ ಮಾಲೀಕರು. 2009-10ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೆ.20ರಂದು ಬಂಧಿಸಲಾಗಿತ್ತು. ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಸುಮಾರು 7.23 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ತಮ್ಮ ಕಂಪನಿ ಮೂಲಕ ಅಕ್ರಮವಾಗಿ ಸಾಗಿಸದ ಆರೋಪ ಅವರ ಮೇಲಿದೆ.
ಆನಂದ್ ಸಿಂಗ್ ವಿರುದ್ಧ ಆರೋಪವೇನು?
ವಿಜಯನಗರ ಶಾಸಕ ಆನಂದ್ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಅಕ್ರಮವಾಗಿ ಬೇಲೇಕೇರಿ ಬಂದರಿನಿಂದ ಅದಿರು ಸಾಗಣೆ ಮಾಡಿದ ಆರೋಪವಿದೆ. ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಬೆಲೇಕೇರಿ ಬಂದರಿನಿಂದ ಮುಖ್ಯವಾಗಿ ಚೀನಾ, ಸಿಂಗಪುರ ಸೇರಿದಂತೆ ವಿದೇಶಕ್ಕೆ ಕಬ್ಬಿಣದ ಅದಿರನ್ನು ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.