ವಾಸ್ತವ, ಕಲ್ಪನಾ ಬದುಕಿನ ಹೂರಣ ಬೆಳಕಿನ ಅಂಗಡಿ
ಬೆಂಗಳೂರು, ಮೇ 2: ಎಸ್.ವಿ. ಸುಷ್ಮಾ ನಿರ್ದೇಶನದ ಥೇಮಾ ಪ್ರಸ್ತುತಪಡಿಸುತ್ತಿರುವ ಬೇಲೂರು ರಘುನಂದನ್ ಅವರ ನಾಟಕ 'ಬೆಳಕಿನ ಅಂಗಡಿ' ಮೇ.7 ರಂದು ರಂಗಶಂಕರದಲ್ಲಿ ಸಂಜೆ.7.30ಕ್ಕೆ ಪ್ರದರ್ಶನ ಕಾಣಲಿದೆ.
ಬೆಳಕಿನ ಅಂಗಡಿ, ಮಧ್ಯ ವಯಸ್ಕ ಹೆಣ್ಣೊಬ್ಬಳ ಜೀವನ ಗಾಥೆ. ಕಲಾವಿದೆಯೊಬ್ಬಳ ಬದುಕಿನ ಅಂತರಂಗ ದರ್ಶನ, ಸ್ತ್ರೀತ್ವ ಮತ್ತು ಮಾತೃತ್ವಗಳು ಬಣ್ಣ ಮತ್ತು ಚಿತ್ರಗಳ ಮೂಲಕ ಪಾತ್ರಗಳಾಗುತ್ತಲೇ ಏಕಾಂಗಿ ಬದುಕಿನ ಹಲವು ಆಯಾಮಗಳನ್ನು ಕಟ್ಟುತ್ತದೆ.
ಮೇ 4ರಂದು ಹನುಮಂತನಗರದಲ್ಲಿ ಬೀಚಿಯವರ 'ನನ್ನ ಭಯಾಗ್ರಫಿ'
ಇಲ್ಲಿನ ಕನಸುಗಳು ವಾಸ್ತವ ಮತ್ತು ಕಲ್ಪನೆ ಎರಡರಲ್ಲೂ ಕ್ರಿಯೆ ಮತ್ತು ಪ್ರತಿಕ್ರಿಯೆಗಳಾಗಿ ಇಡೀ ನಾಟಕವನ್ನು ಮುನ್ನಡೆಸುತ್ತದೆ. ಅನಾಥ ಪ್ರಜ್ಞೆ ಹಾಗೂ ನಗರದ ಬದುಕಿನ ಮಧ್ಯಮವರ್ಗದ ಜನರ ಸಂಕಟಗಳು ಮತ್ತು ಸಂಘರ್ಷಣೆಗಳ ನಡುವೆ ನಾಟಕ ವ್ಯಕ್ತಿ ಕೇಂದ್ರದಲ್ಲಿ ರೂಪ ಪಡೆಯುತ್ತಾ ಸಾಮಾಜಿಕವಾಗುತ್ತದೆ.
ಇಲ್ಲಿ ಎಲ್ಲಾ ಪಾತ್ರಗಳು ತಾನು ಇಷ್ಟಪಟ್ಟ ಬದುಕನ್ನೇ ಹುಡುಕುತ್ತವೆ. ಆ ಮೂಲಕ ದಕ್ಕುವ ಪ್ರೀತಿ ಸ್ವಾತಂತ್ರ್ಯ ಬೆಳಕಿನ ಅಂಗಡಿ ನಾಟಕದ ಮೂಲ ದ್ರವ್ಯ.