ಅತ್ಯಾಚಾರ ಆರೋಪ: ಸರ್ಕಾರಿ ಉದ್ಯೋಗಿಯೆಂಬ ಕಾರಣಕ್ಕೆ ಜಾಮೀನು ನೀಡಲಾಗದೆಂದ ಹೈಕೋರ್ಟ್
ಬೆಂಗಳೂರು, ಜ.29: ಸರ್ಕಾರಿ ಉದ್ಯೋಗಿಯೆಂಬ ಕಾರಣಕ್ಕೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿರುವ ಎಚ್.ಎನ್. ಶ್ರೀನಿವಾಸಮೂರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ನ್ಯಾ.ಎಚ್.ಪಿ. ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಮೇಲಿನಂತೆ ಆದೇಶ ನೀಡಿದೆ.
"ಅರ್ಜಿದಾರರು ಅತ್ಯಾಚಾರದಂತಹ ಗಂಭೀರ ಆರೋಪ ಎದುರಿಸುತ್ತಿದ್ದಾರೆ ಮತ್ತು ಮೇಲ್ನೋಟಕ್ಕೆ ವೈದ್ಯಕೀಯ ಸಾಕ್ಷ್ಯಗಳು ಮತ್ತು ಸಂತ್ರಸ್ತೆಯ ಸೆಕ್ಷನ್ 164ರಡಿ ನೀಡಿರುವ ಹೇಳಿಕೆ ಸಂತ್ರಸ್ತೆಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ. ಹಾಗಾಗಿ ಜಾಮೀನು ನೀಡಲಾಗದು ಮತ್ತು ಅರ್ಜಿದಾರ ಸರ್ಕಾರಿ ಉದ್ಯೋಗ ಎಂಬ ಆಧಾರದ ಮೇಲೆ ಜಾಮೀನು ನೀಡಲಾಗದು'' ಎಂದು ಆದೇಶಿಸಿದೆ.
ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ:
ಅಲ್ಲದೆ ಕೋರ್ಟ್ ದಾಖಲೆಗಳನ್ನು ಪರಿಶೀಲಿಸಿದಾಗ "ಸಂತ್ರಸ್ತೆಯು ತನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೆ ನಂತರ ಬೇರೆಯವರಿಗೆ ಆ ಬಗ್ಗೆ ತಿಳಿಸಿದರೆ ಜೀವ ಬೆದರಿಕೆ ಹಾಕಿದ್ದಾರೆ. ಬೇರೊಬ್ಬ ವರನೊಂದಿಗೆ ತನ್ನ ಮದುವೆ ನಿಶ್ಚಯವಾಗಿತ್ತು, ಆದರೆ ಆರೋಪಿ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದರು, ಆನಂತರ ಕೇಳಿದರೆ ಜೀವ ಬೆದರಿಕೆಯೊಡುತ್ತಿದ್ದಾರೆಂದು ಹೇಳಿದ್ದಾರೆ''ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಸರ್ಕಾರಿ ಉದ್ಯೋಗಿ ಎಂಬ ಕಾರಣಕ್ಕೆ ಸುಳ್ಳು ಪ್ರಕರಣ ಹೂಡಲಾಗಿದೆ. ಮೇಲ್ನೋಟಕ್ಕೆ ಸಂತ್ರಸ್ತೆಯ ದೂರಿನಲ್ಲಿ ಯಾವುದೇ ಹುರುಳಿಲ್ಲ. ಅರ್ಜಿದಾರರು 2021ರ ನ.14ರಿಂದ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಕೋರಿದ್ದರು.
ಆದರೆ ಪ್ರಾಸಿಕ್ಯೂಷನ್ ಜಾಮೀನು ಅರ್ಜಿ ವಿರೋಧಿಸಿ, ಅಪರಾಧ ದಂಡ ಸಂಹಿತೆ ಸೆಕ್ಷನ್ 164ರಡಿ ಸಂತ್ರಸ್ತೆ ನೀಡಿರುವ ಹೇಳಿಕೆಯಲ್ಲಿ ಆಕೆಯ ಮೇಲೆ ಬಲವಂತದ ಅತ್ಯಾಚಾರ ಎಸಗಿರುವುದು ಸ್ಪಷ್ಟವಾಗಿದೆ ಮತ್ತು ಆಕೆಗೆ ಜೀವ ಬೆದರಿಕೆಯನ್ನೂ ಸಹ ಒಡ್ಡಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಜಾಮೀನು ನೀಡಬಾರದೆಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ:
ಆರೋಪಿ ಸರ್ಕಾರಿ ಉದ್ಯೋಗಿ 2021ರ ಸೆ.14ರಂದು ಸಂತ್ರಸ್ತೆಯನ್ನು ಹೋಮ್ ಸ್ಟೇಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಹೇಳಿದರೂ ಸಹ ತಾನೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದನೆಂದು ಆಕೆ ದೂರಿದ್ದಾರೆ. ಅಲ್ಲದೆ, ಅತ್ಯಾಚಾರದ ವಿಷಯವನ್ನು ಕುಟುಂಬದವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದನು ಎಂದು ಅಪಾದಿಸಲಾಗಿತ್ತು. ಅದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದರು.