ಬೆಡ್ ಬ್ಲಾಕಿಂಗ್ ದಂಧೆ: ಮೂವರು ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ
ಬೆಂಗಳೂರು, ಜೂ. 18: ಕೋವಿಡ್19 ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು, ರೋಹಿತ್ ಮತ್ತು ನೇತ್ರಾವತಿ ವಿರುದ್ಧ ಆರೋಪ ಹೊರಿಸಲಾಗಿದೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಬೆಡ್ಗಳಿಗೆ ಬಾರೀ ಬೇಡಿಕೆ ಇತ್ತು. ಬಿಬಿಎಂಪಿ ಕೋಟಾದಡಿ ಬಡವರಿಗೆ ಮೀಸಲಿಟ್ಟದ್ದ ಬೆಡ್ಗಳನ್ನು ಹಣಕ್ಕಾಗಿ ಮಾರಾಟ ಮಾಡುವ ದಂಧೆ ಶುರುವಾಗಿತ್ತು. ಅದರಲ್ಲೂ ದಕ್ಷಿಣ ವಾರ್ ರೂಮ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಶಾಮೀಲಾಗಿ ಬೆಡ್ ಬ್ಲಾಕಿಂಗ್ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ಬೆಡ್ ಒದಗಿಸಿದ್ದಕ್ಕೆ ಕಮೀಷನ್ ಪಡೆದಿದ್ದ ಜಾಲ ಪತ್ತೆ ಮಾಡಿದ್ದ ಜಯನಗರ ಪೊಲೀಸರು ನೇತ್ರಾವತಿ ಹಾಗೂ ರೋಹಿತ್ ಎಂಬುವರನ್ನು ಬಂಧಿಸಿದ್ದರು.
ಇಬ್ಬರು ಕೋವಿಡ್ ಸೋಂಕಿತರಿಂದ ಹಣ ಪಡೆದ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಿದ್ದರು. ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ದಕ್ಷಿಣ ವಾರ್ ರೂಮ್ ಮೇಲೆ ದಾಳಿ ನಡೆಸಿ ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಹೇಳಿಕೆ ನೀಡಿದ್ದರು. ಒಂದು ಕೋಮಿಗೆ ಸಂಬಧಿಸಿದ ಯುವಕರ ಹೆಸರು ಪ್ರಸ್ತಾಪಿಸಿ ಇವರು ಬೆಡ್ ಬ್ಲಾಕಿಂಗ್ ದಂಧೆಯ ಕಿಂಗ್ ಪಿನ್ ಗಳು ಎಂದೇ ಬಿಂಬಿಸಿದ್ದ ಸೂರ್ಯ ಹೇಳಿಕೆ ವಿವಾದಕ್ಕೆ ನಾಂದಿ ಹಾಡಿತ್ತು. ಎರಡೂ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.
ಎರಡು ಪತ್ಯೇಕ ಪ್ರಕರಣ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಒಂದು ಪ್ರಕರಣಕ್ಕೆ ಸಂಬಂಧಸಿದಂತೆ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಡಿವೈಎಸ್ಪಿ ಶ್ರೀಧರ್ ಪೂಜಾರ್ ತನಿಖೆ ಪೂರ್ಣಗೊಳಿಸಿ 1ನೇ ಎಸಿಎಂಎಂಎ ನ್ಯಾಯಾಲಯದಲ್ಲಿ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಮೂವರು ಕೋವಿಡ್ ಸೋಂಕಿತ ರೋಗಿಗಳಿಂದ ಹಣ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ.
Recommended Video
ಮೊದಲ ರೋಗಿಯಿಂದ 80 ಸಾವಿರ ರೂ., ಎರಡನೇ ರೋಗಿಯಿಂದ 20 ಸಾವಿರ ರೂ. ಹಾಗೂ ಮೂರನೇ ರೋಗಿಯಿಂದ 20 ಸಾವಿರ ರೂ. ಪಡೆದು ಸರ್ಕಾರಿ ಕೋಟಾದ ಕೋವಿಡ್ ಬೆಡ್ ಒದಗಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇದರಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಶಾಮೀಲಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ನೇತ್ರಾವತಿ ಹಾಗೂ ರೋಹಿತ್ ಕೋವಿಡ್ ಬೆಡ್ ಅಗತ್ಯ ಇರುವರನ್ನು ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಟ್ಟವರಿಗೆ ಬಾಬು ವಾರ್ ರೂಮ್ ಸಂಪರ್ಕದಿಂದ ಕೋವಿಡ್ ಬೆಡ್ ಕೊಡಿಸುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಂದು ಪ್ರಕರಣದಲ್ಲಿ ಕೆಲವು ಆಸ್ಪತ್ರೆ ಸೇರಿದಂತೆ ಎಂಟು ಮಂದಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ.