ಅಪರಿಚಿತರಿಗೆ ಸಹಾಯ ಮಾಡುವ ಮುನ್ನಾ ಎಚ್ಚರ: ಬೆಂಗಳೂರಲ್ಲಿ ನಡೆದಿದೆ ಹೀಗೊಂದು ಘಟನೆ
ಬೆಂಗಳೂರು, ಜನವರಿ 16: ಸಹಾಯ ಮಾಡುವುದು ಮಾನವೀಯ ಗುಣ, ಆದರೆ ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯ, ಮನುಷ್ಯನಿಗೆ ಸಹಾಯ ಮಾಡುವ ಮುನ್ನಾ ಹಲವು ಭಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ಬೆಂಗಳೂರಿನಲ್ಲಿ ಘಟನೆಯೊಂದು ನಡೆದಿದೆ.
ಬುಧವಾರ ರಾತ್ರಿ ನೈಟ್ ಶಿಫ್ಟ್ ಮುಗಿಸಿಕೊಂಡು 12:30 ಸುಮಾರಿಗೆ ಯುವಕ ರಾಹುಲ್ ಜಯನಗರದಿಂದ ಹೆಬ್ಬಾಳ ಸಮೀಪದ ಭದ್ರಪ್ಪ ಲೇಔಟ್ ಕಡೆಗೆ ಸಂಜಯ್ ನಗರ ಹಾದಿಯಲ್ಲಿ ಹೋಗುತ್ತಿದ್ದ. ಸಂಜಯ್ ನಗರ ಪೊಲೀಸ್ ಠಾಣೆ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಡಿಯೋ ಮಾದರಿಯ ಬೈಕ್ ಅನ್ನು ತಳ್ಳಿಕೊಂಡು ಹೋಗುತ್ತಿದ್ದ ಯುವಕನೊಬ್ಬ ಕೈ ಅಡ್ಡ ಮಾಡಿ ನಿಲ್ಲಿಸಲು ಹೇಳಿದ.
ರ್ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆ
ತನ್ನ ಪಲ್ಸರ್ ಬೈಕ್ ನಿಲ್ಲಿಸಿದ ರಾಹುಲ್ ಏನೆಂದು ವಿಚಾರಿಸಿದರೆ, 'ವಾಹನ ಸ್ಟಾರ್ಟ್ ಆಗುತ್ತಿಲ್ಲ, ಬೆಲ್ ಸರ್ಕಲ್ ಬಳಿ ನನ್ನ ಮನೆ ಇದೆ, ಬೆಲ್ ಸರ್ಕಲ್ ವರೆಗೂ ಟೋ ಮಾಡಿ' ಎಂದು ಕೇಳಿಕೊಂಡ. ರಾಹುಲ್ ಮೊದಲಿಗೆ ಆಗುವುದಿಲ್ಲವೆಂದು ಈಗಾಗಲೇ ಸಮಯ ಆಗಿದೆ ಮನೆಗೆ ತಡವಾಗುತ್ತದೆ ಎಂದ. ಆದರೆ ಮುಸ್ಲಿಂ ಯುವಕ 'ಅಮ್ಮ ಮನೆಯಲ್ಲಿ ಒಬ್ಬಳೇ ಇದ್ದಾಳೆ, ತಡವಾಗಿಬಿಟ್ಟಿದೆ, ಕೈಮುಗಿಯುತ್ತೇನೆ ಬೆಲ್ ಸರ್ಕಲ್ ವರೆಗೂ ಟೋ ಮಾಡಿ ಸಾಕು' ಎಂದು ಅಂಗಲಾಚಿದ.
ಟೋ ಮಾಡಲು ಪ್ರಾರಂಭಿಸಿದ ರಾಹುಲ್
ಬೆಲ್ ಸರ್ಕಲ್ ಹೆಚ್ಚೇನು ದೂರವಿಲ್ಲವೆಂದುಕೊಂಡ ರಾಹುಲ್, ಗಾಡಿ ಸ್ಟಾರ್ಟ್ ಮಾಡಿ ಮುಸ್ಲಿಂ ಯುವಕನ ಗಾಡಿಯನ್ನು ಟೋ ಮಾಡಿದ. ಬೆಲ್ ಸರ್ಕಲ್ ಬಂತು. 'ಇನ್ನು ಸ್ವಲ್ಪ ದೂರ ಟೋ ಮಾಡಿಬಿಡಿ ಇಲ್ಲೇ ನನ್ನ ಮನೆ ಇದೆ, ಇಳಿಜಾರಿದೆ ಟೋ ಮಾಡಲು ಕಷ್ಟವಾಗುವುದಿಲ್ಲ' ಎಂದು ಮನವಿ ಮಾಡಿದ.
ಗಾಡಿ ಸ್ಟಾರ್ಟ್ ಆಗಿ ಮತ್ತೆ ನಿಂತಿತು
ಇಷ್ಟು ದೂರವೇ ಬಂದಿರುವಾಗ ಇನ್ನು ಸ್ವಲ್ಪ ದೂರ ಟೋ ಮಾಡಿಬಿಡೋಣವೆಂದು ರಾಹುಲ್ ಗಾಡಿಯನ್ನು ತಳ್ಳಿದ. ಗಂಗಮ್ಮ ಬೀದಿಗೆ ಬರುತ್ತಲೇ ವಾಹನ ನಿಲ್ಲಿಸಿದ ಮುಸ್ಲಿಂ ಯುವಕ, ತನ್ನ ಕೆಟ್ಟ ಗಾಡಿಯನ್ನು ಒಂದೆರಡು ಬಾರಿ ಕಿಕ್ ಮಾಡಿದ ಒಂದು ಬಾರಿ ಗಾಡಿ ಸ್ಟಾರ್ಟ್ ಆಗಿ ಮತ್ತೆ ನಿಂತುಹೋಯಿತು.
'ಕರೆ ಮಾಡಿಕೊಡುತ್ತೇನೆ ಮೊಬೈಲ್ ಕೊಡಿ'
'ನಿಮ್ಮ ಮೊಬೈಲ್ ಕೊಡಿ ಒಂದು ಕರೆ ಮಾಡಿಕೊಡುತ್ತೇನೆ' ಎಂದು ರಾಹುಲ್ನಿಂದ ಮೊಬೈಲ್ ಪಡೆದುಕೊಂಡು ಯಾರಿಗೋ ಕರೆ ಮಾಡಿದ, ಕರೆ ಮಾಡಿ ಮೊಬೈಲ್ ಅನ್ನು ಕಿಸೆಗೆ ಇಳಿಸಿಕೊಂಡು ಇಲ್ಲೇ ನಿಂತಿರಿ ತಮ್ಮನನ್ನು ಕರೆದುಕೊಂಡು ಬರುತ್ತೇನೆ' ಎಂದು ತನ್ನ ಗಾಡಿಯನ್ನು ತಳ್ಳಲು ಮುಂದಾದ. ಕೂಡಲೇ ರಾಹುಲ್ ಪ್ರತಿರೋಧ ತೋರಿ ಮೊಬೈಲ್ ಕೊಟ್ಟು ಮುಂದೆ ಹೋಗು ಎಂದು ಅವನ ಗಾಡಿಯನ್ನು ಹಿಡಿಯಲು ಯತ್ನಿಸಿದ. ರಾಹುಲ್ನನನ್ನು ಜೋರಾಗಿ ದೂಡಿದ ಮುಸ್ಲಿಂ ಯುವಕ ಕ್ಷಣಾರ್ಧದಲ್ಲಿ ಅಲ್ಲಿಂದ ಪೇರಿ ಕಿತ್ತ.
ಇಡೀ ಬೀದಿ ಖಾಲಿ-ಖಾಲಿ
ಕಂಬದ ಬಳಿ ಹೋಗಿ ಬಿದ್ದ ರಾಹುಲ್ ಸಾವರಿಸಿಕೊಂಡು ಎದ್ದು ಗಾಡಿ ಸ್ಟಾರ್ಟ್ ಮಾಡಿ ಮುಸ್ಲಿಂ ಯುವಕ ಹೋದ ಕಡೆಗೆ ಗಾಡಿ ಹೊಡೆದರೆ ಇಡೀಯ ಬೀದಿ ಖಾಲಿ-ಖಾಲಿ. ಮುಸ್ಲಿಂ ಯುವಕ ಎಲ್ಲಿ ಹೋದ ಎಂಬ ಸುಳಿವೇ ಇಲ್ಲ. ಅದೇ ಸಮಯಕ್ಕೆ ಬಂದ ಪೊಲೀಸರಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸಿದ ರಾಹುಲ್, ಸಹಾಯ ಮಾಡುವಂತೆ ಮನವಿ ಮಾಡಿದ.
ರಾಹುಲ್ ಮೊಬೈಲ್ಗೆ ಪೊಲೀಸರು ಕರೆ ಮಾಡಿದರು
ಮುಸ್ಲಿಂ ಯುವಕ ತೆಗೆದುಕೊಂಡು ಹೋದ ರಾಹುಲ್ನ ಮೊಬೈಲ್ ಸಂಖ್ಯೆಗೆ ಪೊಲೀಸರು ಕರೆ ಮಾಡಿದರು. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ರಾಹುಲ್ ಮತ್ತು ಪೊಲೀಸರು ಕೆಲ ಕಾಲ ಅದೇ ಬೀದಿಯಲ್ಲಿ ಸುತ್ತಾಡಿದರು. ಮುಸ್ಲಿಂ ಯುವಕನ, ಅವನ ಗಾಡಿಯ ಸುಳಿವೇ ಇಲ್ಲ.
ಯುವಕರು ಹೇಳಿದ್ದು ಕೇಳಿ ಗಾಬರಿಗೊಂಡ ರಾಹುಲ್
ಅಲ್ಲಿ ಸಿಕ್ಕ ಅದೇ ಬೀದಿಯ ಯುವಕರನ್ನು ವಿಚಾರಿಸಿದರೆ, 'ನಿಮ್ಮ ಪುಣ್ಯ ಎಂದುಕೊಳ್ಳಿ, ತಳ್ಳಿ ಮೊಬೈಲ್ ಎತ್ತಿಕೊಂಡು ಹೋಗಿದ್ದಾನೆ. ಚಾಕು ಹಾಕಿದ್ದರೆ, ಗುಂಪು ಕರೆಸಿ ನಿಮ್ಮ ಮೇಲೆ ದಾಳಿ ಮಾಡಿ ಎಲ್ಲವನ್ನೂ ಕಿತ್ತುಕೊಂಡು ಹೋಗಿದ್ದರೆ? ನಿಮ್ಮ ಕತ್ತಲ್ಲಿರುವ ಚಿನ್ನದ ಸರ, ಬೆರಳಿನ ಉಂಗುರ ಅವನ ಕಣ್ಣಿಗೆ ಬಿದ್ದಿಲ್ಲ ಬಚಾವಾದಿರಿ? ಮೊಬೈಲ್ ಮತ್ತೊಂದು ತೆಗೆದುಕೊಳ್ಳಬಹುದು ಅಪರಾತ್ರಿ ಅವನನ್ನು ಹುಡುಕುವ ಕೆಲಸ ಸಹ ಅಪಾಯಕಾರಿ, ಮನೆಗೆ ಹೋಗಿ ನಾಳೆ ಪೊಲೀಸ್ ದೂರು ಕೊಡಿ' ಎಂಬ ಸಲಹೆ ನೀಡಿದರು. ಆ ಯುವಕರು ಹೇಳಿದ ಘಟನೆ ಕಣ್ಣೆದುರು ಕಲ್ಪಿಸಿಕೊಂಡ ರಾಹುಲ್ ಸುಮ್ಮನೆ ಮನೆಗೆ ವಾಪಸ್ಸಾದ.