ಎಚ್ಚರಿಕೆ ಗಂಟೆ: ಬೆಂಗಳೂರಿನ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಖಾಲಿ ಖಾಲಿ!
ಬೆಂಗಳೂರು, ಮೇ 03: ಚಾಮರಾಜನಗರ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆಯಿಂದ 24ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತ ರೋಗಿಗಳು ಪ್ರಾಣ ಬಿಟ್ಟಿದ್ದಾರೆ. ಈ ದುರಂತದ ಬೆಂಗಳೂರಿನಲ್ಲಿ ಮರುಕಳಿಸುವುದು ಬೇಡ. ಬೆಂಗಳೂರಿನ ಎರಡು ಆಸ್ಪತ್ರೆಗಳು ಸೋಂಕಿತರಿಗೆ ಆಕ್ಸಿಜನ್ ಖಾಲಿ ಆಗುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಸಂಸದ ಡಿ ಕೆ ಸುರೇಶ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಅಭಾವ ಸೃಷ್ಟಿಯಾಗಿದೆ. ಆರ್ ಟಿ ನಗರದ ಮೆಡೆಕ್ಸ್ ಆಸ್ಪತ್ರೆ ಮತ್ತು ರಾಜರಾಜೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಸಂಜೆ ಐದು ಗಂಟೆ ವೇಳೆಗೆ ವೈದ್ಯಕೀಯ ಆಮ್ಲಜನಕ ಸಂಪೂರ್ಣ ಖಾಲಿ ಆಗಲಿದೆ ಎಂದು ಎಚ್ಚರಿಸಲಾಗಿದೆ.
ಚಾಮರಾಜನಗರ ಆಸ್ಪತ್ರೆ ದುರಂತ; ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
ಕೊವಿಡ್-19 ರೋಗಿಗಳ ಸಂಬಂಧಿಕರಿಗೆ ಮೆಡಕ್ಸ್ ಆಸ್ಪತ್ರೆಯು ನೀಡಿರುವ ನೋಟಿಸ್ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಸೃಷ್ಟಿ ಆಗಿರುವುದರಿಂದ ನಿಮ್ಮ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿರಿ ಎಂದು ಸಂಬಂಧಿಕರಿಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಲಾಗಿದೆ.
ಆರ್ ಆರ್ ನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ:
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ನಮ್ಮ ಆಸ್ಪತ್ರೆಯಲ್ಲಿ 200ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸೋಮವಾರ ಸಂಜೆ 5 ಗಂಟೆ ವೇಳೆಗೆ ನಮ್ಮ ಆಸ್ಪತ್ರೆಯಲ್ಲಿನ ಜೀವ ರಕ್ಷಕ ವೈದ್ಯಕೀಯ ಆಮ್ಲಜನಕ ಖಾಲಿಯಾಗಲಿದೆ. ಸರ್ಕಾರ ತಕ್ಷಣ ಈ ಬಗ್ಗೆ ಲಕ್ಷ್ಯ ವಹಿಸಬೇಕು. ಕೊವಿಡ್-19 ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕವನ್ನು ಒದಗಿಸಬೇಕು ಎಂದು ರಾಜಾಜಿನಗರ್ ವೈದ್ಯಕೀಯ ಕಾಲೇಜು ಅಧಿಕಾರಿ ಮನವಿ ಮಾಡಿಕೊಂಡಿದ್ದಾರೆ.