ಬಿಡಿಎ ಮೂಲೆ ನಿವೇಶನ ಹಂಚಿಕೆ ಅಕ್ರಮ: ಆರೋಪಿ ಲಕ್ಷ್ಮಣ್ ಮತ್ತು ರಾಮ್ ಪ್ರಭುಗೆ ನಿರೀಕ್ಷಣಾ ಜಾಮೀನು !
ಬೆಂಗಳೂರು, ಜನವರಿ 13: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಅಕ್ರಮ ಪರಭಾರೆ ಹಗರಣದ ಪ್ರಮುಖ ಆರೋಪಿಗಳಾದ ಲಕ್ಷ್ನಣಕುಮಾರ್ ಹಾಗೂ ಎಚ್. ಆರ್. ರಾಮ್ ಪ್ರಭುಗೆ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಿಡಿಎನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ನಿವೇಶನ ಅಕ್ರಮ ಪರಭಾರೆ ಆರೋಪ ಕುರಿತು ಬಿಡಿಎ ಜಾಗೃತ ದಳದ ಪೊಲೀಸ್ ಅಧಿಕಾರಿ ರವಿಕುಮಾರ್ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಿಡಿಎ ಉಪ ಕಾರ್ಯದರ್ಶಿ ಶೀವೇಗೌಡ, ಕಮಲಮ್ಮ, ಸಂಪತ್, ಪವಿತ್ರಾ, ಏಜೆಂಟ್ ಇಂದ್ರ ಕುಮಾರ್ ವಿರುದ್ಧ ದೂರು ನೀಡಿದ್ದರು. ಏಜೆಂಟ್ ಇಂದ್ರಕುಮಾರ್ ಕಚೇರಿಯಲ್ಲಿ ಬಿಡಿಎಗೆ ಸಂಬಂಧಿಸಿದ ಸೀಲ್, ದಾಖಲೆಗಳು ಇದ್ದು, ಇವು ಬಳಿಸಿಕೊಂಡು ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ಪರೆಭಾರೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ಸಾಕ್ಷಿಗಳನ್ನು ಸಂಗ್ರಹಿಸಿ ಬಿಡಿಎ ಜಾಗೃತ ದಳಕ್ಕೆ ನೀಡಿದ್ದರು. ಇದನ್ನು ಆಂತರಿಕ ತನಿಖೆ ನಡೆಸಿದ ಬಿಡಿಎ ಜಾಗೃತ ದಳದ ಅಧಿಕಾರಿಗಳು ಅಕ್ರಮ ನಡೆದಿರುವ ಬಗ್ಗೆ ವರದಿ ನೀಡಿದ್ದರು.
ಬಿಡಿಎ ಉಪ ಕಾರ್ಯದರ್ಶಿ ಶಿವೇಗೌಡ ಹಾಗೂ ಇತರರು ಖಾಸಗಿ ಏಜೆಂಟ್ ಇಂದ್ರಕುಮಾರ್ ಜತೆ ಶಾಮೀಲಾಗಿ ಅಕ್ರಮ ಎಸಗಿದ್ದರು. ಬಿಡಿಗೆ ಸೇರಿದ ಕರಾರು ಪತ್ರಗಳು ಸ್ವಾಧೀನ ಪತ್ರ, ನಿವೇಶನ ಖಚಿತ ಅಳತೆ ಪತ್ರಗಳನ್ನು ಏಜೆಂಟ್ ಇಂದ್ರಕುಮಾರ್ ಗೆ ನೀಡಿದ್ದರು. ಈತ ನಕಲಿ ದಾಖಲೆಗಳನ್ನು ಸೃಷ್ಟಿಡಿ ಬಿಡಿಎಗೆ ಸೇರಿದ ನಿವೇಶಗಳನ್ನು ಖಾಸಗಿಯವರಿಗೆ ಅಕ್ರಮವಾಗಿ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ಲಾಭ ಪಡೆದುಕೊಂಡಿದ್ದ. ಅಕ್ರಮದ ಹಣವನ್ನು ಆರೋಪಿತ ಅಧಿಕಾರಿಗಳು ಪಡೆದುಕೊಂಡಿದ್ದರು.
ಕೋಟ್ಯಂತರ ಬೆಲೆ ಬಾಳುವ ಬಿಡಿಎ ನಿವೇಶನಗಳನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡಿದ್ದ ಸಂಗತಿ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಕುರಿತು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಬಿಡಿಎ ಜಾಗೃತ ದಳದ ಅಧಿಕಾರಿ ರವಿಕುಮಾರ್ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಉಪ ಕಾರ್ಯದರ್ಶಿ ಶಿವೇಗೌಡ , ಏಜೆಂಟ್ ಶೀವೇಗೌಡ ಹಾಗೂ ಇತರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.
ಹೆಚ್ಚಿನ ತನಿಖೆಯಲ್ಲಿ ಲಕ್ಷ್ನಣ್ ಕುಮಾರ್, ರಾಮ್ ಪ್ರಭು ಇತರರು ಕೂಡ ಈ ಅಕ್ರಮದಲ್ಲಿ ಶಾಮೀಲಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಕುರಿತು ಹೆಚ್ಚುವರಿ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದರು. ಈ ಹಂತದಲ್ಲಿಯೇ ನಿರೀಕ್ಷಣಾ ಜಾಮೀನು ಕೋರಿ ಲಕ್ಷ್ನಣ್ ಕುಮಾರ್ ಮತ್ತು ರಾಮ್ ಪ್ರಭು ನ್ಯಾಯಾಲಯದ ಮೊರೆ ಹೋಗಿದ್ದರು. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯಪ್ಪ ಹಾಗೂ ಬಿ. ಸಿದ್ದೇಶ್ವರ ವಾದ ಮಂಡಿಸಿದ್ದರು. ಬಿ. ಸಿದ್ದೇಶ್ವರ ಅವರ ವಾದ ಆಲಿಸಿದ ನ್ಯಾಯಾಲಯ ಇಬ್ಬರು ಆರೋಪಿಗಳಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪೊಲೀಸರ ತನಿಖೆಗೆ ಸಹಕರಿಸುವ ಷರತ್ತು ವಿಧಿಸಲಾಗಿದೆ. ಬಿಡಿಎ ಬಹು ಕೋಟಿ ಹಗರಣದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ಅಧೀನ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದ್ದು, ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬಿಡಿಎ ನಕಲಿ ನಿವೇಶನ ಅಕ್ರಮ: ರಾಜಧಾನಿ ಬೆಂಗಳೂರಿನಲ್ಲಿ ಬಡವರಿಗೆ ನಿವೇಶನ ಕೊಡುವ ಉದ್ದೇಶದೊಂದಿಗೆ ರಚನೆಯಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಲೇಔಟ್ ನಿರ್ಮಾಣಕ್ಕಾಗಿ ರೈತರ ಜಮೀನು ವಶಪಡಿಸಿಕೊಂಡಿತ್ತು. ಅದರಲ್ಲಿ ಸುಮಾರು ದಲಿತ ಕುಟುಂಬಗಳ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಪರಿಹಾರ ನೀಡುವಲ್ಲಿ ತಾರತಮ್ಯವಾಗಿತ್ತು. ಬಿಡಿಎ ನೀಡಿದ್ದ ಪರಿಹಾರ ಪ್ರಶ್ನಿಸಿ ಭೂಮಿ ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಬಿಡಿಎ ಭೂ ಸ್ವಾಧೀನಕ್ಕೆ ಒಳಪಟ್ಟಿರುವ 541 ದಲಿತರಿಗೆ ಪುನರ್ ವಸತಿ ಕಲ್ಪಿಸುವಂತೆ ಸುಪ್ರೀಂಕೋರ್ಟ್ ನಿರ್ದೆಶನ ನೀಡಿತ್ತು. ಅದರಂತೆ ಕಳೆದ ಎರಡು ದಶಕಗಳಿಂದ ದಲಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ಮುಂದುವರೆದಿದೆ.
Recommended Video
ಇದರ ಜಾಡು ಹಿಡಿದ ಕೆಲವು ಅಧಿಕಾರಿಗಳು ಏಜೆಂಟರ ಜತೆ ಶಾಮೀಲಾಗಿ ಅರ್ಹರಿಗೆ ಮಂಜೂರು ಮಾಡಬೇಕಿರುವ ನಿವೇಶನಗಳನ್ನು ಬೇರೆಯವರಿಗೆ ಅಕ್ರಮ ಪರಭಾರೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಸುಮಾರು ನಿವೇಶನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎನಿಂದ ಮಂಜೂರಾದ ದಾಖಲೆಗಳನ್ನು ಸೃಷ್ಟಿಸಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡಿದ್ದಾರೆ. ಬಿಡಿಎ ಸ್ವಾಧೀನದಿಂದ ಭೂಮಿ ಕಳೆದುಕೊಂಡಿದ್ದವರ ಹಿತ ರಕ್ಷಣೆಗಾಗಿ ರಚಿಸಿದ್ದ ದಲಿತ ಕಲ್ಯಾಣ ಸಮಿತಿಯ ಆಯಕಟ್ಟಿನ ಜಾಗದಲ್ಲಿದ್ದ ಲಕ್ಷ್ನಣ ಕುಮಾರ್ ಮತ್ತು ರಾಮ್ ಪ್ರಭು ಸಹೋದರರು ಕೂಡ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.