ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಬಿಡಿಎ ಆಯುಕ್ತರ ಆದೇಶ ವಾಪಸ್ ತೆಗೆದುಕೊಳ್ಳಿ : ಆಮ್ ಆದ್ಮಿ ಪಕ್ಷದ ಆಗ್ರಹ
ಬೆಂಗಳೂರು, ಆ. 2: ಲೋಕಾಯುಕ್ತ ,ಎಸಿಬಿ, ಬಿಎಂಟಿಎಫ್ ಇವುಗಳಲ್ಲಿ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ಬಿಡಿಎ ಅಧಿಕಾರಿಗಳು ಹಾಜರಾಗುವುದಕ್ಕೆ ಅಥವಾ ಮಾಹಿತಿ ನೀಡುವುದಕ್ಕೆ ಬಿಡಿಎ ಆಯುಕ್ತರ ಪೂರ್ವಾನುಮತಿ ಅತ್ಯಗತ್ಯ ಎಂಬ ನೂತನ ಆದೇಶವನ್ನು ಹೊರಡಿಸಲಾಗಿದೆ.
Recommended Video
ಈ ಬಿಡಿಎ ಆಯುಕ್ತರ ಆದೇಶವು ಈ ನೆಲದ ಮೂಲ ಕಾನೂನಿಗೆ ವಿರುದ್ಧವಾಗಿದ್ದು ಭ್ರಷ್ಟಾಚಾರಿಗಳಿಗೆ ಮತ್ತಷ್ಟು ರಕ್ಷಣೆ ನೀಡುವಂತಹ ಕರಾಳ ಆದೇಶವಾಗುತ್ತದೆ.
308 ನಿವೇಶನಗಳ ಇ-ಹರಾಜು ಜುಲೈ 20ರಿಂದ ಪ್ರಾರಂಭ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಳೆದ ಹಲವು ವರ್ಷಗಳಿಂದ ಸಾವಿರಾರು ಕೋಟಿ ಕೋಟಿ ರೂಗಳ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ಇಲ್ಲಿನ ಅಧಿಕಾರಿಗಳನ್ನು ತನಿಖೆಗೊಳಪಡಿಸಲು ಅಥವಾ ವಿಚಾರಣೆಗೊಳಪಡಿಸಲು ಈ ಆದೇಶವು ಮತ್ತಷ್ಟು ಅಡ್ಡಿಯನ್ನುಂಟು ಮಾಡುತ್ತದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಮೂಲ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವ ಆಯುಕ್ತರ ಈ ಆದೇಶ ಅತ್ಯಂತ ಹೇಯಕರ ಹಾಗೂ ಖಂಡನೀಯ.
ಈ ಆದೇಶ ಯಡಿಯೂರಪ್ಪನವರ ಮುಖ್ಯಮಂತ್ರಿ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರವು ಬೆಂಗಳೂರು ಅಭಿವೃದ್ಧಿಯ ನೆಪದಲ್ಲಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ಸರ್ಕಾರಿ ಜಾಗಗಳನ್ನು ನುಂಗಿ ಭ್ರಷ್ಟಾಚಾರವೆಸಗಿ ದರ್ಪವನ್ನು ಮೆರೆಯುತ್ತಿರುವ ಅಧಿಕಾರಿಗಳನ್ನು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳನ್ನು ರಕ್ಷಿಸುವ ಹುನ್ನಾರವೇ ಹೊರತು ಬೇರೇನೂ ಅಲ್ಲ.
ನಿವೇಶನ ಇ-ಹರಾಜಿಗೆ ಅರ್ಜಿ ಕರೆದ ಬಿಡಿಎ; ಎಲ್ಲೆಲ್ಲಿ ಇವೆ ಸೈಟ್
ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರೇ ನಿಮ್ಮ ಮೂಗಿನ ಕೆಳಗೆ ಇಂತಹ ಅಸಂವಿಧಾನಿಕ ಆದೇಶ ನಡೆದಿದ್ದರೂ ಮಗನಿಗೆ ಅಧಿಕಾರ ಕೊಡಿಸುವುದರಲ್ಲೇ ಕಾಲ ಕಳೆಯುತ್ತಿರುವ ನಿಮ್ಮ ನಡೆ ನಾಚಿಕೆಗೇಡು. ನಿಮ್ಮದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರ "ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ" ಮಾತಿಗಾದರೂ ಸ್ವಲ್ಪ ಬೆಲೆ ಕೊಡಬಾರದೇ.
ಲಾಲ್ಡೌನ್ ಸಂದರ್ಭದಲ್ಲಿ ಬಿಡಿಎ ವ್ಯಾಪ್ತಿಯಲ್ಲಿ ಸಾಕಷ್ಟು ಗೋಲ್ಮಾಲ್ ನಡೆದಿದೆ. ಇದನ್ನು ಸಾರ್ವಜನಿಕರು ಪ್ರಶ್ನಿಸಬಾರದು ಎನ್ನುವ ಹುನ್ನಾರ ಇಲ್ಲಿ ಕಾಣುತ್ತಿದೆ. ಅಲ್ಲದೇ ಕಳೆದ ಹಲವು ವರ್ಷದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮೂಲಕ ಅರ್ಜಿ ಸಲ್ಲಿಸಿದರೂ ಸಹ ಸರಿಯಾದ ಮಾಹಿತಿ ನೀಡದ ಕೆಟ್ಟ ಪರಿಪಾಠ ರಾಜ್ಯದಲ್ಲಿ ಬೆಳೆಯುತ್ತಿದೆ. ಇಡೀ ಭಾರತಕ್ಕೆ ಮಾದರಿಯಾದ ಆಡಳಿತ ನೀಡುತ್ತಿದ್ದ ಕರ್ನಾಟಕವನ್ನು ಜಂಗಲ್ ರಾಜ್ಯ ಮಾಡಲು ಹೊರಟಿರುವ ನಿಮ್ಮ ಆಡಳಿತ ವೈಖರಿ ಹೇಸಿಗೆ ತರುವಂತಿದೆ.
ನಿಮ್ಮ ಹಾಗೂ ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಚಿತಾವಣೆ ಇಲ್ಲದೆ ಒಬ್ಬ ಸಾಮಾನ್ಯ ಅಧಿಕಾರಿ ಈ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ. ಆದ ಕಾರಣ ಭ್ರಷ್ಟಾಚಾರಿಗಳನ್ನು ರಕ್ಷಿಸುವಂತಹ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಈ ಆದೇಶ ನೀಡಿದ ಬಿಡಿಎ ಆಯುಕ್ತ ಎಚ್.ಆರ್.ಮಹದೇವ್ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
ಅಧಿಕಾರ ವಹಿಸಿಕೊಂಡ ತಕ್ಷಣ 24 ಗಂಟೆಯೊಳಗೆ ಲೋಕಾಯುಕ್ತ ಜಾರಿಗೆ ತರುತ್ತೇವೆ ಎಂದು ಗುಡುಗಿದ್ದ ನೀವು, ಬೆಕ್ಕಿಗೆ ಹೆದರಿದ ಇಲಿಯಂತಾಗಿದ್ದೀರಿ ಈ ವಿಷಯದಲ್ಲಾದರೂ ದೈರ್ಯ ಮಾಡುವಿರಾ ಎಂದು ಆಮ್ ಆದ್ಮಿ ಪಕ್ಷ ಕಾದು ನೋಡುತ್ತದೆ. ಇಲ್ಲದಿದ್ದರೆ ಬಿಡಿಎ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದರ ಮೂಲಕ ತೀವ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ ಹೇಳಿದ್ದಾರೆ.