ರಹಸ್ಯವಾಗಿ 2.75 ಎಕರೆ ಭೂಮಿ ಗುತ್ತಿಗೆ ನೀಡಿದ ಬಿಡಿಎ!
ಬೆಂಗಳೂರು, ಜೂನ್ 22: ಐತಿಹಾಸಿಕ ಮತ್ತು ಭೌಗೋಳಿಕವಾಗಿಯೂ ಮಹತ್ವ ಹೊಂದಿರುವ ಬೆಂಗಳೂರು ಉತ್ತರ ಭಾಗದಲ್ಲಿನ ಕೋಟ್ಯಂತರ ರೂ.ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಟ್ರಸ್ಟ್ ವೊಂದಕ್ಕೆ ರಹಸ್ಯವಾಗಿ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬೆಂಗಳೂರು ಉತ್ತರ ಭಾಗದಲ್ಲಿನ ಸುಮಾರು 100 ಕೋಟಿ ರೂ. ಬೆಲೆ ಬಾಳುವ 2.75 ಎಕರೆ ಭೂಮಿಯನ್ನು ಯಾರಿಗೂ ಗೊತ್ತಾಗದಂತೆ ಶೈಕ್ಷಣಿಕ ಟ್ರಸ್ಟ್ವೊಂದಕ್ಕೆ ಗುತ್ತಿಗೆ ರೂಪದಲ್ಲಿ 30 ವರ್ಷಕ್ಕೆ ನೀಡಿದೆ.
ಜಕ್ಕೂರು ಮತ್ತು ಆರ್ಕಾವತಿ ಬಡಾವಣೆ ಮಧ್ಯದ ಸಂಪಿಗೇಹಳ್ಳಿ ಸಮೀಪದಲ್ಲಿರುವ ಸರ್ವೇ ನಂಬರ್ 37ರ 11,128 ಚದರ ಕಿ.ಮೀ. (2.75ಎಕರೆ) ಭೂಮಿಯನ್ನು ನೀಡಿದೆ. ಬಿಡಿಎ ಸಿದ್ದೇಶ್ವರ ಶಿಕ್ಷಣ ಟ್ರಸ್ಟ್ಗೆ ಶಿಕ್ಷಣದ ಉದ್ದೇಶಕ್ಕಾಗಿ ಕಳೆದ ತಿಂಗಳು ಗುತ್ತಿಗೆ ನೀಡಿತ್ತು. ಜತೆಗೆ 'ನಾಗರಿಕ ಸೌಕರ್ಯ ನಿವೇಶನ ಸ್ವಾಧೀನ ಪ್ರಮಾಣ ಪತ್ರ ಹಸ್ತಾಂತರಿಸುವ ಮೂಲಕ ಗುತ್ತಿಗೆಯ ಎಲ್ಲ ನಿಯಮಗಳನ್ನು ಬಿಡಿಎ ಪೂರ್ಣಗೊಳಿಸಿದೆ ಎಂದು ತಿಳಿದು ಬಂದಿದೆ.
ಸಾರ್ವಜನಿಕರ ಒತ್ತಾಯ ಏನು?; ಐತಿಹಾಸಿಕ ಮಹತ್ವ ಹೊಂದಿರುವ ಒಟ್ಟು 100 ಕೋಟಿ ರೂ. ಮೌಲ್ಯದ ಈ ಪ್ರದೇಶ ಪುರಾತನ ಸ್ಮಾರಕಗಳು, ಜಲಮೂಲವನ್ನು ಹೊಂದಿದೆ. ಹೀಗಾಗಿ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳಿಯ ನಿವಾಸಿಗಳು ಆಗ್ರಹಿಸಿದ್ದಾರೆ.
2014ರ ದಾಖಲಾತಿಗಳ ಮಾಹಿತಿ ಪ್ರಕಾರ, ಗುತ್ತಿಗೆ ನೀಡಿರುವ ಈ ಜಮೀನು ಗೋಮಾಳಕ್ಕೆ ಸೇರಿದ್ದಾಗಿದೆ. ಗೋಪುರ ರೀತಿಯಲ್ಲಿ ಬಂಡೆಗಳನ್ನು ಒಳಗೊಂಡಿರುವ ಈ ಬೃಹತ್ ಜಾಗ ಸರ್ವೇ ನಂಬರ್ 37 ಮತ್ತು 87ಕ್ಕೆ ವಿಸ್ತರಿಸಿಕೊಂಡಿದೆ.
ಮುಖ್ಯವಾಗಿ ಇಲ್ಲಿನ ಗೋಪುರ ಕುರಿತು 1800ರಿಂದಲೂ ವೈಜ್ಞಾನಿಕ ಸಮೀಕ್ಷೆ ನಡೆದಿದೆ. ಈ ಸಮೀಕ್ಷೆ ಪ್ರಕಾರ ಹೆಣ್ಣೂರು, ಮೇಕ್ರಿ ವೃತ್ತದ ಭೌಗೋಳಿಕ ಅಂಶವನ್ನು ನಕ್ಷೆಯಲ್ಲಿ (ಮ್ಯಾಪ್) ಸೇರಿಸಲು ಈ ಗೋಪುರವನ್ನು ಕೇಂದ್ರ ಬಿಂದುವಾಗಿ ಇರಿಸಿಕೊಳ್ಳಲಾಗಿದೆ. ನಗರದಲ್ಲಿ ಜಿಎಸ್ಟಿ ಟವರ್ ನಿರ್ಮಿಸುವಲ್ಲಿ ಈ ಗೋಪುರ ಮಹತ್ವದ ಪಾತ್ರ ವಹಿಸಿದೆ.
ಒಪ್ಪಂದದಿಂದ ಜನರಲ್ಲಿ ಆತಂಕ; ಬಿಡಿಎ 30 ವರ್ಷಕ್ಕೆ ಗುತ್ತಿಗೆ ನೀಡಿ ಒಪ್ಪಂದ ಮಾಡಿಕೊಂಡಿರುವುದರಿಂದ ಐತಿಹಾಸಿಕ ಮಹತ್ವ ಸಾರುವ ಗೋಪುರಕ್ಕೆ ಅಪಾಯ ತರುವ ಸಾಧ್ಯತೆ ಇದೆ ಎಂದು ಇತಿಹಾಸಕಾರರು, ಸ್ಥಳಿಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಪ್ರದೇಶದಲ್ಲಿರುವ ವೆಂಕಟೇಶ್ವರ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಕೆರೆಯಲ್ಲಿ ತ್ಯಾಜ್ಯ, ಅವಶೇಷಗಳನ್ನು ಎಸೆಯುವುದು ತಪ್ಪಲಿದೆ ಎಂದು ಮನವಿ ಮಾಡಿದ್ದಾರೆ.
ಕೆರೆ ಒತ್ತುವರಿ ತಡೆಯಲು ಬಿಡಿಎ ಆದಷ್ಟು ಶೀಘ್ರವೇ ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸಬೇಕು ಎಂದು ಬಿಡಿಎ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಬಿಡಿಎ ಅಧ್ಯಕ್ಷ ಎಸ್. ಆರ್ ವಿಶ್ವನಾಥ ಪ್ರತಿಕ್ರಿಯಿಸಿ, "ಸಾರ್ವಜನಿಕ ಉದ್ದೇಶಕ್ಕಾಗಿ ಸ್ಥಳವನ್ನು ಬಹಳ ವರ್ಷಗಳ ಹಿಂದೆಯೆ ನೀಡಲಾಗಿದೆ. ಆದರೆ ಗೋಪುರವಿರುವ ಪ್ರದೇಶವನ್ನು ಯಾವುದೇ ಕಾರಣಕ್ಕೂ ಗುತ್ತಿಗೆ ನೀಡಲಾಗುವುದಿಲ್ಲ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಿದ್ದೇವೆ" ಎಂದು ಭರವಸೆ ನೀಡಿದ್ದಾರೆ.
Recommended Video