RTPCR ಟೆಸ್ಟ್: ಬಿಬಿಎಂಪಿ "ಬಿಯು" ನಂಬರ್ "ಕಪಟ ನಾಟಕ" ಬಯಲು
ಬೆಂಗಳೂರು, ಏಪ್ರಿಲ್ 24: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಕೈ ಮೀರಿದೆ. ಗಲ್ಲಿ ಗಲ್ಲಿಯಲ್ಲೂ ಕೊರೊನಾ ನೋವಿನ ಕೂಗುಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಒಂದೇ ದಿನ 27 ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿವೆ. ರಾಜಧಾನಿಯಲ್ಲಿ ಒಂದೇ ದಿನ 16 ಸಾವಿರ ಕೋವಿಡ್ ಪ್ರಕರಣ ದಾಖಲಾಗಿವೆ. ಬೆಂಗಳೂರು ಒಂದರಲ್ಲೇ 124 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು ದೃಢವಾದವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಸತ್ತವರ ಸಂಸ್ಕಾರಕ್ಕೂ ಜಾಗವಿಲ್ಲದೇ ರಾಜಧಾನಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಕೊರೊನಾ ಸೋಂಕಿಗೆ ಜನ ಸಾಯುತ್ತಿದ್ದರೂ ಬಿಬಿಎಂಪಿ ಪರಿಚಯಿಸಿರುವ ಬಿಯು ನಂಬರ್ "ಕೊರೊನಾ ಬೆಡ್ ಸ್ಕೀಮ್" ಭ್ರಷ್ಟಾಚಾರದ ಕೂಪವಾಗಿ ಬದಲಾಗಿದೆ. ಇದಕ್ಕೆ ಮುಗ್ಧರ ಜೀವ ಬಲಿಯಾಗುತ್ತಿದೆ.
ಬಿಯು ನಂಬರ್ ಮತ್ತು ಆರ್ಟಿಪಿಸಿಆರ್ ಟೆಸ್ಟ್: ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50 ಹಾಸಿಗೆಗಳನ್ನು ಸರ್ಕಾರ ವಶಕ್ಕೆ ಪಡೆದಿದೆ. ಕೊರೊನಾ ಚಿಕಿತ್ಸೆಗೆ ಸರ್ಕಾರದ ವತಿಯಿಂದ ಬೆಡ್ ಸಿಗಬೇಕಾದರೆ ಮೊದಲು ಬಿಬಿಎಂಪಿಯಿಂದ "ಬಿಯು" ನಂಬರ್ ಪಡೆಯಬೇಕು. ಒಬ್ಬ ಕೊರೊನಾ ಸೋಂಕಿತನಿಗೆ ಬಿ.ಯು ನಂಬರ್ ಸಿಗಬೇಕಾದರೆ (ಬಿಬಿಎಂಪಿ ವತಿಯಿಂದ ಕೊಡುವ ಯೂನಿಕ್ ನಂಬರ್) ಮೊದಲು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ದಿನಾಂಕ ನಿಗದಿ, ಮಾರ್ಗಸೂಚಿ ಪ್ರಕಟ
ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬಂದರೆ ಬಿಯು ನಂಬರ್ ಜನರೇಟ್ ಆಗಲ್ಲ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕೂಡಲೇ ಕೊರೊನಾ ಬಂದಿಲ್ಲ ಎಂದು ಭಾವಿಸುವಂತಿಲ್ಲ. ನಿಜವಾಗಿಯೂ ಕೊರೊನಾ ಪಾಸಿಟಿವ್ ಬಗ್ಗೆ ಗೊತ್ತಾಗಬೇಕಾದರೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಗೊತ್ತಾಗುತ್ತದೆ.
ಸಿಟಿ ಸ್ಯ್ಕಾನ್ನಲ್ಲಿ ಪಾಸಿಟಿವ್ ಫಲಿತಾಂಶ ಬಂದರೆ, ಅದನ್ನು ನೀವು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ನಿಮಗೆ ಯಾವ ಕಾರಣಕ್ಕೂ ಬಿಯು ನಂಬರ್ ಕೊಡಲ್ಲ. ಇದು ಬಿಬಿಎಂಪಿ ರೂಪಿಸಿರುವ ಅವೈಜ್ಞಾನಿಕ ಬಿಯು ನಂಬರ್ ವ್ಯವಸ್ಥೆಯ ಕರಾಳ ಕಥೆ.
ಬಿಯು ನಂಬರ್ ಇಲ್ಲ ಅಂದ್ರೆ ಬೆಡ್ ಸಿಗಲ್ಲ:
ಇನ್ನು ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದ್ರೆ ಬಿಬಿಎಂಪಿ ವತಿಯಿಂದ ಬಿ.ಯು ನಂಬರ್ ಸಿಗಲ್ಲ. ಬಿಯು ನಂಬರ್ ಸಿಗಲಿಲ್ಲ ಎಂದರೆ ಸರ್ಕಾರದ ವತಿಯಿಂದ ಆಸ್ಪತ್ರೆಯಲ್ಲಿ ಬೆಡ್ ಮಂಜೂರು ಮಾಡಲು ಸಾಧ್ಯವಿಲ್ಲ. ಬಿಎಂಬಿಪಿ ಕಾಲ್ಸೆಂಟರ್ಗೆ ಕರೆ ಮಾಡಿದರೆ ಯಾರ ಸ್ಪಂದನೆ ಸಿಗುವುದಿಲ್ಲ. ಬಿಬಿಎಂಪಿ ಅಧಿಕಾರಿಗಳಾಗಲೀ, ವೈದ್ಯರಾಗಲೀ ಮಾತೇ ಆಡುವುದಿಲ್ಲ. ಬಿಬಿಎಂಪಿ ರೂಪಿಸಿರುವ "ಬಿಯು ನಂಬರ್ ಸ್ಕೀಮ್" ನಲ್ಲಿ ಜನ ಸಾಮಾನ್ಯರು ಸೌಲಭ್ಯ ಪಡೆಯಲಾಗದೇ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಸರ್ಕಾರಿ ಹಾಸಿಗೆ ಪಡೆಯಲು ಬಿಬಿಎಂಪಿ ರೂಪಿಸಿರುವ ನಿಯಮಗಳನ್ನು ಪಾಲಿಸಲು ಹೋದವರು ಆ ಪ್ರಕ್ರಿಯೆ ಪಾಲನೆ ಮಾಡಲಾಗದೇ ಮನೆಯಲ್ಲಿಯೇ ಜೀವ ಬಿಡುತ್ತಿದ್ದಾರೆ. ಬಿಬಿಎಂಪಿಯ ಬಿಯು ನಂಬರ್ ಸಹವಾಸವೇ ಬೇಡ ಎಂದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ವೈಜ್ಞಾನಿಕವಾಗಿ ಒಂದು ಕಾಲ್ ಸೆಂಟರ್ ತೆರೆಯಬೇಕು. ಸಹಾಯ ಕೋರಿದವರಿಗೆ ಹದಿನೈದು ನಿಮಿಷದಲ್ಲಿ ಸ್ಪಂದನೆ ಸಿಗುವ ಮಾದರಿಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಆನಂತರ ಒಂದು ತಾಸಿನಲ್ಲಿ ಹಾಸಿಗೆ ವ್ಯವಸ್ಥೆ ಮಾಡಬೇಕು. ರೆಮ್ಡೆಸಿವಿರ್ ಸೇರಿದಂತೆ ಸಕಲ ವ್ಯವಸ್ಥೆ ಮಾಡುವ ಎಲ್ಲಾ ಅವಕಾಶಗಳಿದ್ದರೂ ಬಿಬಿಎಂಪಿ ಅಧಿಕಾರಿಗಳು ಸಂಕುಚಿತ ಮನೋಭಾವನೆಯಿಂದ ರೂಪಿಸಿರುವ "ತರ್ಲೆ " ನಿಯಮಗಳಿಂದ ಕೊರೊನಾ ಸೋಂಕಿತರು ಜೀವ ಬಿಟ್ಟು ಸ್ಮಶಾನ ಸೇರುತ್ತಿದ್ದಾರೆ.
ರೆಮ್ಡೆಸಿವಿರ್ ಕಾಳ ಸಂತೆಯಲ್ಲಿ ಮಾರಾಟ
ಬಿಬಿಎಂಪಿ ತರ್ಲೆ ನಿಯಮ ಪಾಲಿಸಲಾಗದೇ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ವ್ಯಾಪಾರಕ್ಕೆ ಇಳಿದಿವೆ.
ಆರು ಸಾವಿರ ಬೆಲೆಯ ರೆಮ್ಡೆಸಿವಿರ್ ಚುಚ್ಚುಮದ್ದನ್ನು 20 ರಿಂದ 30 ಸಾವಿರಕ್ಕೆ ಮಾರಾಟ ಮಾಡುತ್ತಿವೆ. ರೆಮ್ಡೆಸಿವಿರ್ ಚುಚ್ಚು ಮದ್ದು ಬೇಕಾದಷ್ಟು ಇದೆ. ಅದರ ಅಭಾವ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟನೆ ನೀಡುತ್ತಲೇ ಇದ್ದಾರೆ.
ಆದರೆ, ವಾಸ್ತವದಲ್ಲಿ 30 ಸಾವಿರ ಕೊಟ್ಟರೂ ರೆಮ್ಡೆಸಿವಿರ್ ಚುಚ್ಚು ಮದ್ದು ಕೈಗೆಟುಕುತ್ತಿಲ್ಲ. ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿರುವ ಮೆಡಿಕಲ್ ಡಿಸ್ಟ್ರಿಬ್ಯೂಟರ್ಸ್ ಕಾಳ ಸಂತೆಯಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಿಸಿಬಿ ಪೊಲೀಸರು ಆರು ಕೇಸು ದಾಖಲಿಸಿದರೂ ಅದರ ಬಿಸಿ ತಟ್ಟಿಲ್ಲ.
ಯಾಕೆಂದರೆ ಜೀವ ಉಳಿಸುವ ಸಂದರ್ಭದಲ್ಲಿ ಕಾಳ ಸಂತೆಯಲ್ಲಿ ದುಪ್ಪಟ್ಟು ದರ ಕೊಟ್ಟು ಚುಚ್ಚು ಮದ್ದು ಖರೀದಿಸಿದ ಬಗ್ಗೆ ಸರ್ಕಾರಕ್ಕೆ ಲೆಕ್ಕ ಕೊಟ್ಟು ಕೂರಲು ಜನರಿಗೆ ಪುರುಸೊತ್ತು ಇಲ್ಲ.
ಕೊಟ್ಟರೆ ಅದರಿಂದ ಆಗುವ ಪ್ರಯೋಜನವೂ ಏನೂ ಇಲ್ಲ ಎಂಬುದನ್ನು ಅರಿತ ಕೊರೊನಾ ಸೋಂಕಿತರು ಇದೀಗ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.
ಬಿಬಿಎಂಪಿಗಿಂತಲೂ ಬ್ರೋಕರ್ಸ್ ವಾಸಿ
ಬೆಂಗಳೂರು ಮಹಾ ನಗರ ಪಾಲಿಕೆಗಿಂತಲೂ ಬ್ರೋಕರ್ಗಳೇ ವಾಸಿ ಎನ್ನುವಂತಾಗಿದೆ. ಬಿಬಿಎಂಪಿಯಲ್ಲಿ ಬಿಯು ನಂಬರ್ ಪಡೆಯುವಷ್ಟರಲ್ಲಿ ಕೊರೊನಾ ಸೋಂಕಿತನ ಜೀವವೇ ಉಳಿದಿರುವುದಿಲ್ಲ. ಅದೇ ಪ್ರತಿ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಏಜೆಂಟರು ವ್ಯಾಪಾರ ಮಾಡಲು ಶುರು ಮಾಡಿದ್ದಾರೆ. ಪ್ರತಿ ಐಸಿಯು ಬೆಡ್ನ್ನು ಕಮೀಷನ್ ಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಪರಿಸ್ಥಿತಿ ನೋಡಿ ಚಿಕ್ಕ ಪುಟ್ಟ ಆಸ್ಪತ್ರೆಗಳು ಕೂಡ ಹೊಸ ಹಾಸಿಗೆ ಸಿದ್ಧತೆ ಮಾಡಿಕೊಂಡು ಹಣ ವಸೂಲಿ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇಡೀ ಆರೋಗ್ಯ ವ್ಯವಸ್ಥೆಯನ್ನೇ ಖಾಸಗಿ ಆಸ್ಪತ್ರೆಗಳು ಹೈಜಾಕ್ ಮಾಡಿದಂತೆ ಭಾಸವಾಗುತ್ತಿದೆ. ಅಸಹಾಯಕ ಸರ್ಕಾರ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಿ ಕೈಕೊಟ್ಟಿ ಕೂರಿದೆ. ಬಿಬಿಎಂಪಿ ಭ್ರಷ್ಟ ವ್ಯವಸ್ಥೆಗೆ ಜನ ಸಾಮಾನ್ಯರ ಜೀವಗಳೇ ಬಿಕರಿಯಾಗುತ್ತಿರುವುದು ಮಾತ್ರ ಕಳವಳಕಾರಿ ಸಂಗತಿ.
ವಾಸ್ತವ ಚಿತ್ರಣ
ಕೊರೊನಾ ಎರಡನೇ ಅಲೆ ನಮ್ಮ ಒಳಗೆ ಆರಂಭ ಆಗಿದೆ. ಮನೆ, ಮನೆ- ಗಲ್ಲಿ ಗಲ್ಲಿಯಲ್ಲೂ ಕೊರೊನಾ ಹಬ್ಬಿದೆ. ವೀಕೆಂಡ್ ಲಾಕ್ ಡೌನ್ ಮಾಡುವುದರಿಂದ ಜನ ಮನೆಗಳಲ್ಲಿ ಇದ್ದರೂ ಸುತ್ತ ಮುತ್ತಲಿನವರಿಗೆ ಕೊರೊನಾ ಸೋಂಕು ಹರಡಲಿದೆ.
ಈ ಅಂಶವನ್ನು ಪರಿಗಣಿಸಿ ಹೇಳುವುದಾದರೆ ಕೊರೊನಾ ಎರಡನೇ ಅಲೆಗೆ ಲಾಕ್ ಡೌನ್ ಪರಿಹಾರವಲ್ಲ. ಎರಡನೇ ಅಲೆ ನಿಯಂತ್ರಣಕ್ಕೆ ಇರುವುದು ಕೇವಲ ಸರ್ಕಾರ ವೈದ್ಯಕೀಯ ಸೇವೆ ಕಲ್ಪಿಸುವುದು ಒಂದೇ ಉಳಿದಿರುವ ದಾರಿ.
ಆದರೆ ಲಾಕ್ ಡೌನ್ ಮಾಡುವುದರಿಂದ ಕೊರೊನಾ ಸೋಂಕು ಮತ್ತಷ್ಟು ಉಲ್ಭಣವಾಗಲಿದೆ. ಮಿಗಿಲಾಗಿ ಆಸ್ಪತ್ರೆಗಳಿಗೆ ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದರೆ, ಸರ್ಕಾರ ವಾಸ್ತವ ಪರಿಹಾರ ಮಾರ್ಗ ಆಯ್ಕೆ ಮಾಡಿಕೊಳ್ಳುವ ಬದಲಿಗೆ ಲಾಕ್ ಡೌನ್ ಮೊರೆ ಹೋಗಿರುವುದು ಪ್ರಯೋಜನವಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದಿಂದ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ನೂರಾರು ಕೋಟಿ ವೆಚ್ಚ ಮಾಡಿದೆ. ಎರಡನೇ ಅಲೆ ಹೆಚ್ಚುತ್ತಿದ್ದಂತೆ ಸರ್ಕಾರವೂ ಅಸಹಾಯಕತೆ ಪ್ರದರ್ಶಿಸುತ್ತಿದೆ. ಸೋಂಕಿತರಿಗೆ ಸೂಕ್ತ ಬೆಡ್ ವ್ಯವಸ್ಥೆ ಮಾಡುತ್ತಿಲ್ಲ.