ಬಾಲ್ಕನಿಗಳ ಮಾರ್ಪಾಡು ವಿರುದ್ಧ ಜನರಿಗೆ ಬಿಬಿಎಂಪಿ ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರಿನಲ್ಲಿ ಈಚೆಗೆ ಅಪಾರ್ಟ್ಮೆಂಟ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಬಾಲ್ಕನಿಗಳನ್ನು ಮಾರ್ಪಾಡು ಮಾಡುವ ಸಂಬಂಧ ಬಿಬಿಎಂಪಿ ಜನರಿಗೆ ಎಚ್ಚರಿಕೆ ನೀಡಿದೆ.
Recommended Video
ಬುಧವಾರ ಈ ಕುರಿತು ಬಿಬಿಎಂಪಿ ಹೇಳಿಕೆ ನೀಡಿದ್ದು, ಕಟ್ಟಡ ನಿರ್ಮಾಣ ಮಾಡಿದ ನಂತರ ಬಾಲ್ಕನಿಗಳನ್ನು ಮುಚ್ಚುವುದು, ಬಾಲ್ಕನಿಯಲ್ಲಿ ಹೆಚ್ಚುವರಿ ನಿರ್ಮಾಣ ಮಾಡುವುದು ಅಥವಾ ಮಾರ್ಪಾಡು ಮಾಡುವುದು ನಿಯಮಗಳಿಗೆ ವಿರುದ್ಧ ಹಾಗೂ ನಗರದಾದ್ಯಂತ ಈ ಅಸುರಕ್ಷಿತ ಅಭ್ಯಾಸ ಮುಂದುವರೆದಿದೆ ಎಂದು ಬುಧವಾರ ಹೇಳಿದೆ.
ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಮೂವರು ಸಾವು
ಈ ಕುರಿತು ನಗರದ ಎಲ್ಲಾ ವಸತಿ ಅಪಾರ್ಟ್ಮೆಂಟ್ಗಳಿಗೆ ಸುತ್ತೋಲೆ ಹೊರಡಿಸಿದ ಬಿಬಿಎಂಪಿ, 'ಕಟ್ಟಡ ನಿರ್ಮಾಣ ಮಾರ್ಗಸೂಚಿ 2003, ರಾಷ್ಟ್ರೀಯ ಕಟ್ಟಡ ಸಂಹಿತೆ- 2016ರ ಪ್ರಕಾರ, ಒಮ್ಮೆ ಒಸಿ ಹಾಗೂ ಸಿಸಿ ಪಡೆದುಕೊಂಡ ನಂತರ ಬಾಲ್ಕನಿಯಲ್ಲಿ ಹೆಚ್ಚುವರಿ ನಿರ್ಮಾಣ ಅಥವಾ ಮಾರ್ಪಾಡು ಮಾಡುವುದು ಮಾರ್ಗಸೂಚಿಗಳ ನಿಯಮಗಳಿಗೆ ವಿರುದ್ಧವಾಗಿದೆ. ನಗರದಾದ್ಯಂತ ಈ ಅಸುರಕ್ಷಿತ ಅಭ್ಯಾಸ ಕಂಡುಬರುತ್ತಿದೆ' ಎಂದು ಹೇಳಿದೆ.
ಬಿಬಿಎಂಪಿ ಆದೇಶದ ಪ್ರಕಾರ, ವಸತಿ ಸಂಕೀರ್ಣಗಳು ಹಾಗೂ ಕಟ್ಟಡಗಳಲ್ಲಿ ಮಾರ್ಪಾಡು ಅಗತ್ಯವಿದ್ದರೆ ಬಿಬಿಎಂಪಿ ಅಧಿಕಾರಿಗಳಿಂದ ಪೂರ್ವ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಸೆಪ್ಟೆಂಬರ್ 21, ಮಂಗಳವಾರ ಮಧ್ಯಾಹ್ನ ಬೆಂಗಳೂರು ನಗರದ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು.
ಎಂ.ಜಿ. ರಸ್ತೆಯಲ್ಲಿ ತಪ್ಪಿದ ಭಾರೀ ಅಗ್ನಿ ಅವಘಡ: ಐವರು ಪ್ರಾಣಾಪಾಯದಿಂದ ಪಾರು
ಅಪಾರ್ಟ್ಮೆಂಟ್ನ ಫ್ಲ್ಯಾಟ್ ನಲ್ಲಿದ್ದ ಐವರ ಪೈಕಿ ಮೂವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದರು. ಕುಟುಂಬದ ಮಗ ಹಾಗೂ ಮಗಳು ಬೆಂಕಿಯಿಂದ ಬಚಾವ್ ಆಗಿ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
3.30ರ ವೇಳೆಗೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಅಕ್ಕಪಕ್ಕದ ಫ್ಲ್ಯಾಟ್ ಮಂದಿ ಹೊರಗೆ ಓಡಿ ಬಂದು ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಅಲ್ಲದೇ ಮಧ್ಯಾಹ್ನದ ವೇಳೆ ಆಗಿದ್ದರಿಂದ ಬಹುತೇಕ ಜನರು ಕಚೇರಿಗೆ ತೆರಳಿದ್ದರು. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದಂತೆ ಆಗಿದೆ.
ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಮೂರು ಮಹಡಿಗಳವರೆಗೂ ವ್ಯಾಪಿಸಿ ಎಲ್ಲವೂ ಸುಟ್ಟು ಕರಕಲಾಗಿದೆ. ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಮೂರು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಆರಂಭಿಸಿದ್ದರು. ಇದಾಗ್ಯೂ ಮಹಿಳೆಯರನ್ನು ಬೆಂಕಿಯಿಂದ ರಕ್ಷಿಸಲು ಸಾಧ್ಯವಾಗಿರಲಿಲ್ಲ. ನಿರಂತರ ಕಾರ್ಯಾಚರಣೆ ನಡೆಸಿ ಹಲವು ಗಂಟೆಗಳ ನಂತರ ಬೆಂಕಿ ನಂದಿಸಲಾಯಿತು.
ಈ ಅವಘಡ ನಡೆಯುವ ವೇಳೆ ಬಾಲ್ಕನಿಯಲ್ಲಿ ವೃದ್ಧೆಯೊಬ್ಬರು ಸಿಲುಕಿಕೊಂಡಿದ್ದು, ಬೆಂಕಿಯಿಂದ ತಮ್ಮನ್ನು ಕಾಪಾಡುವಂತೆ ಅಂಗಲಾಚುತ್ತಿದ್ದುದು ಕಂಡುಬಂದಿತ್ತು. ಆದರೆ ಬಾಲ್ಕನಿಯಲ್ಲಿ ಗ್ರಿಲ್ ಅಳವಡಿಸಿದ್ದರಿಂದ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಬೆಂಕಿ ನಂದಿಸುವ ಪ್ರಯತ್ನ ಸಾಗಿತಾದರೂ ಕೆಲವೇ ಕ್ಷಣಗಳಲ್ಲಿ ಆ ಮಹಿಳೆ ಸಜೀವದಹನವಾಗಿದ್ದರು. ಆನಂತರ ಬಾಲ್ಕನಿಯಲ್ಲಿ ಗ್ರಿಲ್ ಅಳವಡಿಕೆ ಕುರಿತು ಚರ್ಚೆಗಳು ಕೇಳಿಬಂದಿದ್ದವು. ಗ್ರಿಲ್ ಅಳವಡಿಸದೇ ಇದ್ದಿದ್ದರೆ ಮಹಿಳೆಯನ್ನು ರಕ್ಷಣೆ ಮಾಡಬಹುದಾಗಿತ್ತು ಎನ್ನಲಾಗಿತ್ತು.
ಆದರೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಕುರಿತು ಇನ್ನೂ ನಿಖರ ಮಾಹಿತಿ ದೊರೆತಿಲ್ಲ. ಮೊದಲು ಅಡುಗೆ ಅನಿಲ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ನಂತರ ಶಾರ್ಟ್ ಸರ್ಕ್ಯೂಟ್ ಇದಕ್ಕೆ ಕಾರಣ ಎನ್ನಲಾಗಿತ್ತು. ಇದೀಗ ಮನೆಯಲ್ಲಿಟ್ಟಿದ್ದ ಫ್ರಿಜ್ ಪೈಪ್ ಕೆಟ್ಟಿದ್ದು, ಇದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬೇಗೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆದರೆ ಎಲ್ಲಾ ವಸತಿ ನಿರ್ಮಾಣಗಳಲ್ಲಿ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.