ಬಿಬಿಎಂಪಿ ವಾರ್ಡ್ ಮೀಸಲಾತಿ ಆಕ್ಷೇಪಣೆ; ಚುನಾವಣೆಗೆ ಮುಂದಕ್ಕೆ?
ಬೆಂಗಳೂರು, ಆಗಸ್ಟ್ 08: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯುತ್ತೋ ಇಲ್ಲವೋ ಎನ್ನುವ ಗೊಂದಲ ಹೆಚ್ಚಾಗ ತೊಡಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದೆ. ಆಕ್ಷೇಪಣೆಯನ್ನು ಸಲ್ಲಿಸಲು ಆಗಸ್ಟ್ 9 ಕಡೆಯ ದಿನವಾಗಿರುವುದರಿಂದ ಮತ್ತಷ್ಟು ಆಕ್ಷೇಪಣೆ ಸಲ್ಲಿಕೆಯಾಗಬಹುದು. ಸರ್ಕಾರ ಮುಂದಿನ ನಡೆಯನ್ನು ನೋಡಿಕೊಂಡು ಕಾಂಗ್ರೆಸ್ ನ್ಯಾಯಾಲಯದ ಕದ ತಟ್ಟಲು ತೀರ್ಮಾನಿಸಿದೆ.
ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಅತೀ ಹೆಚ್ಚು ಸಲ್ಲಿಕೆಯಾಗುತ್ತಿರುವುದು ಚುನಾವಣೆಯ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಬಿಬಿಎಂಪಿಯ ಚುನಾವಣೆ ಸದ್ಯ ಬಿಡುಗಡೆಯಾಗಿರುವ 243 ವಾರ್ಡ್ಗಳ ಮೀಸಲಾತಿ ಅನ್ವಯವೇ ನಡೆಯಲಿದೆಯೇ ಅಥವಾ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಬದಲಾಯಿಸಿ ಬಿಡುಗಡೆ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಜಲಾವೃತ ತಡೆಯಲು ಬಿಬಿಎಂಪಿ ವಿಫಲ- ಬೆಳತ್ತೂರಿನಲ್ಲಿ ಪ್ರತಿಭಟನೆ
ಮೀಸಲಾತಿಗೆ ಸಂಬಂಧಿಸಿದ ಆಕ್ಷೇಪಣೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ಸಾಕಷ್ಟು ಸಮಯಾವಕಾಶ ಬೇಕಾಗಿದೆ. ಆಕ್ಷೇಪಣೆಗಳನ್ನು ಪರಿಹರಿಸಿ ಚುನಾವಣಾ ಆಯೋಗಕ್ಕೆ ಮೀಸಲಾತಿ ಪಟ್ಟಿಯನ್ನು ನೀಡಿದ ಬಳಿಕ ಚುನಾವಣೆಯ ದಿನಾಂಕವನ್ನು ಘೋಷಿಸಬಹುದು. ಆದರೆ ಇವೆಲ್ಲಾ ಮುಗಿದು ಈ ವರ್ಷವೇ ಚುನಾವಣೆ ನಡೆಯಲಿದೆಯೇ ಅನ್ನೋ ಅನುಮಾನ ಮೂಡುವಂತಾಗಿದೆ.
ಆಗಸ್ಟ್ 9ಕ್ಕೆ ಆಕ್ಷೇಪಣೆಗೆ ಕೊನೆಯ ದಿನ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಆಗಸ್ಟ್ 9 ಕಡೆಯ ದಿನವಾಗಿದೆ. ಈಗಾಗಲೇ ಮೀಸಲಾತಿಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು. ಮಂಗಳವಾರದೊಳಗೆ ಮತ್ತಷ್ಟು ಆಕ್ಷೇಪಣೆಗಳು ಸಲ್ಲಿಕೆಯಾಗುವುದು ನಿಶ್ಚಿತವಾಗಿದೆ. ಒಟ್ಟು ಎಷ್ಟು ಆಕ್ಷೇಪಣೆಗಳು ಸಲ್ಲಿಕೆಯಾಗಲಿಯೋ ಆ ಆಕ್ಷೇಪಣೆಯನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಶೀಲನೆಯನ್ನು ನಡೆಸಲಿದೆ.
ಸಿಎಂ ನಡೆಯನ್ನು ನೋಡಿ ತೀರ್ಮಾನ
"ಮೀಸಲಾತಿ ಆಕ್ಷೇಪಣೆಗೆ ಮಂಗಳವಾರ ಕೊನೆ ದಿನ ಇದೆ. ಯಾರೆಲ್ಲಾ ಆಕ್ಷೇಪ ಹಾಕಿದ್ದಾರೋ ಹಾಕಲಿ, ನಾವು ಕೂಡ ಆಕ್ಷೇಪ ಹಾಕಿದ್ದೇವೆ. ಸರ್ಕಾರ ಗೈಡ್ ಲೈನ್ಸ್ ಫಾಲೋ ಮಾಡಿಲ್ಲ. ಸಿಎಂಗೆ ಕೊರೋನಾ ಬಂದಿದೆ. ಹಾಗಾಗಿ ನಾವು ಸಿಎಂ ಕಚೇರಿಗೆ ಮುತ್ತಿಗೆ ಹಾಕಿಲ್ಲ. ಸಿಎಂ ಮಾತನಾಡಿಸಲು ಕೂಡ ಈಗ ಆಗಲ್ಲ. ನಾಳೆಯ ಸರ್ಕಾರದ ನಿರ್ಧಾರ ನೋಡಿ ಮುಂದುವರೆಯುತ್ತೇವೆ" ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸರ್ಕಾರ ಕಿತ್ತೊಗೆಯಲು ಹೋರಾಟ
"ಬಿಜೆಪಿ ಸರ್ಕಾರ ಚುನಾವಣೆ ಮೀಸಲಾತಿ ಪಟ್ಟಿಯನ್ನು ತನಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದೆ. ವಾರ್ಡ್ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದು, ಸರ್ಕಾರ ಯಾವುದೇ ಆಕ್ಷೇಪಕ್ಕೂ ಸ್ಪಂದಿಸುವ ಕೆಲಸ ಮಾಡಿಲ್ಲ. ಅವರು ಏನೇ ಮಾಡಲಿ, ನಾವು ಜನರ ಮೇಲೆ ವಿಶ್ವಾಸವಿಟ್ಟು ಜನರ ಮಧ್ಯೆ ಹೋಗುತ್ತೇವೆ. ಬೆಲೆ ಏರಿಕೆ ಮೂಲಕ ದಿನನಿತ್ಯ ಜನರಿಗೆ ನೋವು ನೀಡುತ್ತಿರುವ ಸರ್ಕಾರ ಕಿತ್ತೊಗೆಯಲು ಹೋರಾಟ ಮಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಸಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ಅಡಕತ್ತರಿಯಂತಾಗಿದೆ
ಮೀಸಲಾತಿಯನ್ನು ಪ್ರಕಟಿಸಿದ ಬಳಿಕ ಸಾಕಷ್ಟು ಗೊಂದಲ ಏರ್ಪಟ್ಟಿದೆ. ವಿರೋಧ ಪಕ್ಷ ಮತ್ತು ಸ್ವಪಕ್ಷದಲ್ಲೂ ಮೀಸಲಾತಿ ಪಟ್ಟಿಗೆ ಆಕ್ಷೇಪಣೆಗಳು ಕೇಳಿಬಂದಿದೆ. ಇದರಿಂದಾಗಿ ಸರ್ಕಾರದ ಮೇಲೆ ಮೀಸಲಾತಿ ಬದಲಾವಣೆಗೆ ಒತ್ತಡ ಹಾಕಲು ಸಾಕಷ್ಟು ನಾಯಕರು ಮುಂದಾಗಿದ್ದಾರೆ. ಮೀಸತಾತಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಕಡೆಯ ದಿನ ಕಳೆದ ಮೇಲೆ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಅನ್ನೋದರ ಮೇಲೆ ಬಿಬಿಎಂಪಿ ಚುನಾವಣೆಯ ಭವಿಷ್ಯ ನಿರ್ಧಾರವಾಗಲಿದೆ.