ಬಿಬಿಎಂಪಿ ವಾರ್ಡ್ ಮೀಸಲಾತಿ ವಿವಾದ: ನ್ಯಾಯಾಲಯಕ್ಕೆ ಹೋಗಲು ಕಾಂಗ್ರೆಸ್ ಚಿಂತನೆ
ಬೆಂಗಳೂರು, ಆಗಸ್ಟ್ 05: ಬಿಬಿಎಂಪಿ 243 ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಅವಕ್ಕಾಗಿ ಹೋಗಿದ್ದಾರೆ. ತಮಗೆ ಬೇಕಾದಂತೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಹರಿಹಾಯ್ದಿದ್ದಾರೆ. ಬೆಂಗಳೂರಿನ ಯಾವ ಶಾಸಕರು ಏನು ಹೇಳಿದ್ದಾರೆ ಅನ್ನೋದ ಮಾಹಿತಿ ಇಲ್ಲಿದೆ.
ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮೀಸಲಾತಿ ಪಟ್ಟಿಯಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸಲಾಗಿದೆ. ಬಿಜೆಪಿ ಶಾಸಕರು , ಸಚಿವರಿರುವ ಕ್ಷೇತ್ರಗಳಿಗೆ ಅನುಕೂಲವಾಗುವಂತೆ ಕಾಂಗ್ರೆಸ್ ಪಕ್ಷಕ್ಕೆ ಅನಾನುಕೂಲವಾಗುವಂತೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟ ಮಾಡಿ ಆಕ್ಷೇಪಣೆಯನ್ನು ಸಲ್ಲಿಸಲು 7 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ಈ ವೇಳೆಯಲ್ಲಿ ಹೆಚ್ಚು ಆಕ್ಷೇಪಣೆಗಳು ಬಂದರೆ ಪರಿಶೀಲನೆಗೆ ಕಾಲಾವಕಾಶವನ್ನು ನ್ಯಾಯಾಲಯದಲ್ಲಿ ಪಡೆಯಬಹುದಾಗಿದೆ. ಆದರೆ ಬಿಬಿಎಂಪಿ ಸದಸ್ಯರಿಲ್ಲದೇ 2 ವರುಷವಾಗಿದೆ. ಇನ್ನು ಚುನಾವಣೆಯನ್ನು ಮುಂದೂಡುವುದು ಸರಿಯಲ್ಲ. ಆದರೆ ಮೀಸಲಾತಿ ಸರಿಯಾಗಿ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ಮೀಸಲಾತಿ ಮಾರ್ಗಸೂಚಿಯಂತೆ ಮಾಡಿಲ್ಲ
ನ್ಯಾಯಾಲಯವು 7 ದಿನಗಳ ಗಡುವು ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ. ಮೀಸಲಾತಿಯನ್ನು ಮಾಡಲು ಮಾರ್ಗಸೂಚಿ ಇದೆ. ಆದರೆ ಈ ಮಾರ್ಗಸೂಚಿ ಪ್ರಕಾರ ಮೀಸಲಾತಿ ಮಾಡಿಲ್ಲ. ಮಾರ್ಗಸೂಚಿಯನ್ನು ಸರ್ಕಾರಕ್ಕೆ ಕಳುಹಿಸಿದ್ದರೂ ಅದಕ್ಕೆ ಸರ್ಕಾರಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಆದರೂ ಮೀಸಲಾತಿ ಮಾಡಿದ್ದಾರೆ. ಇದನ್ನು ಮಾರ್ಗಸೂಚಿ ಪ್ರಕಾರ ನಡೆಸಿಲ್ಲ.ವಾರ್ಡ್ ಗಳ ಮರುವಿಂಗಡಣೆಯನ್ನು ಬಿಜೆಪಿ ಶಾಸಕರು ಹಾಗೂ ಸಂಸದರ ಅನುಕೂಲಕ್ಕೆ ತಕ್ಕಂತೆ ಮಾಡಿದ್ದರು. ವಾರ್ಡ್ ಗಳ ಮರುವಿಂಗಡಣೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇರಬೇಕು. ಇದನ್ನು ಕಂದಾಯ ಅಧಿಕಾರಿಗಳು ಗಡಿಗಳನ್ನು ಗುರುತಿಸಿ ಮಾರ್ಗಸೂಚಿಯಂತೆ ಮಾಡಬೇಕಿತ್ತು. ಆದರೆ ಈ ಬಾರಿ ಈ ಸಮಿತಿಯ ಮುಖ್ಯಸ್ಥರಾಗಿದ್ದ ಆಯುಕ್ತರು ಒಂದೇ ಒಂದು ಸಭೆ ಮಾಡದೇ ಬಿಜೆಪಿ ಶಾಸಕರು ಸಂಸದರ ಕಚೇರಿ, ಕೇಶವಕೃಪದಲ್ಲಿ ಮಾಡಿದ್ದರು.
ನಗರಾಭಿವೃದ್ಧಿ ಇಲಾಖೆ ರಬ್ಬರ್ ಸ್ಟಾಂಪ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಆಕ್ಷೇಪ ಸಲ್ಲಿಕೆಯಾಗಿತ್ತು. ಆದರೆ ಇವುಗಳನ್ನು ಸರ್ಕಾರ ಪರಿಗಣಿಸದೇ ಬಿಜೆಪಿಯವರು ಮಾಡಿದ್ದಕ್ಕೆ ಒಪ್ಪಿಗೆ ನೀಡಿದರು. ಶಿವಜಿನಗರ, ಜಯನಗರ ಹಾಗೂ ಚಾಮರಾಜಪೇಟೆಯಲ್ಲಿ ಸಂಬಂಧವೇ ಇಲ್ಲದಂತೆ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆ ರಬ್ಬರ್ ಸ್ಟಾಂಪ್ ಆಗಿದೆ. ಅದು ಬಿಜೆಪಿ ಹಾಗೂ ಆರ್ ಎಸ್ಎಸ್ ಕಚೇರಿ ಆಗಿದೆ. ಸಿಎಂ ಕಚೇರಿಯಿಂದ ಬಂದಿದ್ದನ್ನು ನೋಡದೇ ಅನುಮೋದನೆ ನೀಡಿದ್ದಾರೆ. ಈಗ ಮೀಸಲಾತಿ ಪಟ್ಟಿಯನ್ನು ಅದೇ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಗಳು ಸ್ಪರ್ಧೆ ಮಾಡಬಾರದು ಎಂದು ಮೀಸಲಾತಿ ಪಟ್ಟಿ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ 9 ವಾರ್ಡ್ ಗಳಲ್ಲಿ 8 ಮಹಿಳೆಯರ ಮೀಸಲಾತಿ ನೀಡಿದ್ದಾರೆ. ಜಯನಗರದಲ್ಲಿ 6ರಲ್ಲಿ 5 ಮಹಿಳೆಯರಿಗೆ ನೀಡಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ 7ಕ್ಕೆ 7 ವಾರ್ಡ್ ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿ 6ರಲ್ಲಿ 5 ಮಹಿಳಾ ಮೀಸಲಾತಿ ನೀಡಿದ್ದಾರೆ. ಹೀಗೆ ಮನಸೋಇಚ್ಛೆ ಮಾಡಿದ್ದಾರೆ ಎಂದು ರಾಮಲಿಂಗರೆಡ್ಡಿ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಶಾಸಕರಿರುವ 87 ವಾರ್ಡ್ಗಳಲ್ಲಿ 67 ಮಹಿಳೆಗೆ ಮೀಸಲು
ಎಸ್ ಸಿ ಹಾಗೂ ಎಸ್ ಟಿ ಮೀಸಲಾತಿಯನ್ನು ಜನಸಂಖ್ಯೆ ಅನುಗುಣವಾಗಿ ಮಾಡಬೇಕಿತ್ತು. ಆದರೆ ಆ ರೀತಿ ಮಾಡದೇ ಮನಸ್ಸಿಗೆ ಬಂದಂತೆ ಮಾಡಿದ್ದಾರೆ. ಈ ರೀತಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ಇದು ಖಂಡನೀಯ. ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಈ ಮೀಸಲಾತಿ ವಿರುದ್ಧ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. 65 ಸಾಮಾನ್ಯ ಕ್ಷೇತ್ರಗಳ ಪೈಕಿ 49 ಕ್ಷೇತ್ರಗಳು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಇದನ್ನು ಸರ್ಕಾರ ಹಿಂಪಡೆಯಬೇಕು. ಕಾಂಗ್ರೆಸ್ ಶಾಸಕರು, ಮಾಜಿ ಸದಸ್ಯರು ಗೆಲ್ಲದಂತೆ ಒಂದು ಕಡೆ ಕುತಂತ್ರ ಮಾಡಿದರೆ, ಮತ್ತೊಂದೆಡೆ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಅವರಿಂದ ಸ್ಪರ್ಧೆ ಎದುರಾಗುತ್ತದೆ ಎಂದು ಅವರನ್ನು ಮುಗಿಸಲು ಸಂಚು ರೂಪಿಸಲಾಗಿದೆ.ಒಟ್ಟು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ 87 ವಾರ್ಡ್ ಗಳಿದ್ದು, ಅದರಲ್ಲಿ 67 ವಾರ್ಡ್ ಗಳು ಮಹಿಳಾ ಮೀಸಲಾತಿ ನೀಡಲಾಗಿದೆ. ಜೆಡಿಎಸ್ 1 ವಿಧಾನಸಭಾ ಕ್ಷೇತ್ರದಲ್ಲಿ 12 ವಾರ್ಡ್ ಗಳಿಂದ 9 ಮಹಿಳಾ ಮೀಸಲಾತಿ ನೀಡಲಾಗಿದೆ.ಬಿಜೆಪಿ ಮಹಿಳಾ ಮೀಸಲಾತಿಗೆ ವಿರೋಧವಿದ್ದು, ಈ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ 6ಕ್ಕೆ 6 ಮಹಿಳಾ ಮೀಸಲಾತಿ
ನನ್ನ ಚಾಮರಾಜ ಪೇಟೆ ಕ್ಷೇತ್ರದಲ್ಲಿ 6ಕ್ಕೆ 6 ಮಹಿಳಾ ಮೀಸಲಾತಿ ಮಾಡಿದ್ದಾರೆ. ಆಜಾದ್ ನಗರದಲ್ಲಿ ಎಸ್.ಟಿ ಜನಸಂಖ್ಯೆ 350ರಿಂದ 400 ಜನರಿದ್ದು, ಅಲ್ಲಿ ಎಸ್.ಟಿ ಮೀಸಲಾತಿ ನೀಡಿದ್ದಾರೆ. ವಾರ್ಡ್ ಮರುವಿಂಗಡಣೆಯಲ್ಲಿ ಅದ್ವಾನ ಮಾಡಿದ್ದಾರೆ. ಚಾಮರಾಜಪೇಟೆ ಭಾಗವನ್ನು ಜಾಲಿ ಮೊಹಲ್ಲಾಗೆ, ಅಲ್ಲಿನ ಭಾಗವನ್ನು ಸಿಟಿ ಮಾರುಕಟ್ಟೆ ಸೇರಿಸಿದ್ದಾರೆ. ಕಾಂಗ್ರೆಸ್ ನವರು ಎಲ್ಲೂ ಗೆಲ್ಲದಂತೆ ಮರುವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆಲ್ಲಲಿದೆ ಎಂಬ ಭಯಕ್ಕೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸುಳ್ಳು ಮಾಹಿತಿ ಮೂಲಕ ಜನರಿಗೆ ನೀಡಿದ್ದಾರೆ
ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ನಗರದ ಹಿತದೃಷ್ಟಿಯಲ್ಲಿ ಮಾಡಿಲ್ಲ. ಅವರ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಮಾಡಿರುವ ಪ್ರಕ್ರಿಯೆ. ಇದರಿಂದ ಬೆಂಗಳೂರಿಗೆ ಒಳ್ಳೆಯದು ಆಗಲ್ಲ. ಮಾನದಂಡ, ಕಾನೂನು ಉಲ್ಲಂಘಿಸಿ ಈ ಪ್ರಕ್ರಿಯೆ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರ ಹೋಲಿಕೆ ಮಾಡಿ ನೋಡಿ. 19 ಸಾವಿರ ಮತವಿರುವ ಒಂದು ವಾರ್ಡ್ ಸೃಷ್ಟಿಸಿದರೆ, ಅದರ ಪಕ್ಕದಲ್ಲಿ 45 ಸಾವಿರ ಮತವಿರುವ ವಾರ್ಡ್ ಮಾಡಲಾಗಿದೆ. ಇವರ ವೆಬ್ ಸೈಟ್ ನಲ್ಲಿ ಜನಸಂಖ್ಯೆಯನ್ನು ತಪ್ಪಾಗಿ ತೋರಿಸಲಾಗಿದೆ. 45 ಸಾವಿರ ಮತವಿದ್ದರೂ 37 ಸಾವಿರ ಜನಸಂಖ್ಯೆ ಇದೆ ಎಂದು ತೋರಿಸಲಾಗಿದೆ. ಆಯಾ ಜನರಿಗೆ ಪ್ರತಿನಿಧಿಗಳು ಸಿಗಬಾರದು ಎಂದು ಈ ರೀತಿ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ವಾರ್ಡ್ ಕಡಿಮೆ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ 39 ಸಾವಿರ ಜನಸಂಖ್ಯೆ ಇದ್ದರೆ, ಬಿಜೆಪಿ ಕ್ಷೇತ್ರಗಳಲ್ಲಿ 30 ಸಾವಿರ ಜನಸಂಖ್ಯೆ ಇಟ್ಟುಕೊಳ್ಳಲಾಗಿದೆ. ವೆಬ್ ಸೈಟ್ ನಲ್ಲಿ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಲಾಗುತ್ತಿದೆ.
ಕಾಂಗ್ರೆಸ್ ಪ್ರಬಲ ಕ್ಷೇತ್ರದಲ್ಲಿ ಸೋಲಿಸುವ ಉದ್ದೇಶ
ಬಿಜೆಪಿಯು ಸೋಲಿನ ಭೀತಿಯಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಮೀಸಲಾತಿ ಪಟ್ಟಿ ಮಾಡಿದೆ. ಆ ಮೂಲಕ ಇಡೀ ಬೆಂಗಳೂರು ನಗರದ ಜನರ ಅವಕಾಶ ವಂಚನೆ ಮಾಡಲು ತೀರ್ಮಾನಿಸಿದೆ. ಇದನ್ನು ಉಗ್ರವಾಗಿ ವಿರೋಧಿಸುತ್ತೇವೆ. ಇದರಲ್ಲಿ ಬೆಂಗಳೂರಿನ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಕೈವಾಡ ಇದರಲ್ಲಿ ನೇರವಾಗಿದೆ. ಬೆಂಗಳೂರು ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮುಖ್ಯಮಂತ್ರಿಗಳು ಕಾನೂನು ಉಲ್ಲಂಘಿಸಿ ಮೀಸಲಾತಿ ಆದೇಶ ಹೊರಡಿಸಿದ್ದಾರೆ. 7 ದಿನದಲ್ಲಿ ಗಡವು ನೀಡಿದ್ದರೂ ಇವರು ಕಾಂಗ್ರೆಸ್ ಪ್ರಬಲ ಕ್ಷೇತ್ರಗಳಲ್ಲಿ ಸೋಲಿಸಲು ರಾಜಕೀಯ ಉದ್ದೇಶದಿಂದ ಮೀಸಲಾತಿ ಘೋಷಿಸಿಸಿದ್ದಾರೆ. ಚುನಾವಣೆಗೆ ಹೆದರಿ ನಾವು ಈ ರೀತಿ ಹೇಳುತ್ತಿಲ್ಲ. ನಿಮ್ಮ ಭ್ರಷ್ಟಾ ವ್ಯವಸ್ಥೆ ವಿರುದ್ಧ ಬೆಂಗಳೂರಿನ ಜನ ಶಾಪ ಹಾಕುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಸಾರ್ವಜನಿಕವಾಗಿ ಹೋರಾಟ ಮಾಡಲಿದೆ. ನೀವು ಏನೇ ಮಾಡಿದರೂ ನಾವು ನ್ಯಾಯ ಸಮ್ಮತ ಹೋರಾಟ ಮಾಡುತ್ತೇವೆ.
ಬಿಜೆಪಿ ಮಾಡಿರೋ ಅನ್ಯಾಯ ರಸ್ತೆಗುಂಡಿಯಲ್ಲಿ ಕಾಣ್ತಿದೆ
ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರನ್ನು ಪ್ರಪಂಚದ ನಕ್ಷೆಯಲ್ಲಿ ಐಟಿ ರಾಜಧಾನಿ ಉದ್ಯಾನನಗರಿಯಾಗಿ ಮಾಡಿದ್ದೆವು. ಸ್ಟಾರ್ ಅಪ್ ಕ್ಯಾಪಿಟಲ್, ಮೋಸ್ಟ್ ಡೈನಾಮಿಕ್ ಸಿಟಿ ಎಂದು ಮಾಡಿದ್ದೆವು. ಆದರೆ ಇಂದು ಪ್ರಪಂಚದ ರಸ್ತೆಗುಂಟಿ ರಾಜಧಾನಿ ನಗರವಾಗಿದೆ. ಬಿಜೆಪಿ ಸರ್ಕಾರ ಬೆಂಗಳೂರಿಗೆ ಮಾಡಿರುವ ಅನ್ಯಾಯ ರಸ್ತೆಯಲ್ಲಿ ಕಾಣುತ್ತಿದೆ. ನಗರದಲ್ಲಿನ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಮಾಡಿಲ್ಲ. ಇವರು ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಹಣ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚಿನ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಿದೆ. ಇದೆಲ್ಲ ಕಾರಣಕ್ಕೆ ಬಿಜೆಪಿ ನೇರ ಮಾರ್ಗದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಿಲ್ಲ ಎಂದು ಕಾನೂನು ಬಾಹಿರವಾಗಿ ತಮಗೆ ಇಚ್ಛಿಸಿದಂತೆ ವಾರ್ಡ್ ಮೀಸಲಾತಿ ಮಾಡಲಾಗಿದೆ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿದ್ದಾರೆ. ಇದು ಬಿಜೆಪಿ ಹತಾಶೆಯನ್ನು ತೋರಿಸುತ್ತದೆ.
ತಾಕತ್ತಿದ್ದರೆ ನೇರವಾಗಿ ಚುನಾವಣೆ ಎದುರಿಸಲಿ
ಬೆಂಗಳೂರು ಹಾಗೂ ರಾಜ್ಯದ ಜನರು ದಿನೇ ದಿನೆ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಾರಣ, ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಹೆದರಿ ವಾಮಮಾರ್ಗದಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ರಾಜಕೀಯ ಹೇಡಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಕಾನೂನು ಅಧಿಕಾರಿಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಈ ಮೀಸಲಾತಿ ವಾಪಸ್ ಪಡೆಯಬೇಕು. ಮೀಸಲಾತಿ ಹೆಸರಲ್ಲಿ ರಾಜಕೀಯ ಮಾಡಿ ವಿರೋಧ ಪಕ್ಷ ಸೋಲಿಸುವ ಗುರಿ ಹೊಂದಿದ್ದಾರೆ. ಬೆಂಗಳೂರಿನ ಜನರಿಗೆ ಸಾಮಾನ್ಯ ಪ್ರಜ್ಞೆ ಇದೆ. ಇವರಿಗೆ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ. ತೆರಿಗೆ, ಬೆಲೆಏರಿಕೆ ಭ್ರಷ್ಟಾಚಾರದಲ್ಲಿ ಜನರು ಶೂನ್ಯವಾಗಿದ್ದು, ಬಿಜೆಪಿಯವರು ಜನರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅವರಿಗೆ ತಾಕತ್ತಿದ್ದರೆ ನೇರವಾಗಿ ಚುನಾವಣೆಯನ್ನು ಎದುರಿಸಲಿ ಎಂದು ಶಾಸಕ ಕೃಷ್ಣ ಬೈರೇಗೌಡ ಹರಿಹಾಯ್ದರು.
ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ
ಬಿಜೆಪಿ ಬಂದಾಗಿನಿಂದ ಅನುದಾನ, ಕೆಲಸ ಕಾಮಗಾರಿಯವರೆಗೆ, ಎಲ್ಲದರಲ್ಲೂ ತಾರತಮ್ಯ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿನ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಯೋಜನೆ ಹಾಗೂ ಮೈತ್ರಿ ಸರ್ಕಾರದ ಯೋಜನೆ ತಡೆದು, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಬದಲಾವಣೆ ತರದೇ ಕಾಯ್ದೆ ತಂದರು. ಕಾಯ್ದೆ ಬಂದು ಒಂದು ವರ್ಷ ಆಗಿದ್ದರೂ ಮೀಸಲಾತಿ, ವಾರ್ಡ್ ಮರುವಿಂಗಡಣೆ ವಿಚಾರದಲ್ಲಿ ಗೊಂದಲ ಮೂಡಿಸಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಅವರ ಅಭ್ಯರ್ಥಿಗಳಿಗೆ ಅನುಕೂಲ ಮಾಡಲು ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳು ಗೆಲ್ಲಬಾರದು ಎಂಬ ಕಾರಣಕ್ಕೆ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ನೀಡಲಾಗುವುದು. ಬಿಜೆಪಿ ಕ್ಷೇತ್ರದಲ್ಲಿ ಬಿಸಿಬಿ ಇದೆ. ಎಲ್ಲಿ ಸಾಮಾನ್ಯ ವರ್ಗ ಹೆಚ್ಚಿದೆ ಅಲ್ಲಿ ಬಿಸಿಬಿ ನೀಡಿದ್ದಾರೆ. ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಚಿಕ್ಕಪೇಟೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲ, ಗಾಂಧಿ ನಗರದಲ್ಲಿ ಎಲ್ಲ ವಾರ್ಡ್ ಗಳ ಮೀಸಲಾತಿ ಮಹಿಳೆಯರಿಗೆ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜನಸಂಖ್ಯೆ ಇಲ್ಲದಿದ್ದರೂ ಮೀಸಲಾತಿ
ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆಯುತ್ತಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಿದ್ದೇವೆ. ಇಷ್ಟೆಲ್ಲಾ ಮಾಡಿದ ನಂತರ ಜನಪ್ರತಿನಿಧಿಗಳು ನೇರವಾಗಿ ಆಯ್ಕೆಯಾಗಬೇಕೆ ಹೊರತು. ವಾಮಮಾರ್ಗದ ಮೂಲಕ ಅಲ್ಲ. ಇದನ್ನು ನಾವು ಖಂಡಿಸುತ್ತೇವೆ. ಮೀಸಲಾತಿಗಳನ್ನು ಒಂದೇ ಕ್ಷೇತ್ರಗಳಿಗೆ ನೀಡಲಾಗಿದೆ. ಎಸ್ ಸಿ ಮೀಸಲಾತಿಗೆ ಅದರದೇ ಆದ ಮಾನದಂಡಗಳಿವೆ. ಜನಸಂಖ್ಯೆ ಇಲ್ಲದಿದ್ದರೂ ಅಲ್ಲಿ ಮೀಸಲಾತಿ ನೀಡಲಾಗಿದೆ.