ಬೆಂಗಳೂರು ವಾರ್ಡ್ ಮಟ್ಟದಲ್ಲಿ ಅಕ್ರಮ ಕಟ್ಟಡಗಳ ಪತ್ತೆಗೆ ಬಿಬಿಎಂಪಿ ಸಮರ
ಬೆಂಗಳೂರು, ಅಕ್ಟೋಬರ್ 28: ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಮರ ಸಾರಿದೆ. ವಾರ್ಡ್ ಮಟ್ಟದಲ್ಲಿ ಅಕ್ರಮ ಕಟ್ಟಡಗಳನ್ನು ಗುರುತಿಸುವುದಕ್ಕಾಗಿ ಎಂಜಿನಿಯರ್ಗಳಿಗೆ ಸೂಚನೆ ನೀಡಲಾಗಿದೆ.
ನಗರದಲ್ಲಿ ಅಕ್ರಮ ಕಟ್ಟಡಗಳನ್ನು ಗುರುತಿಸುವುದಕ್ಕಾಗಿ ಸಮೀಕ್ಷೆ ನಡೆಸುವಂತೆ ಬಿಬಿಎಂಪಿ ಸೂಚಿಸಿರುವ ವಾರ್ಡ್ ಮಟ್ಟದ ಅಧಿಕಾರಿಗಳಲ್ಲೇ ಈ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಗೊತ್ತಾಗುತ್ತಿದೆ. ಬಿಬಿಎಂಪಿ ವಾರ್ಡ್ ಮಟ್ಟದಲ್ಲಿ ಕೆಲವು ಎಂಜಿನಿಯರ್ಗಳು 2016ರ ನಂತರ ನಿರ್ಮಿಸಲಾದ ಕಟ್ಟಡಗಳನ್ನಷ್ಟೇ ಮೌಲ್ಯಮಾಪನ ಮಾಡುವುದಾಗಿ ಹೇಳುತ್ತಿದ್ದಾರೆ. ಇನ್ನು ಕೆಲವು ಎಂಜಿನಿಯರ್ಗಳು ಬಿಬಿಎಂಪಿಯ ನಗರ ಯೋಜನೆ ವಿಭಾಗದಿಂದ ನೀಡಲಾದ ಎಲ್ಲ ಕಟ್ಟಡಗಳನ್ನು ಪರಿಶೀಲಿಸಲಾಗುವುದು ಎಂದು ಹೇಳುತ್ತಿದ್ದಾರೆ.
ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಎಎಪಿಯಿಂದ ವಾಟ್ಸಪ್ ಸಹಾಯವಾಣಿ
ಬೆಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ನಿರ್ದೇಶನದ ಅನುಸಾರವಾಗಿ ಹಳೆಯ ಹಾಗೂ ಎಲ್ಲಾ ರೀತಿಯ ಹೊಸ ಕಟ್ಟಡಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿ ಸಂಗ್ರಹ:
ಬೆಂಗಳೂರಿನಲ್ಲಿ ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಮಂಜೂರಾತಿ ನೀಡುವ ವೇಳೆಯಲ್ಲಿ ಯಾವೆಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಕಟ್ಟಡಗಳ ಸ್ಥಿತಿ ಯಾವ ರೀತಿಯಲ್ಲಿದೆ ಎಂಬುದು ಸೇರಿದಂತೆ ಎಲ್ಲ ರೀತಿ ಮಾಹಿತಿ ಸಂಗ್ರಹಿಸಲು ವಾರ್ಡ್ ಮಟ್ಟದ ಎಂಜಿನಿಯರ್ಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಅಕ್ರಮ ಕಟ್ಟಡಗಳನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ವಿಭಿನ್ನ ತೆರಿಗೆ ನೀತಿ ರೂಪಿಸಲು ಸಲಹೆ:
ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ನಿರ್ಮಾಣದ ವೇಳೆ ನೀಡಿದ ಮಂಜೂರಾತಿ ನಿಯಮಗಳನ್ನು ಪಾಲನೆ ಮಾಡಿರುವ ಮತ್ತು ಪಾಲನೆ ಮಾಡದ ಕಟ್ಟಡಗಳ ಮೇಲೆ ವಿಭಿನ್ನ ರೀತಿಯ ತೆರಿಗೆಯನ್ನು ವಿಧಿಸುವಂತೆ ಕೆಲವು ನಾಗರಿಕರು ಸಲಹೆ ನೀಡಿದ್ದಾರೆ. "ಮಂಜೂರಾತಿ ನಿಯಮಗಳನ್ನು ಪಾಲನೆ ಮಾಡದಿರುವ ಕಟ್ಟಡಗಳ ಮೇಲೆ ವಿಧಿಸಲಾಗುವ ಆಸ್ತಿ ತೆರಿಗೆಯು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು. ಅದೇ ರೀತಿ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲನೆ ಮಾಡಿರುವ ಕಟ್ಟಡ ಮಾಲೀಕರ ಆಸ್ತಿ ತೆರಿಗೆಯನ್ನು ಮನ್ನಾ ಮಾಡುವ ಮೂಲಕ ಗೌರವಿಸಬೇಕು. ಇದರಿಂದ ಭವಿಷ್ಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ," ಎಂದು ಬೆಂಗಳೂರು ನವ ನಿರ್ಮಾಣ ಪಕ್ಷದ ಕಾರ್ಯಕರ್ತ ಮುರಳಿ ಗೋವಿಂದರಾಜು ತಿಳಿಸಿದ್ದಾರೆ.
ದುರ್ಬಲ ಮತ್ತು ಅಸ್ಥಿರ ಕಟ್ಟಡಗಳ ಗುರುತು:
ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ನಡೆಸಿದ ಸಮೀಕ್ಷೆಗಳಲ್ಲಿ ಈಗಾಗಲೇ ದುರ್ಬಲ ಹಾಗೂ ಅಸ್ಥಿರ ಕಟ್ಟಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಲಾಗಿದೆ. ಅಕ್ರಮ ಕಟ್ಟಡ ನಿರ್ಮಾಣ ಚಟುವಟಿಕೆ ಕುರಿತು ಡಿಜಿಟಲ್ ಮಾಹಿತಿ ರಚಿಸುವ ಉದ್ದೇಶದಿಂದಾಗಿ ಈ ಹೊಸ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಅಕ್ರಮ ಕಟ್ಟಡಗಳ ಕುರಿತು ಪ್ರಸ್ತುತ ನಮ್ಮಲ್ಲಿರುವ ಮಾಹಿತಿಯು ಪೂರ್ಣವಾಗಿಲ್ಲ. ಈಗಾಗಲೇ ಮಂಜೂರಾಗಿರುವ ಯೋಜನೆಯಿಂದ ಹೊರಗುಳಿದ ಎಲ್ಲ ಕಟ್ಟಡಗಳನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಈ ಮಾಹಿತಿಯು ಭವಿಷ್ಯದಲ್ಲಿ ಉಪಯುಕ್ತವಾಗಲಿದೆ ಎಂದು ಗುಪ್ತಾ ಹೇಳಿದ್ದಾರೆ.
ಅಕ್ರಮ-ಸಕ್ರಮ ಯೋಜನೆ:
ನಗರದಲ್ಲಿ ಇರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ಕ್ರಮಬದ್ಧವಾಗಿ ಗುರುತಿಸಿ ಈ ಹಿಂದಿನ ಅಕ್ರಮ-ಸಕ್ರಮ ಯೋಜನೆ ಅಡಿಗೆ ತರುವುದಕ್ಕೆ ಬಿಬಿಎಂಪಿ ಯೋಜಿಸುತ್ತಿದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಈ ಅಕ್ರಮ ಕಟ್ಟಡಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದರ ಮೂಲಕ 10,000 ಕೋಟಿ ರೂಪಾರಿ ತೆರಿಗೆ ವಸೂಲಿಗೆ ಪ್ರಸ್ತಾವನೆಯನ್ನು ಇರಿಸಲಾಗಿದೆ. ಈ ಮೊದಲು ಇಂಥ ಪ್ರಸ್ತಾಪವನ್ನು ವಿರೋಧಿಸಿದ್ದ ಕೆಲವರು ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿದ್ದರು. ಆದಾಗ್ಯೂ ಎಲ್ಲಾ 'ಬಿ ಖಾಟಾ' ಆಸ್ತಿಗಳನ್ನು 'ಎ ಖಾತಾ' ಆಸ್ತಿಗಳಾಗಿ ಪರಿವರ್ತಿಸಲು ಯೋಜಿಸುತ್ತಿದೆ ಎಂದು ನಾಗರಿಕ ಸಂಸ್ಥೆ ಘೋಷಿಸಿತ್ತು.
ನಿಯಮ ಪಾಲಿಸುವವರಿಗೆ ಪ್ರೋತ್ಸಾಹ:
"ಬೆಂಗಳೂರಿನಲ್ಲಿ ನಿಯಮಬದ್ಧವಾಗಿ ಕಟ್ಟಡ ನಿರ್ಮಾಣ ಮಾಡುವ ಮಾಲೀಕರನ್ನು ಪ್ರೋತ್ಸಾಹಿಸುವುದೊಂದೇ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕುವ ಉತ್ತಮ ಮಾರ್ಗವಾಗಿದೆ ಎಂದು ಬೆಂಗಳೂರು ನವ ನಿರ್ಮಾಣ ಪಕ್ಷದ ಕಾರ್ಯಕರ್ತ ಗೋವಿಂದ ರಾಜು ತಿಳಿಸಿದ್ದಾರೆ. ಬಿಬಿಎಂಪಿಯು ಇದರ ಹೊರತಾಗಿ ಬೇರೆ ಕ್ರಮವನ್ನು ಅನುಸರಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮನೆ ಮಾಲೀಕರು ಒಂದು ಬಾರಿ ಬಿಬಿಎಂಪಿ ಆದೇಶಕ್ಕೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದರೆ ಎಲ್ಲವೂ ನಿಂತು ಹೋಗುತ್ತದೆ," ಎಂದು ಹೇಳಿದ್ದಾರೆ.
10 ವರ್ಷದಲ್ಲಿ 1176 ನಿವಾಸಿ ಪ್ರಮಾಣಪತ್ರ:
ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ 1,176 ಬೃಹತ್ ಕಟ್ಟಡಗಳು, ಐದು ಅಂತಸ್ತಿಗಿಂತ ಹೆಚ್ಚು ಮಹಡಿಗಳನ್ನು ಹೊಂದಿರುವ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಬಿಬಿಎಂಪಿ ಕಡೆಯಿಂದ ಅಧಿಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಲಾಗಿದೆ. ನಗರದಲ್ಲಿ ಅನಧಿಕೃತ ಕಟ್ಟಡಗಳ ಸಂಖ್ಯೆಯೇ ಹೆಚ್ಚಾಗಿದೆ ಎಂಬುದನ್ನು ಈ ಅಂಕಿ-ಅಂಶಗಳೇ ಸ್ಪಷ್ಟವಾಗಿ ಹೇಳುತ್ತವೆ. ನಿರ್ಮಾಣಕ್ಕೆ ಮಂಜೂರಾದ ಕಟ್ಟಡಗಳಲ್ಲಿ ನಿಮಯ ಉಲ್ಲಂಘನೆ ಆಗುತ್ತಿರುವ ಬಗ್ಗೆ ಯಾವುದೇ ರೀತಿ ದೂರುಗಳು ಬಂದರೂ ಆ ಕುರಿತು ಪಾಲಿಕೆ ನಿರ್ಲಕ್ಷ್ಯ ವಹಿಸಲುತ್ತದೆ ಎಂಬುದು ಗೊತ್ತಿದೆ.