ವಾರ್ಡ್ ಮರುವಿಂಗಡಣೆ: ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಎರಡೇ ಹಳ್ಳಿ ಸೇರಿದ್ದೇಕೆ..?
ಬೆಂಗಳೂರು, ಜೂನ್ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ಗಳ ಮರುವಿಂಗಡಣೆಯ ಕಾರ್ಯ ಮುಗಿದಿದೆ. ಬಿಬಿಎಂಪಿಯಲ್ಲಿದ್ದ 198 ವಾರ್ಡ್ಗಳ ಬದಲಾಗಿ 243 ವಾರ್ಡ್ ಗಳಿಗೆ ಏರಿಕೆ ಮಾಡಲಾಗಿದೆ.
ಬಿಬಿಎಂಪಿ ವಾರ್ಡ್ ಮರುವಿಂಗಡಣೆಯ ವೇಳೆಯಲ್ಲಿ ಹಲವು ಹಳ್ಳಿಗಳನ್ನು ಬಿಬಿಎಂಪಿಯ ವ್ಯಾಪ್ತಿಗೆ ತರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಯಲಹಂಕ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಎರಡು ಹಳ್ಳಿಯನ್ನು ಮಾತ್ರವೇ ಬಿಬಿಎಂಪಿಯ ವ್ಯಾಪ್ತಿಗೆ ತರಲಾಗಿದೆ.
ಎರಡು ಹಳ್ಳಿಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಪ್ರಭಾವಿ ಬಿಜೆಪಿ ಮುಖಂಡರೇ ಕಾರಣ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಗೆ ಎರಡು ಹಳ್ಳಿಗಳು ಒಳಪಟ್ಟಿವೆ. ಈ ಹಳ್ಳಿಯಲ್ಲಿ ಸುಮಾರು 6000 ಜನ ವಾಸಿಸುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ತಮ್ಮ ಹಳ್ಳಿ ಸೇರಿರುವುದರಿಂದ ರಾಜಯೋಗ ಬಂದಂತಾಗುತ್ತದೆ.
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಎರಡು ಹಳ್ಳಿಗಳೇ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿರುವುದು. ಬಿಬಿಎಂಪಿ ವ್ಯಾಪ್ತಿಗೆ ಎರಡು ಹಳ್ಳಿ ಬಂದಿರುವುದರಿಂದ ಹತ್ತು ಹಲವು ಉಪಯೋಗಗಳು ಹಳ್ಳಿಗರಿಗೆ ದೊರೆಯುತ್ತದೆ. ಭೂಮಿಯ ಬೆಲೆಯಂತೂ ಮತ್ತಷ್ಟು ಗಗನಕ್ಕೆರುವುದು ನಿಶ್ಚಿತವಾಗಿದೆ. ಬಿಬಿಎಂಪಿ ಈ ಎರಡು ಹಳ್ಳಿಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳು ಕಲ್ಪಿಸಲಿದೆ.
ಲಕ್ಷ್ಮೀಪುರ ಗ್ರಾಮ, ಕಾಂನ್ಶಿರಾಮ್ ನಗರ ಸೇರ್ಪಡೆ
ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೀಪುರ ಗ್ರಾಮ, ಕಾನ್ಶೀರಾಮ್ ನಗರ (ಅಂಬೇಡ್ಕರ್ ನಗರ) ಎಂಬ ಗ್ರಾಮಗಳು ಬಿಬಿಎಂಪಿಗೆ ಸೇರ್ಪಡೆಯಾಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಎರಡು ಹಳ್ಳಿಗಳಿಗೆ ಮಾತ್ರವೇ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗುವ ಯೋಗ ಕೂಡಿ ಬಂದಿದೆ. ಎರಡು ಹಳ್ಳಿ ಮಾತ್ರ ಸೇರ್ಪಡೆ ಮಾಡಿದ್ದರ ಹಿಂದೆ ರಾಜಕೀಯ ಕಾರಣಗಳಿವೆ ಎನ್ನಲಾಗುತ್ತಿದೆ.
ಆದರೂ ಎರಡು ಹಳ್ಳಿಗಳನ್ನು ಸೇರ್ಪಡೆ ಮಾಡಿರುವುದರಿಂದಾಗಿ ಆ ಹಳ್ಳಿ ವ್ಯಾಪ್ತಿಯ ಭೂಮಿ ಬೆಲೆ ಹೆಚ್ಚಳವಾಗಲಿದ್ದು . ಮೂಲ ಭೂತ ಸೌಕರ್ಯಗಳು ಹೆಚ್ಚಲಿದೆ.
ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದರೇ ತೆರಿಗೆ ಸಂಗ್ರಹ ಹೆಚ್ಚಳ
ರಾಜಧಾನಿ ಸುತ್ತುವರೆದಿರುವ ಕೆಲವು ಶಾಸಕರು 1ಕಿ.ಮೀ ವ್ಯಾಪ್ತಿಯಲ್ಲಿ ಬರಲಿರುವ ಗ್ರಾಮಗಳನ್ನು ನಗರಕ್ಕೆ ಹೊಂದಿರುವ ಬಡಾವಣೆಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಬೇಕು ಎಂದು ಮನವಿಯನ್ನು ಮಾಡಿದ್ದರು. ಆದರೆ ಯಾವುದೇ ಹೊರವಲಯವನ್ನು ಬಿಬಿಎಂಪಿ ವ್ಯಾಪ್ತಿಗೆ ತಂದಿಲ್ಲ. ಕೇವಲ ಎರಡು ಹಳ್ಳಿಗಳನ್ನು ಮಾತ್ರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗಿದೆ. ಬೆಂಗಳೂರು ಹೊರಗಿನ 1ಕಿಮೀ ವ್ಯಾಪ್ತಿಯಲ್ಲಿ 45 ಬಡಾವಣೆ ಮತ್ತು 10ಕ್ಕೂ ಹೆಚ್ಚು ಹಳ್ಳಿಗಳಿವೆ. 24 ಅಪಾರ್ಟ್ಮೆಂಟ್ಗಳು ಸಹ ಇವೆ. 358 ಎಕರೆ ಕೃಷಿ ಭೂಮಿಯಿದೆ. ಇದರಲ್ಲಿ 75ರಷ್ಟು ಕಂದಾಯ ಜಾಗದಲ್ಲಿ ಕಟ್ಟಡಗಳು ತಲೆ ಎತ್ತಿದ್ದು ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದರೇ ತೆರಿಗೆ ಸಂಗ್ರಹ ಹೆಚ್ಚಳವಾಗುತ್ತಿತ್ತು.
ಹೊಸಹಳ್ಳಿಗಳ ಸೇರ್ಪಡೆಗೆ ಮನ್ನಣೆಯಿಲ್ಲ
ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಐಟಿ ಬಿಟಿಗಳು ತಲೆ ಎತ್ತಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸುತ್ತಮುತ್ತಲೇ ಮನೆಗಳಲ್ಲಿ ವಾಾಸವಾಗಿದ್ದಾರೆ. ಮೂಲಭೂತ ಸೌಕರ್ಯವನ್ನು ಕೊರತೆಯನ್ನು ಎದುರಿಸುತ್ತಿದೆ. ಶಿಕಾರಿ ಪಾಳ್ಯ , ಕೋನಪ್ಪನ ಅಗ್ರಹಾರ, ಬೆಟ್ಟದಾಸನ ಪುರ , ಮೈಲಸಂದ್ರ ಗ್ರಾಮಗಳನ್ನು ಸಹ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಮನವಿಯನ್ನು ಮಾಡಲಾಗಿತ್ತಾದರೂ ಈ ಮನವಿಗೆ ಬಿಬಿಎಂಪಿ ಸ್ಪಂದನೆಯನ್ನು ನೀಡಿಲ್ಲ.
ದಾಸರಹಳ್ಳಿ ಶಾಸಕರ ಅಸಮಾಧಾನ
""ಬಿಬಿಎಂಪಿ ವಾರ್ಡ್ಗಳನ್ನು ಹೆಚ್ಚಳ ಮಾಡಿರುವುದು ಮತ್ತು ಎರಡು ಹಳ್ಳಿಯನ್ನು ಬಿಬಿಎಂಪಿಗೆ ಸೇರಿಸಿರುವುದು ಸ್ವಾಗತಾರ್ಹ. ಆದರೆ ವಾರ್ಡ್ಗಳನ್ನು ಮರುವಿಂಗಡಣೆ ಮಾಡುವಾಗ ವೈಜ್ಞಾನಿಕವಾಗಿ ಆಲೋಚಿಸಿ ವಿಂಗಡಣೆ ಮಾಡಬೇಕಿತ್ತು. ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಜನ ವಾರ್ಡ್ ಕಚೇರಿಗೆ ಹೇಗೆ ಬರಬೇಕು. ಸರಿಯಾಗಿ ವಾರ್ಡ್ ವಿಂಗಡಣೆಯನ್ನು ಮಾಡಿಲ್ಲ. ತಮಗೆ ಬೇಕಾದಂತೆ ವಾರ್ಡ್ ವಿಂಗಡಣೆ ಮಾಡಿದ್ದಾರೆ,'' ಎಂದು ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್ ಹೇಳಿದ್ದಾರೆ.
ಇನ್ನು ವಾರ್ಡ್ಗಳ ಮರುವಿಂಗಡಣೆಗಳ ಬಗ್ಗೆ ಆಕ್ಷೇಪೆಗಳಿದ್ದರೆ ಬಿಬಿಎಂಪಿಗೆ ಸಾರ್ವಜನಿಕರು ಆಕ್ಷೇಪಣೆಯನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಿದೆ. ಅಸಮಧಾನವಿರುವ ಜನರು ಜನಪ್ರತಿನಿಧಿಗಳು ಆಕ್ಷೇಪವನ್ನು ಸಲ್ಲಿಸಿದ ಬಳಿಕ ಬಿಬಿಎಂಪಿ ಮತ್ತೊಮ್ಮೆ ಪರಿಶೀಲನೆಯನ್ನು ನಡೆಸಲಿದೆ. ಆದರೂ ಬಿಬಿಎಂಪಿ ಅಳೆದು ತೂಗಿ ವಾರ್ಡ್ ಮರುವಿಂಗಡಣೆ ಮಾಡಿದೆ. ಆದರೆ ಎರಡೇ ಹಳ್ಳಿಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.