ಬೆಂಗಳೂರು ವಾರ್ಡ್ಗಳಿಗೆ ಮಹಾರಾಜರ ಹೆಸರು ಇನ್, ಐತಿಹಾಸಿಕ ಹೆಸರು ಔಟ್
ಬೆಂಗಳೂರು, ಜೂನ್ 25: ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ವಾರ್ಡ್ಗಳ ಮರುವಿಂಗಡಣೆಯ ಕಾರ್ಯವನ್ನು ಮುಗಿಸಿ ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವನ್ನು ಮಾಡಿಕೊಟ್ಟಿದೆ. ರಚನಯಾಗಿರುವ ಹೊಸ ವಾರ್ಡ್ಗಳಿಗೆ ಮಹಾರಾಜರು, ನಾಡಿಗಾಗಿ ಸೇವೆ ಮಾಡಿದವರ ಹೆಸರನ್ನು ಇಡಲಾಗಿದೆ. ಇನ್ನು ಐತಿಹಾಸಿಕ ಮಹತ್ವವಿದ್ದ ಹೆಸರನ್ನು ಕೈಬಿಟ್ಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಬೆಂಗಳೂರು ನಿರ್ಮಾಣಕ್ಕೆ ಬುನನಾದಿ ಹಾಕಿದ್ದು ನಾಡಪ್ರಭು ಕೆಂಪೇಗೌಡ. ಇದರಿಂದಾಗಿದೆ ಮೊದಲ ವಾರ್ಡ್ಗೆ ನಾಡಪ್ರಭು ಕೆಂಪೇಗೌಡ ವಾರ್ಡ್ ಎಂದು ಹಿಂದೆಯೇ ನಾಮಕರಣವನ್ನು ಮಾಡಲಾಗಿದೆ. ಪಾಳೇಗಾರರು, ಮೈಸೂರು ಅರಸರು ಸೇರಿದಂತೆ ಹಲವಾರು ರಾಜರು ಬೆಂಗಳೂರನ್ನು ಆಳ್ವಿಕೆ ಮಾಡಿದ್ದಾರೆ.
ಬೆಂಗಳೂರು ವಿಶ್ವ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದೆ. ಅದಾಗ್ಯೂ ಸ್ವಾತಂತ್ರ್ಯ ಹೋರಾಟದ ಕುರುಹುಗಳು ಬೆಂಗಳೂರಿನಲ್ಲೂ ಲಭ್ಯವಾಗಲಿದೆ. ಮಹತ್ಮಾ ಗಾಂಧಿ ಸಹ ಬೆಂಗಳೂರಿಗೆ ಬಂದು ಹೋಗಿದ್ದ ಬಗ್ಗೆಯೂ ಐತಿಹ್ಯಗಳಿವೆ. ಇಂಥ ಐತಿಹಾಸಿಕ ಬೆಂಗಳೂರು ಪಾಲಿಕೆಯು ಮಹತ್ವದ್ದಾಗಿದೆ.
ಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ)ಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಡಲಾಯಿತು. ಈ ವೇಳೆ 45 ವಾರ್ಡ್ ಗಳಿಂದ 198 ವಾರ್ಡ್ಗಳಾಗಿ ಮಾರ್ಪಾಡು ಮಾಡಲಾಯಿತು. ಇದೀಗ 2011ರ ಜನಸಂಖ್ಯಾ ಆಧಾರದಲ್ಲಿ ವಾರ್ಡ್ಗಳ ಮರುವಿಂಗಡಣೆಯನ್ನ ಮಾಡಿರುವುದರಿಂದ 243 ವಾರ್ಡ್ಗಳಿಗೆ ಹೆಚ್ಚಿಸಲಾಗಿದೆ.
ನಾಡಿಗಾಗಿ ಸೇವಗೈದವರ ಹೆಸರು ಸೇರ್ಪಡೆ
ಬೆಂಗಳೂರು ಐತಿಹಾಸಿಕ ಮಹತ್ವವಿರುವ ನಗರ, ಬೆಂಗಳೂರಿಗೆ ವಿಶ್ವ ಮಾನ್ಯತೆಯು ದೊರೆತಿದೆ. ಐಟಿ ಹಬ್ ಸಿಲಿಕಾನ್ ಸಿಟಿ ಹೆಗ್ಗಳಿಕೆ ಯನ್ನು ಪಡೆದುಕೊಂಡಿದೆ. ಈ ನಗರದ ಪ್ರತಿಯೊಂದು ವಾರ್ಡ್ ಸಹ ಮಹತ್ವದ್ದಾಗಿದೆ. ಹೊಸದಾಗಿ ರಚನೆಯಾಗಿರು ವಾರ್ಡ್ಗಳಿಗೆ ಸ್ಥಳೀಯ ಮಹತ್ವದ ಹೆಸರನ್ನಿಡುವುದು ವಾಡಿಕೆ. ಆದರೆ ಈ ಹೊಸ ವಾರ್ಡ್ಗಳಿಗೆ ಛತ್ರಪತಿ ಶಿವಾಜಿ, ವೀರ ಮದಕರಿ, ಚಾಣಕ್ಯ, ರಣಧೀರ ಕಂಠೀರವ, ವೀರಸಿಂಧೂರ ಲಕ್ಷಣ, ವಿಜಯನಗರ ಕೃಷ್ಣದೇವರಾಯ, ಸರ್. ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಾಮಕಾರಣ ಮಾಡಲಾಗಿದೆ. ನಾಡಿಗಾಗಿ ಸೇವೆಗೈದವರ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ.
ಹಳೇಯ ಹೆಸರನ್ನು ಕೈಬಿಟ್ಟ ಪಾಲಿಕೆ
ಬಿಬಿಎಂಪಿ ವಾರ್ಡ್ಗಳನ್ನು ಮರುವಿಂಗಡಣೆಯನ್ನು ಮಾಡುವಾಗ ಕೆಲವು ಹಳೇಯ ಹೆಸರನ್ನು ಕೈಬಿಟ್ಟಿರುವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೃಹತ್ ರೈಲ್ವೇ ನಿಲ್ದಾಣವಿರುವ ಯಶವಂತಪುರ ವಾರ್ಡ್ ಹೆಸರು ಕೈಬಿಡಲಾಗಿದೆ. ಹಾಗೆಯೇ ರಾಗಿಗುಡ್ಡ ಆಂಜನೇಯ ದೇವಸ್ಥಾನವಿರುವ ರಾಗಿಗುಡ್ಡ ವಾರ್ಡ್, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿರುವ ಕೃಷ್ಣರಾಜ ಮಾರುಕಟ್ಟೆ( ಕೆಆರ್ ಮಾರುಕಟ್ಟೆ ವಾರ್ಡ್) ಗುಂಡಾಂಜನೇಯ ವಾರ್ಡ್, ಚಿಕ್ಕಸಂದ್ರ ವಾರ್ಡ್, ಜಾಲಹಳ್ಳಿ ವಾರ್ಡ್, ಬೃಂದಾವನ ನಗರ ಚಳ್ಳಕೆರೆ, ದೊಡ್ಡ ಬಿದಿರುಕಲ್ಲು, ದೇವರ ಜೀವನ ಹಳ್ಳಿ , ಬಿನ್ನಿಗನಹಳ್ಳಿ, ರಾಮಮೂರ್ತಿ ನಗರ, ಸರ್ವಜ್ಞನಗರ , ಲಗ್ಗೆರೆ, ಕೊಟ್ಟಿಗೆ ಪಾಳ್ಯ ಮಂಜುನಾಥ್ ನಗರ, ಶೇಷಾದ್ರಿಪುರಂ, ಹಗದೂರು, ಸಿದ್ದಾಪುರ, ದೀಪಾಂಜಲಿ ನಗರ, ನಾಗದೇವನ ಹಳ್ಳಿ, ಇಟ್ಟಮಡು, ಹಮ್ಮಿಗೆಪುರ, ಪುಟ್ಟೇನಹಳ್ಳಿ ವಾರ್ಡ್ಗಳ ಹೆಸರನ್ನು ಕೈಬಿಡಲಾಗಿದೆ.
ಮೊದಲ ಯೋಜಿತ ನಗರ ಹೆಸರು ಬದಲಾವಣೆಗೆ ಆಕ್ರೋಶ
ಸ್ವಾತಂತ್ರ ಭಾರತದ ಮೊದಲ ಯೋಜಿತ ನಗರವೇ ಜಯನಗರ. ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ರವರು ಕನಸಿನ ಕೂಸು ಜಯನಗರ ಬಡಾವಣೆ. ಈ ನಗರ ಏಷ್ಯಾದಲ್ಲೇ ಅತ್ಯಂತ ಯೋಜಿತ ನಗರ ಎಂದು ಪರಿಗಣಿಸಲ್ಪಟ್ಟಿತ್ತು. ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ್ದ ನಗರಕ್ಕೆ ಅವರದೇ ಹೆಸರನ್ನು ನಾಮಕರಣ ಮಾಡಿ ಜಯನಗರ ಎಂದು ಕರೆಯಲಾಗಿತ್ತು, ಇಂಥ ಮಹತ್ವದ ಹಿನ್ನೆಲೆಯುಳ್ಳ ಜಯನಗರ ಹೆಸರನ್ನು ಬದಲಾವಣೆ ಮಾಡಿ ಅಶೋಕ ಸ್ತಂಭ ವಾರ್ಡ್ ಎಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 400 ವರ್ಷ ಇತಿಹಾಸವುಳ್ಳ ಕೆಂಗೇರಿ
ಬೆಂಗಳೂರು ಕೇಂದ್ರ ನಗರಕ್ಕೆ ಹೊಂದಿಕೊಂಡರುವ ಕೆಂಗೇರಿ 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಮೈಸೂರು ಮಹಾರಾಜರು ಮೈಸೂರಿನಿಂದ ಬೆಂಗಳೂರಿಗೆ ಬರುವ ವೇಳೆಯಲ್ಲಿ ಕೆಂಗೇರಿಯಲ್ಲಿ ತಂಗುತ್ತಿದ್ದರು ಎಂಬುದು ಐತಿಹ್ಯ. ಇನ್ನು ಮಹಾತ್ಮಗಾಂಧೀಜಿಯವರು ಕೆಂಗೇರಿ ವಿದ್ಯಾಪೀಠದಲ್ಲಿ ತೆರೆದ ಬಾವಿಗೆ ಗಂಗಾ ಪೂಜೆಯನ್ನು ನಡೆಸಿದ್ದರು. ವಿಧಾನ ಸೌಧ ನಿರ್ಮಾತೃ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನಿಮಂತಯ್ಯರವರು ಸರ್ಕಾರಿ ಶಾಲೆಯಲ್ಲಿ ಓದಿದ್ದು ಕೆಂಗೇರಿಯಲ್ಲೇ. ಇದರಿಂದಾಗಿ ಕೆಂಗೇರಿ ವಾರ್ಡ್ ರಚನೆಗೆ ಸ್ಥಳೀಯರ ಆಗ್ರಹ ಕೇಳಿ ಬಂದಿತ್ತು. ಆದರೆ ಕೆಂಗೇರಿ ವಾರ್ಡ್ ರಚನೆ ಮಾಡಿಲ್ಲದಿರೋದು ಕೆಂಗೇರಿ ಹಿತರಕ್ಷಣ ಸಮಿತಿಯ ಆಕ್ಷೇಪಣೆಗೆ ಕಾರಣವಾಗಿದೆ.