ಪಟ್ಟಂದೂರು ಅಗ್ರಹಾರ ಕೆರೆ ಮತ್ತೆ ಒತ್ತುವರಿ: ರಸ್ತೆ ಕಾಮಗಾರಿ ಆರಂಭ
ಬೆಂಗಳೂರು, ಫೆಬ್ರವರಿ 09 : ಪಟ್ಟಂದೂರು ಅಗ್ರಹಾರ ಕೆರೆಯನ್ನು ಒತ್ತುವರಿ ಮಾಡುವ ಮೂಲಕ 80 ಅಡಿ ರಸ್ತೆ ಕಾಮಗಾರಿಗೆ ಬಿಬಿಎಂಪಿ ಮತ್ತೆ ಚಾಲನೆ ನೀಡಿದೆ.
ಈ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿದ್ದ ಆದೇಶವನ್ನು ಉಲ್ಲಂಘಿಸಲು ಮುಂದಾಗಿದೆ. ಈ ಕೆರೆಯು ಕೆ.ಆರ್. ಪುರಂ ತಹಸೀಲ್ದಾರ್ ವ್ಯಾಪ್ತಿಗೆ ಒಳಪಟ್ಟಿದೆ. ಕಳೆದ ವರ್ಷ ಕೆರೆ ಒತ್ತುವರಿಯಾದ ಕಾರಣ ಅಲ್ಲಿನ ಜನತೆ ಮಳೆಗಾಲದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದರು.
ಹಲಸೂರು ಕೆರೆ ಅಭಿವೃದ್ಧಿಗೆ ಪ್ರೆಸ್ಟೀಜ್ ಕಂಪನಿ ಆಸಕ್ತಿ
ಬಿಡಬ್ಲ್ಯೂ ಎಸ್ ಎಸ್ ಬಿ ಯು ರಸ್ತೆಯನ್ನು ಅಗೆಯಲು ಪ್ರಾರಂಭಿಸಿದೆ. ನಾವು ತನಿಖೆ ಮಾಡಿದಾಗ ಕೆರೆಗೆ ಹೋಗುತ್ತಿದ್ದ ಉತ್ತಮ ನೀರನ್ನು ತಡೆದು ಬೇರೆಡೆಗೆ ಹೋಗುವಂತೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದು ದಿನದಲ್ಲಿ ಕಾಮಗಾರಿ ಮುಕ್ತಾಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾಜಕಾಲುವೆಯು ವೈಟ್ ಫೀಲ್ಡ್ ನಿಂದ ಆರಂಭವಾಗುತ್ತದೆ ಅಲ್ಲಿಂದ ನೀರು ಪಟ್ಟಂದೂರು ಕೆರೆಗೆ ಬಂದು ತಲುಪುತ್ತದೆ. ಕಳೆದ ಬಾರಿ ರಾಜಕಾಲುವೆ ಒತ್ತುವರಿಯಾಗಿದ್ದ ಕಾರಣ ಮಳೆಗಾಲದಲ್ಲಿ ಅಲ್ಲಿ ಅಳವಡಿಸಿದ ಪೈಪುಗಳಲ್ಲಿ ಬೃಹತ್ ಪ್ರಮಾಣದ ನೀರು ಹೋಗಲು ಸಾಧ್ಯವಾಗದೆ ಅನಾಹುತವನ್ನು ತಂದೊಡ್ಡಿತ್ತು. ಇದೀಗ ಮತ್ತದೇ ಪರಿಪಾಠ ಪ್ರಾರಂಭವಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೊಳಚೆ ನೀರು ಹೋಗಲು ಸಮರ್ಪಕವಾಗಿ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಆದರೆ ಕೆರೆಗೆ ಹೋಗುವಂತಹ ನೀರನ್ನು ತಡೆದು ಬೇರೆಡೆಗೆ ತಿರುಗಿಸುವ ಕೆಲಸವನ್ನು ಒಂದೇ ದಿನದಲ್ಲಿ ಮಾಡುತ್ತಾರೆ ಎಂದು ದೂರಿದರು.