ಬಿಬಿಎಂಪಿ ಬೆಂಗಳೂರನ್ನು ಡರ್ಟಿ ಸಿಟಿ ಮಾಡುತ್ತಿದೆ: ಹೈಕೋರ್ಟ್
ಬೆಂಗಳೂರು, ಫೆಬ್ರವರಿ 24 : ವಾರ್ಡ್ ಮಟ್ಟದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅಲ್ಲಿಯೇ ಸಂಸ್ಕರಿಸಲು ಅನುಕೂಲವಾಗುವಂತೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಆ ಬಗ್ಗೆ ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಗ್ರ ವರದಿ ನೀಡಿದ್ದ ಆದೇಶ ಪಾಲಿಸದ ಬಿಬಿಎಂಪಿಗೆ ಹೈಕೋರ್ಟ್50 ಸಾವಿರ ರೂ ದಂಡ ವಿಧಿಸಿದೆ.
ನ್ಯಾಯಾಲಯ ಕಳೆದ ನವೆಂಬರ್ ನಲ್ಲೇ ಆದೇಶ ನೀಡಿದ್ದರೂ, ಜಾರಿಗೊಳಿಸಲು ಪಾಲಿಕೆ ಕ್ರಮ ತೆಗೆದುಕೊಂಡಿಲ್ಲ. ಬಿಬಿಎಂಪಿ ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ವರ್ತೂರು ಕೆರೆಯಲ್ಲಿ ತ್ಯಾಜ್ಯ ಸುರಿದ ಬಿಬಿಎಂಪಿ: ಸ್ಥಳೀಯರ ಆಕ್ರೋಶ
ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ.ಬಿ.ಎಸ್. ಪಾಟೀಲ್ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಶೇಷ ವಿಭಾಗೀಯ ಪೀಠ , ಪಾಲಿಕೆಯ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ 50 ಸಾವಿರ ರೂ ದಂಡ ವಿಧಿಸಿದೆ.
ನ್ಯಾಯಾಂಗ ನಿಂದನೆ ಎಚ್ಚರಿಕೆ: ಇದಕ್ಕೂ ಮುನ್ನ ನ್ಯಾಯಪೀಠ ಪಾಲಿಕೆ ಕ್ರಮವನ್ನು ಟೀಕಿಸಿತು. ಅಲ್ಲದೆ ಬಿಬಿಎಂಪಿ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿತು. ಎಲ್ಲ ವಾರ್ಡ್ ಗಳಲ್ಲಿ ಕಮಿಟಿಗಳ ಸಭೆ ಕರೆದು ವರದಿ ಸಲ್ಲಿಸಬೇಕಿತ್ತು. ಆದರೆ 198 ವಾರ್ಡ್ ಗಳ ಪೈಕಿ 133 ವಾರ್ಡ್ ಗಳಲ್ಲಿ ಮಾತ್ರ ಸಭೆ ನಡೆಸಿದೆ. 64 ಸಮಿತಿಗಳು ಕ್ರಿಯಾ ಯೋಜನೆ ಅವು ಕೂಡ ಸಂಪೂರ್ಣವಾಗಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪಾಶ್ಚಿಮಾತ್ಯ ರಾಷ್ಟ್ರಗಳ ಸ್ವಚ್ಛತೆಯ ಬಗ್ಗೆ ಉಲ್ಲೇಖಿಸಿ, ಬೆಂಗಳೂರಿನಲ್ಲಿ ಪರಿಸ್ಥಿತಿ ಬಹಳ ಹದಗೆಟ್ಟಿದೆ ಎಂದರು. ಆಗ ನ್ಯಾ. ಬಿ.ಎಸ್. ಪಾಟೀಲ್ ಬೆಂಗಳೂರು ಕ್ಲೀನ್ ಆಗಿತ್ತು. ಇದೀಗ ವಿಶ್ವದ ಡರ್ಟಿಯಸ್ಟ್ ಸಿಟಿ ಆಗಿದೆ ಎಂದರು.