ಕೆ.ಆರ್. ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೊರೊನಾ ಪರೀಕ್ಷೆ ಚುರುಕುಗೊಳಿಸಲು ಬಿಬಿಎಂಪಿ ಸೂಚನೆ
ಬೆಂಗಳೂರು, ಆಗಸ್ಟ್ 23: ಸಾಲು ಸಾಲು ಹಬ್ಬಗಳು ಆರಂಭಗೊಂಡಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಲಕ್ಷಾಂತರ ಜನರು ಕೆ.ಆರ್. ಮಾರುಕಟ್ಟೆಗೆ ದಾಂಗುಡಿ ಇಡುತ್ತಿರುವುದು ಕಂಡುಬರುತ್ತಿದ್ದು, ಕೊರೊನಾ ನಿಯಮಗಳ ಉಲ್ಲಂಘನೆಯೂ ಹೆಚ್ಚಾಗಿದೆ.
ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ವೇಳೆಗೆ ಕೊರೊನಾ ಮೂರನೇ ಅಲೆ ಎಚ್ಚರಿಕೆಯನ್ನು ತಜ್ಞರು ನೀಡಿದ್ದು, ಕೊರೊನಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಹಾಗೂ ಲಸಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸುವತ್ತ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕೆ.ಆರ್. ಮಾರುಕಟ್ಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ಜನರಿಗೆ ಕೊರೊನಾ ಪರೀಕ್ಷೆ (Random testing) ನಡೆಸಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ದಿನನಿತ್ಯ 250 ರಿಂದ 300 ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಸೋಂಕಿನಿಂದ ಸಾವು ಸಂಭವಿಸುತ್ತಿರುವ ಪ್ರಮಾಣ ತಗ್ಗಿದೆ. ಇದಾಗ್ಯೂ ಯಾವುದೇ ಸಾಧ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಬಿಬಿಎಂಪಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಕೆ.ಆರ್. ಮಾರುಕಟ್ಟೆ ಕೊರೊನಾ ಕೇಂದ್ರವಾಗುವ ಎಲ್ಲಾ ಲಕ್ಷಣಗಳೂ ಇರುವ ಕಾರಣ ಇಲ್ಲಿ ಪರೀಕ್ಷೆಗಳನ್ನು ತ್ವರಿತಗೊಳಿಸಿರುವುದಾಗಿ ತಿಳಿಸಿದೆ.
ಕೆ.ಆರ್. ಮಾರುಕಟ್ಟೆಯಲ್ಲಿ ಜನರು ಕೊರೊನಾ ನಿಯಮಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾದುಕೊಳ್ಳದೇ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಲಕ್ಷಾಂತರ ಮಂದಿ ಸೇರುತ್ತಿದ್ದಾರೆ. ಹೀಗಾಗಿ ಕೊರೊನಾ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಗಾಳಿ ಶುದ್ಧೀಕರಣ ಯಂತ್ರ ಖರೀದಿಯಿಂದ ಹಿಂದೆ ಸರಿದ ಬಿಬಿಎಂಪಿ
ರೈಲು ನಿಲ್ದಾಣಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆ, ವಾಣಿಜ್ಯ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳು ಹಾಗೂ ಜನಜಂಗುಳಿಯಿರುವ ಇತರೆ ಜಾಗಗಳಲ್ಲಿ ಕೊರೊನಾ ಪರೀಕ್ಷೆ ಚುರುಕುಗೊಳಿಸಲು ಬಿಬಿಎಂಪಿ ಆರೋಗ್ಯ ತಂಡಗಳನ್ನು ನಿಯೋಜಿಸಿದೆ. ಕೆ.ಆರ್. ಮಾರುಕಟ್ಟೆ ವ್ಯಾಪ್ತಿಯಲ್ಲಿ ಸೋಮವಾರದಿಂದ ಪರೀಕ್ಷೆ ಆರಂಭಗೊಳ್ಳಲಿರುವುದಾಗಿ ತಿಳಿದುಬಂದಿದೆ.
ಸಾವಿರಾರು ವ್ಯಾಪಾರಿಗಳು, ಕಾರ್ಮಿಕರು ಹಾಗೂ ಇತರರನ್ನು ಪರೀಕ್ಷೆ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಹಬ್ಬದ ಸೀಸನ್ ಇರುವುದರಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ಕೊರೊನಾ ನಿಯಮಗಳ ಪಾಲನೆಗೆ ಗಮನ ಹರಿಸಲಾಗಿದೆ. ಕೊರೊನಾ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮೇಲೆ ಕಣ್ಣಿಡಲು ನಗರದಾದ್ಯಂತ ಹೋಂ ಗಾರ್ಡ್ಗಳನ್ನು ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕೇರಳದಲ್ಲಿ ಕೊರೊನಾ; ಜನರ ನಡವಳಿಕೆಯೇ ಮೂಲ ಎಂದ ತಜ್ಞರು
ಸಾರ್ವಜನಿಕರಲ್ಲಿ, ವ್ಯಾಪಾರಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಮಾರ್ಷಲ್ಗಳು ಕೂಡ ನಗರದಾದ್ಯಂತ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದರು.
ಕಳೆದ ಹತ್ತು ದಿನಗಳಲ್ಲಿ ಬಿಬಿಎಂಪಿ (ಆಗಸ್ಟ್11ರಿಂದ 20ರವರೆಗೂ) ತನ್ನ ವ್ಯಾಪ್ತಿಯಲ್ಲಿ 4,73,380 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಪ್ರತಿ ದಿನ ಸುಮಾರು 45 ಸಾವಿರ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಸದ್ಯಕ್ಕೆ ಇದರ ಸಂಖ್ಯೆಯನ್ನು 80 ಸಾವಿರಕ್ಕೆ ಏರಿಸುವ ಯೋಜನೆ ಇಟ್ಟುಕೊಂಡಿದೆ.
Recommended Video
198 ವಾರ್ಡ್ಗಳಲ್ಲಿ ದಿನನಿತ್ಯ ಸುಮಾರು 400 ಮಂದಿಗೆ ಲಸಿಕೆ ನೀಡಲಾಗುವುದು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಸರಬರಾಜು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಮರುಸೋಂಕಿನ ಪ್ರಕರಣಗಳು ಕೂಡ ಹೆಚ್ಚುತ್ತಿರುವುದರಿಂದ ಜನರು ಕೂಡ ಕೊರೊನಾ ನಿಯಮಗಳನ್ನು ಪಾಲಿಸಲೇಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖವಾಗಿದೆ. ರಾಜ್ಯದಲ್ಲಿ ಭಾನುವಾರ ಕೊರೊನಾ ಪ್ರಕರಣಗಳ ಪ್ರಮಾಣ ಶೇ.0.94ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.85ರಷ್ಟಿದೆ. ರಾಜ್ಯದಲ್ಲಿ ಭಾನುವಾರ ಒಂದು ದಿನದಲ್ಲಿ 1189 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1408 ಸೋಂಕಿತರು ಗುಣಮುಖರಾಗಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 37145ಕ್ಕೆ ಏರಿಕೆಯಾಗಿದೆ.