ಬೆಂಗಳೂರಿನ ರಸ್ತೆ ಗುಂಡಿಗೆ ಬಿದ್ದವರಿಗೆ 15,000 ರೂಪಾಯಿ ಪರಿಹಾರ!
ಬೆಂಗಳೂರು, ಡಿಸೆಂಬರ್.03: ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಚಳಿಗಾಲ, ಬೇಸಿಗೆ ಕಾಲ, ಮಳೆಗಾಲದಲ್ಲೂ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿರುವ ಬೀದಿಗಳನ್ನು ನೆಚ್ಚಿಕೊಂಡು ಸಂಚಾರ ಮಾಡುವ ಹಾಗಿರುವುದಿಲ್ಲ. ಯಾವಾಗ, ಎಲ್ಲಿ, ಹೇಗೆ ಅಪಘಾತ ಸಂಭವಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಷ್ಟಕ್ಕೆಲ್ಲ ಕಾರಣ ಬೆಂಗಳೂರು ರಸ್ತೆಗಳ ದುಸ್ಥಿತಿ ಹಾಗೂ ಗುಂಡಿಗಳ ಹಾವಳಿ.
ಬೆಂಗಳೂರಿನಲ್ಲಿ ಕೆಟ್ಟ ರಸ್ತೆಗಳು ಮತ್ತು ಗುಂಡಿಗಳಿಂದಾಗಿ ನಿಮ್ಮ ವಾಹನ ಅಪಘಾತ ಸಂಭವಿಸಿದರೆ ಬಿಬಿಎಂಪಿ ನಾಗರಿಕ ಸಮಿತಿಯು 15,000 ರೂಪಾಯಿ ಪರಿಹಾರವನ್ನು ನೀಡಲಿದೆ. ಇನ್ನು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಬಿಬಿಎಂಪಿ ಬುಧವಾರ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದರೂ ದುಡ್ಡೇ ದುಡ್ಡು!
ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ಕಳಪೆ ರಸ್ತೆ ಮತ್ತು ಗುಂಡಿಗಳಿಂದ ಅಪಘಾತವಾದ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸಂತ್ರಸ್ತರ ಚಿಕಿತ್ಸೆಗೆ ಅಗತ್ಯವಿರುವ ಆರ್ಥಿಕ ಪರಿಹಾರವನ್ನು ಪಾಲಿಕೆ ಭರಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಪರಿಹಾರ ನೀಡುವ ಬಗ್ಗೆ ಹೈಕೋರ್ಟ್ ನಿರ್ದೇಶನ
ನಗರದ ರಸ್ತೆಗಳ ದುಸ್ಥಿತಿ ಮತ್ತು ಗುಂಡಿಗಳಿಂದಾಗಿ ಅಪಘಾತಕ್ಕೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಪರಿಹಾರ ಒದಗಿಸುವುದಕ್ಕಾಗಿ ಮಾರ್ಗಸೂಚಿ ರೂಪಿಸುವಂತೆ ಸೂಚಿಸಿದ್ದು, ಬಿಬಿಎಂಪಿ ನಾಗರಿಕ ಸಮಿತಿಯು ಈ ಕುರಿತು ಪ್ರಚುರಪಡಿಸಲಿದೆ. ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸೂಚನೆಯಂತೆ ಈ ಅರ್ಜಿಗಳ ವಿಚಾರಣೆಗಾಗಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಅಥವಾ ವಿಶೇಷವಾಗಿ ಅಧಿಕಾರಿಯ ನೇತೃತ್ವದ ತಂಡವನ್ನು ರಚಿಸಲಾಗುತ್ತದೆ.
ಪರಿಹಾರಕ್ಕಾಗಿ 30 ದಿನಗಳಲ್ಲಿ ಅರ್ಜಿ ಸಲ್ಲಿಸಲು ಅನುಮತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಮತ್ತು ಫುತ್ ಪಾತ್ ಗಳಲ್ಲಿ ಗುಂಡಿ ಮತ್ತು ರಸ್ತೆಗಳ ದುಸ್ಥಿತಿಯಿಂದ ಅಪಘಾತ ಸಂಭವಿಸಿದರೆ ಅಂಥವರು 30 ದಿನಗಳಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಂತ್ರಸ್ತ ವ್ಯಕ್ತಿ ಅಥವಾ ಕುಟುಂಬ ಸದಸ್ಯರು ಪರಿಹಾರ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಈ ಅರ್ಜಿ ಪರಿಶೀಲಿಸಲಿರುವ ವಿಶೇಷ ಆಯುಕ್ತರು ಸಂತ್ರಸ್ತರಿಗೆ ವೈದ್ಯಕೀಯ ವೆಚ್ಚ ಭರಿಸುವುದಕ್ಕಾಗಿ 10,000 ರೂಪಾಯಿವರೆಗೂ ಮಧ್ಯಂತರ ಪರಿಹಾರ ನೀಡುವ ಅಧಿಕಾರವಿದೆ. ಸಣ್ಣ-ಪುಟ್ಟ ಗಾಯಗಳಾದಲ್ಲಿ ಕನಿಷ್ಠ 5,000 ರೂಪಾಯಿ ಮತ್ತು ಮೂರು ದಿನಗಳಿಗಿಂತ ಹೆಚ್ಚು ಅವಧಿ ಚಿಕಿತ್ಸೆ ಅಗತ್ಯವಿರುವ ಸಂತ್ರಸ್ತರಿಗೆ 10,000 ರೂಪಾಯಿವರೆಗೂ ಪರಿಹಾರವನ್ನು ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ನೀವು ಸಲ್ಲಿಸುವ ಪರಿಹಾರ ಅರ್ಜಿ ತಿರಸ್ಕೃತಗೊಳ್ಳಲು ಕಾರಣ
ಬಿಬಿಎಂಪಿ ಮಾರ್ಗಸೂಚಿಗಳ ಅಡಿಯಲ್ಲಿ ವಿಶೇಷ ಅಧಿಕಾರಿಯು ನೀವು ಸಲ್ಲಿಸುವ ಪರಿಹಾರದ ಅರ್ಜಿಯನ್ನು ತಿರಸ್ಕರಿಸುವುದಕ್ಕೂ ಅವಕಾಶವಿದೆ. ಅರ್ಜಿ ಜೊತೆಗೆ ನೀಡಿರುವ ದಾಖಲೆಗಳು ನಕಲಿ ಸೇರಿದಂತೆ ತಿರಸ್ಕಾರಕ್ಕೆ ಅರ್ಹವಾದ ಅರ್ಜಿಗಳು ಮತ್ತು ಅವಧಿ ಮೀರಿ ಸಲ್ಲಿಸಲಾದ ಅರ್ಜಿಗಳನ್ನು ವಿಶೇಷ ಅಧಿಕಾರಿಗಳೇ ತಿರಸ್ಕರಿಸುತ್ತಾರೆ. ಅಲ್ಲದೇ, ಅಪಘಾತ ನಡೆದ ರಸ್ತೆಯಲ್ಲಿ ಎಲ್ಲ ರೀತಿ ಮುನ್ನೆಚ್ಚರಿಕೆ ಮತ್ತು ಜಾಗೃತಿ ಫಲಕಗಳನ್ನು ಅಳವಡಿಸಿಯೂ ಅಪಘಾತ ಸಂಭವಿಸಿದ್ದರೆ ಅಂಥ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಬಿಬಿಎಂಪಿ ಸಹ ನಿರಾಕರಿಸುವ ಅವಕಾಶವಿರುತ್ತದೆ.
Recommended Video
ಪರಿಹಾರ ನೀಡಲು ಸಾಕ್ಷ್ಯ ಅಗತ್ಯ ಎಂದ ಪಾಲಿಕೆ
ಸಿಲಿಕಾನ್ ಸಿಟಿಯಲ್ಲಿರುವ ರಸ್ತೆಗಳ ದುಸ್ಥಿತಿ ಮತ್ತು ಗುಂಡಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ಚಾಟಿ ಬೀಸಿತ್ತು. ಇದರ ಬೆನ್ನಲ್ಲೇ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಎಂಥ ಪ್ರಕರಣಗಳು ಮಾತ್ರ ಪರಿಹಾರ ಪಡೆದುಕೊಳ್ಳುವುದಕ್ಕೆ ಯೋಗ್ಯವಾಗಿರುತ್ತವೆ ಎನ್ನುವ ಬಗ್ಗೆ ಒಂದು ಪಟ್ಟಿ ಮಾಡಿತ್ತು. ಬಿಬಿಎಂಪಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಸಂತ್ರಸ್ತರು ಅಥವಾ ಅವರ ಕುಟುಂಬ ಸದಸ್ಯರು ಅಗತ್ಯ ದಾಖಲೆಗಳನ್ನು ಅದರ ಜೊತೆಗೆ ಲಗತ್ತಿಸಬೇಕು. ಕಳಪೆ ರಸ್ತೆ ಮತ್ತು ಗುಂಡಿಗಳಿಂದಾಗಿ ಅಪಘಾತ ನಡೆದಿದೆ ಎಂಬುದರ ಬಗ್ಗೆ ನೇರಸಾಕ್ಷಿ, ದಾಖಲೆ, ಅಥವಾ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ನೀಡಬೇಕು. ಹಾಗಿದ್ದಲ್ಲಿ ಮಾತ್ರ ಅಂಥ ಅರ್ಜಿಗಳನ್ನು ಪರಿಹಾರ ನೀಡುವುದಕ್ಕೆ ಪರಿಗಣಿಸಲಾಗುತ್ತದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿತ್ತು.