ಅಪಘಾತದ ನಂತರ ಎಚ್ಚೆತ್ತ ಬಿಬಿಎಂಪಿ, 588 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ
ಬೆಂಗಳೂರು, ಏಪ್ರಿಲ್ 25 : ಬೆಂಗಳೂರಿನಲ್ಲಿ ಇತ್ತೀಚೆಗೆ ಬಿಬಿಎಂಪಿ ವಾಹನಗಳ ಅಪಘಾತ ಹೆಚ್ಚಾಗಿರುವ ಹಿನ್ನಲೆ, ಮುಂದಿನ ದಿನಗಳಲ್ಲಿ ಅಪಘಾತ ಆಗದಂತೆ ತಡೆಯಲು ವೇಗ ನಿಯಂತ್ರಕವನ್ನ ಅಳವಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಬಿಎಂಪಿ ಕಸದ ಲಾರಿ ಸಿಕ್ಕಿ 9 ವರ್ಷದ ಬಾಲಕಿ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ ಬಿಬಿಎಂಪಿಯ ನಿರ್ಲಕ್ಷ್ಯತನದ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈ ಎಲ್ಲಾ ಘಟನೆಗಳಿಂದ ಎಚ್ಚೆತ್ತಿರುವ ಬಿಬಿಎಂಪಿ 588 ಕಸದ ಲಾರಿಗಳಿಗೆ ವೇಗ ನಿಯಂತ್ರಕ ಅಳವಡಿಸಲು ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಜಂಟಿ ಆಯುಕ್ತ ಪರಶುರಾಮ್ ಶಿನ್ನಾಳ್ಕರ್, "ವಾಹನಗಳ ವೇಗವನ್ನು ಗಂಟೆಗೆ 35 ಕಿ.ಮೀಗೆ ನಿರ್ಬಂಧಿಸಲು ಈ ವೇಗ ನಿಯಂತ್ರಕಗಳನ್ನು ಅಳವಡಿಲಾಗುತ್ತದೆ. ಜೊತೆಗೆ ಭವಿಷ್ಯದಲ್ಲಿ ಮತ್ತೆ ಇಂತಹ ಅಪಘಾತಗಳು ಆಗದಂತೆ ತಪ್ಪಿಸಲು ಚಾಲಕರಿಗೆ ಮೂಲಭೂತ ಕೌಶಲ್ಯ ಅಭಿವೃದ್ದಿ ತರಬೇತಿಯನ್ನು ನೀಡುತ್ತೇವೆ," ಎಂದು ತಿಳಿಸಿದ್ದಾರೆ.
588 ಕಸದ ಲಾರಿಗಳಿಗಳಿಗೆ ವೇಗ ನಿಯಂತ್ರಕವನ್ನು ಅಳವಡಿಸಲಾಗುತ್ತದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರಂತರವಾಗಿ ಹೆಚ್ಚುತ್ತಿದ್ದು, ಕಸದ ಲಾರಿಗಳು ಟ್ರಾಫಿಕ್ ಮಧ್ಯೆ ಸಂಚರಿಸುವುದು ಕಷ್ಟ ಸಾಧ್ಯ. ಈಗಾಗಲೇ ಭಾನುವಾರದಿಂದಲೇ ಬಿಬಿಎಂಪಿ ವಾಹನಗಳನ್ನ ಓಡಿಸುವ ಚಾಲಕರಿಗೆ ಚಾಲನಾ ತರಬೇತಿಯನ್ನು ಪ್ರಾರಂಭಿಸಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕೆ ವೇಗ ನಿಯಂತ್ರಕಗಳು ಮತ್ತು ಚಾಲಕರಿಗೆ ತರಬೇತಿ ಹೊರತಾಗಿ ಬಿಬಿಎಂಪಿ ತನ್ನ ವಾಹನಗಳ ಸ್ಥಿತ ಮತ್ತು ಚಾಲಕನ ಸಾಮರ್ಥ್ಯಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ಸೂಚಿಸಿದೆ. ಇದರ ಅನ್ವಯ ದೈಹಿಕವಾಗಿ ಬಲಾಡ್ಯವಾಗಿರುವುದು, ವೇಗ ನಿಯಂತ್ರಿಸುವ ಸಾಮರ್ಥ್ಯ ಮತ್ತು ಟ್ರಕ್ ಚಾಲಕರ ಕಣ್ಣಿನ ಪರಿಶೀಲನೆಯನ್ನು ನಡೆಸಲಾಗುತ್ತದೆ. ಈ ಎಲ್ಲಾ ರೀತಿಯ ಪರೀಶೀಲನೆಯಲ್ಲಿ ಪಾಸಾದ ಚಾಲಕರಿಗೆ ಮಾತ್ರ ವಾಹನಗಳನ್ನ ಓಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಇದು ಅಪಘಾತಗಳನ್ನು ಕಡಿಮೆ ಮಾಡುತ್ತದೆ ಎಂಬ ಆಶಯ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
Recommended Video