ಬೆಂಗಳೂರಿಗರಿಗೆ ಮತ್ತೆ ತೆರಿಗೆ ಭಾರ ಹಾಕಿದ ಬಿಬಿಎಂಪಿ
ಬೆಂಗಳೂರು, ಜನವರಿ 28: ಬೆಲೆ ಏರಿಕೆಯಿಂದ ಜನ ಬಳಲಿ ಬೆಂಡಾಗಿದ್ದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಾಗರಿಕರ ಮೇಲೆ ಮತ್ತೊಂದು ಬರೆ ಎಳೆಯಲು ಸಜ್ಜಾಗಿದೆ.
Recommended Video
ಇನ್ಮುಂದೆ ಆಸ್ತಿ ತೆರಿಗೆಯ ಜೊತೆ ಹೆಚ್ಚುವರಿಯಾಗಿ ರಸ್ತೆ ತೆರಿಗೆಯನ್ನೂ ಬೆಂಗಳೂರಿಗರು ಪಾವತಿಸಬೇಕು ಎಂದು ಬಿಬಿಎಂಪಿ ಹೇಳಿದೆ. ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯಕ್ಕೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಯಿತು.
ದುಪ್ಪಟ್ಟು ತೆರಿಗೆಯಿಂದ ಮೂಲ ಆದಾಯ ವೃದ್ಧಿಗೆ ಬಿಬಿಎಂಪಿ ತಂತ್ರಗಾರಿಕೆ
ಭೂ ಸಾರಿಗೆ ಕರ ಜಾರಿಗೆ ಬಂದರೆ ಇನ್ಮುಂದೆ ಬೆಂಗಳೂರು ನಾಗರಿಕರು ತಮ್ಮ ಆಸ್ತಿ ತೆರಿಗೆಯ ಜೊತೆ ಶೇ 2 ರಷ್ಟು ಭೂಸಾರಿಗೆ ಕರವನ್ನು ಪಾಲಿಕೆಗೆ ಪಾವತಿಸಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಎಲ್ಲದಕ್ಕಿಂತ ಮುಖ್ಯ ಅಂಶವೆಂದರೆ, ಹೀಗೆ ಸಂಗ್ರಹವಾಗುವ ತೆರಿಗೆ ಹಣವನ್ನು ಭೂ ಸಾರಿಗೆ ಇಲಾಖೆಗೆ ಕಳುಹಿಸದೇ, ಪಾಲಿಕೆಯೇ ತನ್ನ ಬಳಿ ಇಟ್ಟುಕೊಂಡು ರಸ್ತೆ, ಚರಂಡಿ, ಬೀದಿ ದೀಪಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಮೇಯರ್ ಮುಂದಾಗಬೇಕು ಎಂದು ಕೌನ್ಸಿನಲ್ ಸಭೆ ನಿರ್ಣಯಿಸಿದೆ.
ಒಂದು ವೇಳೆ ಬಿಬಿಎಂಪಿಯ ಈ ನಿರ್ಣಯಕ್ಕೆ ಸರ್ಕಾರ ಅನುಮತಿ ನೀಡಿದರೆ, ಶೇ 2 ರಷ್ಟು ಭೂ ಸಾರಿಗೆ ಕರವನ್ನು ವಸೂಲಿ ಮಾಡುವುದರಿಂದ ಬಿಬಿಎಂಪಿಗೆ ವಾರ್ಷಿಕ 150 ಕೋಟಿ ರುಪಾಯಿ ದೊರೆಯಲಿದೆ. ಈ ಹಣವನ್ನು ರಸ್ತೆ ಅಭಿವೃದ್ದಿಗೆ ಬಳಸಿಕೊಳ್ಳಬಹುದು ಎಂಬ ವಾದ ಬಿಬಿಎಂಪಿದಾಗಿದೆ.