ಮಗಳಿಗೆ ಸೀಟ್ ನೀಡಲು ತಾಯಿಯಿಂದ ಮೈ ಮಸಾಜ್ ಮಾಡಿಸಿಕೊಂಡ ಶಿಕ್ಷಕ!
ಬೆಂಗಳೂರು, ಸೆಪ್ಟೆಂಬರ್ 23: ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂದು ಜಗತ್ತಿಗೆ ಸಾರಿದ ಭಾರತದಲ್ಲಿ ಗುರುವಿಗೆ ಪೂಜ್ಯನೀಯ ಸ್ಥಾನವಿದೆ. ಇಂಥ ಸಮಾಜದಲ್ಲಿ ಕೆಲವು ದುಷ್ಟರು ತಾವಿರುವ ಗುರುವಿನ ಸ್ಥಾನಕ್ಕೆ ಅಪಮಾನ ಎನ್ನುವಂತಿದ್ದಾರೆ. ಬೆಂಗಳೂರಿನಲ್ಲೇ ಅಂಥದ್ದೇ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಮ್ಮ ಮಗಳನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ತೆರಳಿದ ಮಹಿಳಾ ಪೋಷಕರ ಕೈಯಲ್ಲೇ ಶಿಕ್ಷಕನೊಬ್ಬ ಮೈ-ಕೈ ಮಸಾಜ್ ಮಾಡಿಸಿಕೊಂಡಿರುವ ಘಟನೆ ಬೆಂಗಳೂರು ನಗರದ ಕೋದಂಡರಾಮಪುರದ ವ್ಯಾಪ್ತಿಯಲ್ಲಿ ನಡೆದಿದೆ. ಕೋದಂಡರಾಮಪುರದ ಪಾಲಿಕೆ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಲೋಕೇಶಪ್ಪ ತೋರಿದ ವಿಕೃತ ನಡವಳಿಕೆಗೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮೈಸೂರಿನಲ್ಲಿ ಬಾಡಿ ಮಸಾಜ್ ನೆಪದಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ
ಬಿಬಿಎಂಪಿ ಪ್ರೌಢಶಾಲೆಯ ಬೆಂಚ್ ಮೇಲೆಯೇ ಅಂಗಿಬಿಚ್ಚಿಕೊಂಡು ಮಹಿಳಾ ಪೋಷಕರಿಂದ ಶಿಕ್ಷಕ ಲೋಕೇಶಪ್ಪ ಮೈ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಮೇಲಾಧಿಕಾರಿಗಳು ಕರ್ತವ್ಯಲೋಪದಡಿ ಲೋಕೇಶಪ್ಪರನ್ನು ಅಮಾನತುಗೊಳಿಸಿದ್ದು, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಏನಿದು ಶಿಕ್ಷಕನ ಮಸಾಜ್ ಘಟನೆ?:
ಬೆಂಗಳೂರು ಕೋದಂಡರಾಮಪುರದ ಪಾಲಿಕೆ ಪ್ರೌಢಶಾಲೆಗೆ ಮಹಿಳೆಯೊಬ್ಬರು ತಮ್ಮ ಮಗಳನ್ನು ದಾಖಲಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಲೋಕೇಶಪ್ಪ ಮಹಿಳೆ ಬಗ್ಗೆ ವಿಚಾರಿಸಿದಾಗ ಅವರು ಬ್ಯೂಟಿ ಪಾರ್ಲರ್ ಇಟ್ಟುಕೊಂಡಿರುವುದು ಗೊತ್ತಾಗುತ್ತದೆ. ಈ ವಿಷಯ ತಿಳಿಯುತ್ತಿದ್ದಂತೆ ಲೋಕೇಶಪ್ಪ ತಮಗೂ ಮಸಾಜ್ ಮಾಡುವಂತೆ ಮಹಿಳೆಗೆ ಪೀಡಿಸಿದ್ದಾನೆ. ಮಗಳಿಗಾಗಿ ಶಿಕ್ಷಕನ ಬೇಡಿಕೆಯನ್ನು ಮಹಿಳೆ ಒಪ್ಪಿಕೊಂಡಿದ್ದಾರೆ. ಶಾಲೆಯ ಇತರೆ ಶಿಕ್ಷಕರನ್ನು ಹೊರಗೆ ಕಳುಹಿಸಿದ ಲೋಕೇಶಪ್ಪ ಕಚೇರಿಯ ಕೊಠಡಿಯಲ್ಲೇ ಅಂಗಿ ಬಿಚ್ಚಿ ಕುಳಿತುಕೊಂಡು ಮಹಿಳೆಯಿಂದ ಮೈ-ಕೈ ಮಸಾಜ್ ಮಾಡಿಸಿಕೊಂಡಿದ್ದಾರೆ.
ಶಿಕ್ಷಕರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ:
ಕೋದಂಡರಾಮಪುರದ ಪಾಲಿಕೆ ಪ್ರೌಢಶಾಲೆಯಲ್ಲಿ ಬಹುಪಾಲು ಶಿಕ್ಷಕರು ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರೇ ಆಗಿದ್ದಾರೆ. ಈ ಹಿನ್ನೆಲೆ ಪ್ರಭಾರ ಮುಖ್ಯ ಶಿಕ್ಷಕ ಲೋಕೇಶಪ್ಪ ಬಗ್ಗೆ ತಿಳಿದಿದ್ದರೂ ಸಹ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಯಾವುದೇ ರೀತಿ ದೂರು ನೀಡುವುದಕ್ಕೆ ಹೋಗಿರಲಿಲ್ಲ. ಲೋಕೇಶಪ್ಪ ವಿರುದ್ಧ ಕಾಮಚೇಷ್ಟೆ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಶಾಲೆಯ ಭದ್ರತಾ ಸಿಬ್ಬಂದಿಯ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಭಾರ ಶಿಕ್ಷಕ ಲೋಕೇಶಪ್ಪ ವಿರುದ್ಧ ಇಲಾಖಾ ತನಿಖೆ:
Recommended Video
"ತಮ್ಮ ಮಗಳನ್ನು ಶಾಲೆಗೆ ದಾಖಲಿಸಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ ಪ್ರಭಾರ ಮುಖ್ಯ ಶಿಕ್ಷಕ ಲೋಕೇಶಪ್ಪ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ," ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಬಿ ರೆಡ್ಡಿ ಹೇಳಿದ್ದಾರೆ.