ಬೆಂಗಳೂರಿನಲ್ಲಿ 'ಸ್ವಚ್ಛ ಸರ್ವೇಕ್ಷಣೆ-2020'ರ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಜನವರಿ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಬ್ಬನ್ ಪಾರ್ಕ್ ಮುಖ್ಯದ್ವಾರದ ಬಳಿ ಶನಿವಾರ 'ಸ್ವಚ್ಛ ಸರ್ವೇಕ್ಷಣೆ ಅಭಿಯಾನ-2020' ಜಾಗೃತಿ ಕಾರ್ಯಕ್ರಮಕ್ಕೆ ಮೇಯರ್ ಎಂ ಗೌತಮ್ ಕುಮಾರ್ ಚಾಲನೆ ನೀಡಿದರು.
''ಬೆಂಗಳೂರಲ್ಲಿ ಸ್ವಚ್ಚತಾ ಕಾಳಜಿಯು ಸ್ವಚ್ಚ ಸರ್ವೇಕ್ಷಣ್ ಅಭಿಯಾನ -2020ಕ್ಕೆ ಮಾತ್ರ ಸೀಮಿತವಾಗಬಾರದು. ಪಾಲಿಕೆ ಅಧಿಕಾರಿಗಳ ಜೊತೆ ಎಲ್ಲಾ ನಾಗರಿಕರು ಕೈಜೋಡಿಸಿ ನಗರಕ್ಕೆ ಮೊದಲ ಸ್ಥಾನ ಸಿಗುವವರೆಗೂ ಸ್ವಚ್ಛತಾ ಪ್ರಕ್ರಿಯೆಯಲ್ಲಿ ತೋಡಗಿಕೊಳ್ಳಬೇಕು'' ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಎಚ್ಚರಿಕೆ! ಎಲ್ಲೆಂದರಲ್ಲಿ ಕಸ ಹಾಕಿದರೆ ಬರಲಿದ್ದಾರೆ ಚಾರ್ಲಿಗಳು...
ಈ ವೇಳೆ ವಿರೋಧಪಕ್ಷದ ನಾಯಕ ಅಬ್ದುಲ್ ವಾಜೀದ್, ವಿಶೇಷ ಆಯುಕ್ತ ಡಿ.ರಂದೀಪ್, ಜಂಟಿ ಆಯುಕ್ತ ಬಾಲಶೇಖರ್, ಸಂಘದ ಅಧ್ಯಕ್ಷೆ ಪಲ್ಲವಿ, ಉಪಾಧ್ಯಕ್ಷ ಅಮೃತ್ ರಾಜ್ ವಿದ್ಯಾರ್ಥಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.
ಪ್ರತಿಯೊಬ್ಬರೂ ಅರಿವು ಮೂಡಿಸಬೇಕು
''ಕಸಮುಕ್ತ ಬೆಂಗಳೂರು ಮಾಡಲು ಪಾಲಿಕೆ ವತಿಯಿಂದ ಈಗಾಗಲೇ ಅನೇಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೊತೆಗೆ ಇತರರಿಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು'' ಎಂದು ಮೇಯರ್ ಹೇಳಿದರು.
ಆರೋಗ್ಯಾಧಿಕರಿಗಳಿಗೆ ಕರೆ ಮಾಡಿ
''ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕಾದರೆ ನಾವು ಕಡ್ಡಾಯವಾಗಿ ಕಸಮುಕ್ತ ನಗರವನ್ನಾಗಿಸಬೇಕು. ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ಬಿದ್ದಿರುವುದು ಕಂಡು ಬಂದಾಗ ಪಾಲಿಕೆ ನಿಯಂತ್ರಣ ಕೊಠಡಿ ಹಾಗೂ ಆರೋಗ್ಯಾಧಿಕರಿಗಳಿಗೆ ಕರೆ ಮಾಡಿದರೆ ಕೂಡಲೆ ಬಿದ್ದಿರುವ ಕಸವನ್ನು ತೆರವುಗೊಳಿಸಲಿದ್ದಾರೆ'' ಎಂದು ಮೇಯರ್ ಹೇಳಿದರು.
'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...
ಅಭಿಪ್ರಾಯವನ್ನು ಹಂಚಿಕೊಳ್ಳಿ
ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ. ಈ ಪೈಕಿ ಇದುವರೆಗೆ 40 ಸಾವಿರ ಪ್ರತಿಕ್ರಿಯೆಗಳನ್ನು ನೀಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಲಿಂಕ್ ಗೆ ಎಲ್ಲರೂ ಭೇಟಿ ನೀಡಿ ಅಲ್ಲಿ ಕೇಳುವ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ'' ತಿಳಿಸಿದರು.
ನಮ್ಮ ಊರು ಸ್ವಚ್ಛ ಬೆಂಗಳೂರು
ಜಾಗೃತಿ ಜಾಥಾದಲ್ಲಿ ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳು, ಮಹಾರಾಣಿ ಕಾಲೇಜು, ಹೋಮ್ ಸೈನ್ಸ್ ಕಾಲೇಜು, ಜೈನ್ ವಿಶ್ವವಿದ್ಯಾಲಯದ, ಬಿಷಪ್ ಕಾಟನ್ ಮಹಿಳಾ ಕಾಲೇಜು ವಿದ್ಯಾರ್ಥಿಗಳು, ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ವೇಳೆ ನಮ್ಮ ಊರು ಸ್ವಚ್ಛ ಬೆಂಗಳೂರು ಎಂಬ ಘೋಷಣೆ ಕೂಗಲಾಯಿತು.