ದಂಡ ಸಂಗ್ರಹಕ್ಕೆ ಮಾರ್ಷಲ್ಗಳಿಗೆ ಬಿಬಿಎಂಪಿ ಟಾರ್ಗೆಟ್!: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಬೆಂಗಳೂರು, ಅಕ್ಟೋಬರ್ 28: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಿದ್ದರೂ ಅನೇಕರು ಯಾವುದೇ ಭಯ, ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಅಡ್ಡಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದ ಕಡ್ಡಾಯವಾಗಿದ್ದರೂ, ಜನರು ನಿಯಮ ಪಾಲನೆಗೆ ಮುಂದಾಗುತ್ತಿಲ್ಲ.
ಹೀಗಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಲು ದಂಡ ವಿಧಿಸುವ ಕಾರ್ಯ ಮಾಡಲಾಗುತ್ತಿದೆ. ಬೆಂಗಳೂರಿನ ಮೂಲೆ ಮೂಲೆಯಲ್ಲಿಯೂ ಬಿಬಿಎಂಪಿ ಮಾರ್ಷಲ್ಗಳನ್ನು ನೇಮಿಸಲಾಗಿದ್ದು, ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಪಾಡದವರು ಹಾಗೂ ಇತರೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ.
ಮಾಸ್ಕ್ ಹಾಕ್ಕೊಳ್ಳಿ: ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ, ಮೂವರ ಬಂಧನ
ಆದರೆ ಬಿಬಿಎಂಪಿಯ ದಕ್ಷಿಣ ವಲಯದ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಹೊರಡಿಸಿರುವ ಆದೇಶ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಿ ಆಕ್ರೋಶಕ್ಕೆ ಗುರಿಯಾಗಿದ್ದ ಸರ್ಕಾರ, ದಂಡದ ಪ್ರಮಾಣವನ್ನು ಇಳಿಕೆ ಮಾಡಿತ್ತು. ಬಿಬಿಎಂಪಿಯ ಹೊಸ ಆದೇಶ, ದಂಡ ಸಂಗ್ರಹದ ಮೂಲಕ ಹಣಮಾಡುವ ದಂಧೆಯಂತೆ ಕಾಣಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದೆ. ದಂಡ ವಸೂಲಿಗೆ ಪೊಲೀಸರಿಗೆ ಟಾರ್ಗೆಟ್ ನೀಡುವಂತೆ ಮಾರ್ಷಲ್ಗಳಿಗೆ ಟಾರ್ಗೆಟ್ ನೀಡಿರುವುದು ಹಗಲು ದರೋಡೆ ಎಂದು ಅನೇಕರು ಟೀಕಿಸಿದ್ದಾರೆ. ಮುಂದೆ ಓದಿ.
ಟಾರ್ಗೆಟ್ ನೀಡಿದ ಬಿಬಿಎಂಪಿ
ಬೆಂಗಳೂರು ನಗರದಲ್ಲಿ ನೇಮಕಗೊಂಡಿರುವ ಬಿಬಿಎಂಪಿ ಮಾರ್ಷಲ್ಗಳು ರಸ್ತೆಗಳಲ್ಲಿ ಓಡಾಡುವ ಜನರು, ವಾಹನ ಸವಾರರು, ವ್ಯಾಪಾರಿಗಳು ಮಾಸ್ಕ್ ಧರಿಸಿದ್ದಾರೆ ಇಲ್ಲವೇ ಎಂದು ಪರಿಶೀಲಿಸುತ್ತಿದ್ದಾರೆ. ತಪ್ಪಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದಾರೆ. ಆದರೆ ದಕ್ಷಿಣ ವಲಯದಲ್ಲಿ ಮಾರ್ಷಲ್ಗಳಿಗೆ ಟಾರ್ಗೆಟ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಟಾರ್ಗೆಟ್ ನೀಡಿದ್ದರೂ ವಿಫಲ
ದಕ್ಷಿಣ ವಲಯದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ದಿನಕ್ಕೆ ಕನಿಷ್ಠ 20 ಮಂದಿ ತಪ್ಪಿತಸ್ಥರನ್ನು ಹಿಡಿದು ಅವರಿಂದ ದಂಡ ವಸೂಲಿ ಮಾಡುವಂತೆ ಆದೇಶಿಸಲಾಗಿದೆ. ದಿನಕ್ಕೆ ಕನಿಷ್ಠ 20 ಮಂದಿಯಿಂದ ದಂಡ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿದ್ದರೂ, ಮಾರ್ಷಲ್ಗಳು ಅದರಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಐದು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಬಿಬಿಎಂಪಿ
ವಿಫಲರಾದರೆ ಮೇಲುಸ್ತುವಾರಿಗಳ ವಿರುದ್ಧ ಕ್ರಮ
ದಿನಕ್ಕೆ 20 ಮಂದಿಯಿಂದ ದಂಡ ವಸೂಲಿ ಮಾಡುವಲ್ಲಿ ಮಾರ್ಷಲ್ಗಳು ವಿಫಲರಾದರೆ ದಕ್ಷಿಣ ವಲಯ ಮಾರ್ಷಲ್ ಉಸ್ತುವಾರಿಗಳು ಹಾಗೂ ಸಂಬಂಧಿತ ವಿಭಾಗೀತ ಮೇಲುಸ್ತುವಾರಿಗಳ ವಿರುದ್ಧ 2005ರ ವಿಪತ್ತು ನಿರ್ವಹಣೆ ಕಾಯ್ದೆಯಡಿ, ಕೋವಿಡ್ 19 ನಿಯಂತ್ರಣಕ್ಕೆ ಕ್ರಮತೆಗೆದುಕೊಳ್ಳುವಲ್ಲಿ ಉದ್ದೇಶಪೂರ್ವಕವಾಗಿ ವಿಫಲರಾಗಿದ್ದಕ್ಕಾಗಿ ಯಾವುದೇ ನೋಟಸ್ ಇಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾನೂನಾತ್ಮಕ ದರೋಡೆ
'ದರೋಡೆಯನ್ನು ಕಾನೂನಾತ್ಮಕವಾಗಿ ಮಾಡಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದೀರಿ. ಈ ನೋಟಿಸಿನಲ್ಲಿ ಕೊರೊನಾ ತಡೆಯುವುದಕ್ಕಿಂತ, ಅದರಿಂದ ಪಡೆಯೋದು ಏನು ಅಂತ ಯೋಚಿಸ್ತಿದ್ದೀರಿ. welldone BBMP. ಜನ ತಿರುಗಿಬಿದ್ರೆ ಗೊತ್ತಾಗತ್ತೆ ನಿಮಗೆ. ನಾಚಿಕೆಯಾಗಬೇಕು, ಥೂ...' ಎಂದು ರಂಗಭೂಮಿ ಕಲಾವಿದ ನಿರಂಜನ್ ಖಾಲಿಕೊಡ ಟೀಕಿಸಿದ್ದಾರೆ.
Recommended Video