ಹೊರಗುತ್ತಿಗೆ ಶಿಕ್ಷಕರ ವೇತನ ವಿಳಂಬ: ಬಿಬಿಎಂಪಿ ಎದುರು ಪ್ರತಿಭಟನೆ
ಬೆಂಗಳೂರು, ಡಿಸೆಂಬರ್, 05 : ಪಾಲಿಕೆಯ ಹೊರಗುತ್ತಿಗೆ ಆಧಾರದ12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನ ವಿಳಂಬ ವಿರೋಧಿಸಿ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಮಂಗಳವಾರ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಕಳೆದ ಮೂರು ತಿಂಗಳಿನಿಂದ ಸಂಬಳವಾಗಿಲ್ಲ, ಸರಸ್ವತಿ ಮತ್ತು ಹರೀಶ್ ಎಂಬ ಶಿಕ್ಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಇದನ್ನು ಖಂಡಿಸಿ ಎಲ್ಲಾ ಗುತ್ತಿಗೆ ಶಿಕ್ಷಕರು ಪಾಲಿಕೆ ಕೇಂದ್ರ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಶಿಕ್ಷಕರಿಗೆ ಕೂಡಲೇ ಸಂಬಳ ನೀಡುವಂತೆ ಒತ್ತಾಯಿಸಿ ಧರಣಿ ಪ್ರತಿಭಟಾ ನಿರತ ಶಿಕ್ಷಕರಿಗೆ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಸಾಥ್ ನೀಡಿದ್ದಾರೆ.
ಬಿಬಿಎಂಪಿಯ ಶಾಲೆಗಳಲ್ಲಿ ಶಿಕ್ಷಣವಿಲ್ಲ ಯಾಕಂದರೆ ಎಲ್ಲಾ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿ. ಕ್ರಿಸ್ಟಲ್ ಇನ್ಫೋಸಿಸ್ ಅನ್ನೋ ಸಂಸ್ಥೆ ಈ ಶಿಕ್ಷಕರಿಗೆ ಮೂರು ತಿಂಗಳಿಂದ ಸಬಳ ನೀಡಿಲ್ಲ. ಪಾಲಿಕೆ ಹಣ ನೀಡುವುದನ್ನು ವಿಳಂಬ ಮಾಡಿದರೆ ಗುತ್ತಿಗೆ ಪಡೆದ ಸಂಸ್ಥೆ ಶಿಕ್ಷಕರಿಗೆ ಸಂಬಳ ಕೊಡಬೇಕು. ಆದರೆ ಆ ಸಂಸ್ಥೆಯ ದುರಾಡಳಿತದಿಂದ ಶಿಕ್ಷಕರು ಕಷ್ಟಪಡುವಂತಾಗಿದೆ ಪೌರಕಾರ್ಮಿಕರ ಖಾಯಂ ರೀತಿಯಲ್ಲಿ ನಮ್ಮನ್ನು ನೇಮಕ ಮಾಡಿಕೊಳ್ಳಬೇಕು ಎಂದು ಉತ್ತಾಯಿಸಿದರು.
ಬೇಡಿಕೆಗಳು: ಮೂರು ತಿಂಗಳಿಂದ ಸಂಬಳ ವಿಳಂಬವಾಗುತ್ತಿದ್ದು ನಗರದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತಿದೆ. ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಬಿಬಿಎಂಪಿಯಿಂದಲೇ ನೇರವಾಗಿ ಹಣ ನೀಡಬೇಕೆಂದು ಒತ್ತಾಯಿಸಿದರು. ಕೂಡಲೇ ಸಂಬಳ ನೀಡುವಂತೆ ಒತ್ತಾಯಿಸಿ ವಿಶೇಷ ಆಯುಕ್ತರಿಗೆ ಮನವಿ ಪತ್ರ ನೀಡಿದರು.