ಸಚಿವ ಜಾರ್ಜ್ ಒಡೆತನದ ಕಟ್ಟಡಕ್ಕೂ ಬಿಸಿ ಮುಟ್ಟಿಸಿದ ಬಿಬಿಎಂಪಿ
ಬೆಂಗಳೂರು, ಡಿಸೆಂಬರ್ 13: ಕೊಡಿಗೇಹಳ್ಳಿ ಹಾಗೂ ಯಲಹಂಕ ನ್ಯೂಟೌನ್ ವ್ಯಾಪ್ತಿಯ ಸಹಾಯಕ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹಲವೆಡೆ ಮಿಂಚಿನ ದಾಳಿ ನಡೆಸಿ ತೆರಿಗೆ ಬಾಕಿ ಉಳಿಸಿಕೊಂಡ ಪ್ರಭಾವಿಗಳಿಗೆ ಬಿಸಿ ಮುಟ್ಟಿಸಿದರು.
ಬಿಬಿಎಂಪಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ್ ಹಾಗೂ ಆಯುಕ್ತರಾದ ಮಂಜುನಾಥ್ ಪ್ರಸಾದ್ ರ ಕಟ್ಟುನಿಟ್ಟಿನ ಆದೇಶದನ್ವಯ ತೆರಿಗೆ ದಾಳಿ ನಡೆಸಲಾಯಿತು.
ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?
1.5 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಿರ್ಲೋಸ್ಕರ ಟೆಕ್ ಪಾರ್ಕ್ ಮೇಲೆ ಕೊಡಿಗೆಹಳ್ಳಿ ಸಹಾಯಕ ಕಂದಾಯ ಅಧಿಕಾರಿಗಳಿಂದ ತೆರಿಗೆ ದಾಳಿ ನಡೆಸಲಾಯ್ತು. ಸಚಿವ ಜಾರ್ಜ್ ಒಡೆತನದ ಕಿರ್ಲೋಸ್ಕರ ಕಟ್ಟಡವೊಂದರಲೇ ಒಂದೂವರೆ ಕೋಟಿಗೂ ಮೀರಿದಂತೆ ತೆರಿಗೆ ಹಣ ಬಾಕಿ ಉಳಿಸಿಕೊಳ್ಳಲಾಗಿದೆ.
ಕಳೆದ ಹಲವು ವರ್ಷಗಳಿಂದ ದಂಡ ಸಹಿತ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಿರ್ಲೋಸ್ಕರ ಸಂಸ್ಥೆ, ಈ ಹಿಂದೆ ಹಲವು ನೋಟೀಸ್ ನೀಡಿದರೂ ಉತ್ತರಿಸದೆ ಇದ್ದ ಕಾರಣ ತೆರಿಗೆ ದಾಳಿ ನಡೆಸಿ ನೋಟಿಸ್ ಅಂಟಿಸಲಾಯಿತು.
ದಯಾನಂದ ಪೈ ಒಡೆತನದ ಸೆಂಚುರಿ ಕಾರ್ಬೆಲ್ಸ್
ಸಹಕಾರ ನಗರ ಮುಖ್ಯ ರಸ್ಥೆಯಲ್ಲಿರುವ ಖ್ಯಾತ ಉದ್ಯಮಿ ದಯಾನಂದ ಪೈ ಒಡೆತನದ ಸೆಂಚುರಿ ಕಾರ್ಬೆಲ್ಸ್ 40 ಲಕ್ಷ ರೂಗಳಷ್ಟು ದೊಡ್ಡ ತೆರಿಗೆ ಮೊತ್ತ ಬಾಕಿ ಉಳಿಸಿಕೊಂಡಿದ್ದರು. ಸತತ ನೋಟೀಸ್ ಗಳಿಗೂ ಉತ್ತರಿಸದ ಕಾರಣ ಬಿಬಿಎಂಪಿ ಪ್ರಹರಿ ಸಿಬ್ಬಂದಿಗಳು ರೆಸ್ಟೋರೆಂಟಿನ ವಸ್ತುಗಳನ್ನು ಜಪ್ತಿ ಮಾಡಿದರು.
5 ಲಕ್ಷದ 46 ಸಾವಿರ ಚೆಕ್ ನೀಡಿದರು
ಕೃಷ್ಣತುಂಗ ಬಿಲ್ಡರ್ ಹಾಗೂ ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸಯ್ಯ 8.5 ಲಕ್ಷ ತೆರಿಗೆ ಉಳಿಸಿಕೊಂಡಿದ್ದರು. ದಾಳಿಯ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಕಂಡ ಶ್ರೀನಿವಾಸಯ್ಯ ಸ್ಥಳದಲ್ಲಿಯೇ 5 ಲಕ್ಷದ 46 ಸಾವಿರ ಚೆಕ್ ನೀಡಿದರು.
ತ್ರಿಶಾರ ಪಾರ್ಟಿ ಹಾಲ್
ಉದ್ಯಮಿ ಪ್ರಶಾಂತ್ ಜೋಡಿದಾರ್ ಒಡೆತನದ ತ್ರಿಶಾರ ಪಾರ್ಟಿ ಹಾಲ್ ಹಾಗೂ ಫಿಲಿಪ್ ಶೋರೂಂ ಮೇಲೆಯೂ ದಾಳಿ ನಡೆಸಲಾಯ್ತು. ಪ್ರಶಾಂತ್ ಬಿಬಿಎಂಪಿಗೆ ಕಟ್ಟದೆ ಉಳಿಸಿಕೊಂಡಿರುವ 9 ಲಕ್ಷದ 70 ಸಾವಿರ ರೂ ತೆರಿಗೆ ವಸೂಲಾತಿಗಾಗಿ ಈ ದಾಳಿ ನಡೆಸಲಾಗಿತ್ತು
ಯಲಹಂಕ ನ್ಯೂಟೌನ್ ವ್ಯಾಪ್ತಿ
ಇನ್ನು ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲೂ ಸಹಾಯಕ ಕಂದಾಯ ಅಧಿಕಾರಿ ಕೃತಿಕಾ ನೇತೃತ್ವದಲ್ಲಿ ಪ್ರಭಾವಿಗಳ ಕಟ್ಟಡದ ಮೇಲೆ ಕ್ಷಿಪ್ರ ತೆರಿಗೆ ದಾಳಿ ನಡೆಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಂಡ 94 ಲಕ್ಷಕ್ಕೂ ಅಧಿಕ ತೆರಿಗೆ ಹಣ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು
ಕಂದಾಯ ಅಧಿಕಾರಿಗಳ ತಂಡ
ಜಂಟಿ ಆಯುಕ್ತರಾದ ಡಾ ನಾಗರಾಜ್, ಕಂದಾಯ ಅಧಿಕಾರಿ ಪಂಚಲಿಂಗೇ ಗೌಡ, ಸಹಾಯಕ ಕಂದಾಯ ಅಧಿಕಾರಿ ಬಿ ವಿಟ್ಟಲ್, ಮೌಲ್ಯಮಾಪಕರಾದ ರಮೇಶ್, ಕಂದಾಯ ಪರಿವೀಕ್ಷಕರಾದ ಸಿದ್ದಗಂಗಯ್ಯ, ತೆರಿಗೆ ನಿರ್ದೇಶಕರಾದ ಪರಮೇಶ್ ದಾಳಿಯಲ್ಲಿ ಭಾಗಿಯಾಗಿದ್ದರು.