ಬೆಂಗಳೂರು: ಪೂರ್ವ ವಲಯದ ವಿಧಾನಸಭಾ ಕ್ಷೇತ್ರಗಳಿಗೆ 25 ಲಕ್ಷ ಪ್ಯಾಕೇಜ್
ಬೆಂಗಳೂರು ಮೇ30: ಮಳೆಗಾಲದಲ್ಲಿನ ಅವಾಂತರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ವಲಯವಾರು ಉಸ್ತುವಾರಿಯನ್ನು ಸಚಿವರಿಗೆ ವಹಿಸಿದ್ದರು. ಮಳೆಯ ಅವಾತರ ತಪ್ಪುವ ಸಲುವಾಗಿ ಸಚಿವ ಡಾ. ಅಶ್ವಥ್ ನಾರಾಯಣರವರು ಪೂರ್ವವಲಯದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು. ಸಭೆಯ ಬಳಿಕ ಪೂರ್ವ ವಲಯದ ವಿಧಾನಸಭಾ ಕ್ಷೇತ್ರಗಳಿಗೆ ಮಳೆ ನೀರು ಚರಂಡಿಯಲ್ಲಿನ ಹೂಳೆತ್ತಲು ತಲಾ 25 ಲಕ್ಷ ರೂ.ಗಳನ್ನು ಕೊಡಲಾಗಿದೆ. ಇಲ್ಲೆಲ್ಲ ಏಳು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ನಂತರದ ಎರಡು ದಿನಗಳಲ್ಲಿ ಕಾರ್ಯಾದೇಶ ನೀಡುವಂತೆ ಸಚಿವರು ಸೂಚನೆಯನ್ನು ನೀಡಿದರು.
ಮಳೆನೀರಿನ ಹಾವಳಿ ಮತ್ತು ಅದಕ್ಕೆ ಕಂಡುಕೊಳ್ಳಬೇಕಾದ ಪರಿಹಾರ ಕುರಿತು ಯುಟಿಲಿಟಿ ಕಟ್ಟಡದಲ್ಲಿ ಇರುವ ಬಿಬಿಎಂಪಿ ಪೂರ್ವ ವಲಯದ ಕಚೇರಿಯಲ್ಲಿ ಆ ವಲಯದ ಶಾಸಕರು ಮತ್ತು ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ನಗರದ ಪೂರ್ವ ವಲಯದಲ್ಲಿ 15 ಜಾಗಗಳನ್ನು ರೆಡ್ ಜೋನ್ ಪ್ರದೇಶಗಳೆಂದು ಗುರುತಿಸಲಾಗಿದೆ. ಇಲ್ಲೆಲ್ಲ, ನಿರಂತರವಾಗಿ ಹೂಳೆತ್ತಲು, ಅಗತ್ಯವಾದ ಯಂತ್ರಗಳನ್ನು ಸಜ್ಜಾಗಿ ಇಟ್ಟುಕೊಂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
630 ಮಂದಿಗೆ ತಲಾ 25 ಸಾವಿರ ರೂ. ಪರಿಹಾರ:
ಈ ವಲಯದಲ್ಲಿ 56 ಕಡೆಗಳಲ್ಲಿ ಮಳೆನೀರಿನ ಹರಿವಿಗೆ ಅಡ್ಡಿ ಇದೆ. ಇದಕ್ಕೆ ಅಕ್ರಮ ನಿರ್ಮಾಣಗಳು ಮುಖ್ಯ ಕಾರಣವಾಗಿವೆ. ಇವನ್ನು ಗುರುತಿಸಿ, ಸೂಕ್ತ ಕ್ರಮ ಹಾಗೂ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು ಮುಲಾಜಿಲ್ಲದೆ ಈ ಕೆಲಸ ಮಾಡಬೇಕು ಎಂದು ಅವರು ವಿವರಿಸಿದರು.ಇತ್ತೀಚೆಗೆ ಮಳೆ ನೀರು ಮನೆಗೆ ನುಗ್ಗಿ ಪೂರ್ವ ವಲಯದಲ್ಲಿ ಹಾನಿ ಅನುಭವಿಸಿದ ಸಂತ್ರಸ್ತರ ಪೈಕಿ ಈಗಾಗಲೇ 630 ಮಂದಿಗೆ ತಲಾ 25 ಸಾವಿರ ರೂ. ಪರಿಹಾರ ತಲುಪಿಸಲಾಗಿದೆ. ಉಳಿದವರಿಗೆ ಸಹ ಸದ್ಯದಲ್ಲಿಯೇ ಪರಿಹಾರಧನ ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಗೆ ತಡವಾಗಿ ಬಂದ ಅಧಿಕಾರಿಗೆ ತರಾಟೆ:
ಮಹತ್ವದ ಸಭೆಯನ್ನು ನಡೆಸುವ ಸಂದರ್ಭದಲ್ಲಿ ಸಭೆಗೆ ತಡವಾಗಿ ಬಂದ ಬಿಬಿಎಂಪಿ ಮಳೆ ಚರಂಡಿ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಚಿವರು ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದರು.
Recommended Video
ಸಚಿವ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಬೈರತಿ ಸುರೇಶ್, ಬಿಬಿಎಂಪಿ ಪೂರ್ವ ವಲಯ ಆಯುಕ್ತ ರವೀಂದ್ರ, ಜಂಟಿ ಆಯುಕ್ತೆ ಶಿಲ್ಪಾ, ಮುಖ್ಯ ಎಂಜಿನಿಯರುಗಳಾದ ಮೋಹನಕೃಷ್ಣ ಮತ್ತು ಪ್ರಹ್ಲಾದ್ ಮತ್ತಿತರರು ಇದ್ದರು.