ಬೆಂಗಳೂರು: ಗಣೇಶನನ್ನು ಏರಿಯಾದಲ್ಲಿ ಕೂರಿಸಲು ಏಕಗವಾಕ್ಷಿಯಲ್ಲಿ ಅನುಮತಿ ಪಡೆಯೋದು ಹೇಗೆ?
ಬೆಂಗಳೂರು, ಆಗಸ್ಟ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮ ಆಯೋಜಿಸುವ ಸಂಬಂಧ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಆಗ್ನಿಶಾಮಕ ಇಲಾಖೆಗಳನ್ನು ಒಳಗೊಂಡಂತೆ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರಗಳ ಮೂಲಕ ಪೂರ್ವಾನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರವಾಗಿ ಅನುಮತಿ ನೀಡುವ ಸಲುವಾಗಿ ಏಕಗವಾಕ್ಷಿ ಪದ್ದತಿ ಜಾರಿಗೊಳಿಸಲಾಗಿದೆ. ಸದರಿ ಏಕಗವಾಕ್ಷಿ ಕೇಂದ್ರಗಳಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಒದಗಿಸಿ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.
Recommended Video
ಗಣೇಶ ಹಬ್ಬ ಸನಿಹ: ಆಚರಣೆ ಬಗ್ಗೆ ಬಿಬಿಎಂಪಿ ಸಷ್ಟತೆ ನೀಡಲಿ, ಉತ್ಸವ ಸಮಿತಿಗಳ ನಡೆ ಏನು?
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳವನ್ನು ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತಂತೆ ಯಾವುದೇ ರೀತಿಯ ನ್ಯೂನ್ಯತೆಗಳಾಗದಂತೆ ಮೇಲುಸ್ತುವಾರಿ ವಹಿಸಲು ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏಕ ಗವಾಕ್ಷಿ ಯೋಜನೆಯನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಲು ಕೋರಿಕೊಳ್ಳಲಾಗಿದೆ.
ವಲಯವಾರು ನೋಡಲ್ ಅಧಿಕಾರಿಗಳ ನೇಮಕ
ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಗಣೇಶನನ್ನು ಕೂರಿಸಲು ಹಲವು ಇಲಾಖೆಗಳಿಂದ ಅನುಮತಿಯನ್ನು ಪಡೆಯಬೇಕಾಗಿರುತ್ತದೆ. ಈ ಅನುಮತಿಯನ್ನು ಪಡೆಯುವಷ್ಟರಲ್ಲಿ ಹೈರಾಣಾಗಬೇಕಾಗುತ್ತದೆ. ಇದಕ್ಕಾಗಿಯೇ ಬಿಬಿಎಂಪಿ ಮಾಸ್ಟರ್ ಪ್ಲಾನ್ ಮಾಡಿದ್ದು ಏಕ ಗವಾಕ್ಷಿ ಯೋಜನೆಯನ್ನು ಜಾರಿ ಮಾಡಿದೆ. ಬಿಬಿಎಂಪಿ, ಪೊಲೀಸ್ ಇಲಾಖೆ, ಬೆಸ್ಕಾಂ , ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡು ಏಕಗವಾಕ್ಷಿ ಯೋಜನೆಯನ್ನು ಮಾಡಲಾಗಿದೆ. ವಲಯವಾರು ಸೂಚಿಸಿರುವ ಸ್ಥಲಗಳಿಗೆ ಹೋಗಿ ಅರ್ಜಿಯನ್ನು ಹಾಕಿ ಅನುಮತಿಯನ್ನು ಪಡೆಯಬಹುದಾಗಿದೆ.
ಬಿಬಿಎಂಪಿ ಮಾರ್ಗಸೂಚಿ: ಬೆಂಗಳೂರಿನಲ್ಲಿ ಹೇಗಿರಬೇಕು ಗಣೇಶ ಚತುರ್ಥಿ ಹಬ್ಬ?
ರಸಾಯನಿಕಯುಕ್ತ ಗಣೇಶ ಪ್ರತಿಷ್ಠಾಪನೆ ನಿಷಿದ್ದ
ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪ್ಲಾಸ್ಟಿಕ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ಮೂರ್ತಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಂಥಾ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಮಾಡುವ ಸ್ಥಳಕ್ಕೆ ಖುದ್ದು ಬಿಬಿಎಂಪಿ, ಪೊಲೀಸರು, ಬೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ಭೇಟಿ ಕೊಟ್ಟು ನೋಟಿಸ್ ನೀಡಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬಹುದು ಎಂದು ಬಿಬಿಎಂಪಿ ಸೂಚಿಸಿದೆ.
ಕಲ್ಯಾಣಿಗಳಲ್ಲಿ ಅವಕಾಶ ಹೇಗಿರಲಿದೆ?
ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಲು ಅನುಮತಿಯನ್ನು ನೀಡಲಾಗುತ್ತದೆ. ಸಣ್ಣ ಗಣೇಶ ಮೂರ್ತಿಗಳನ್ನು ಕೂರಿಸಿರುವವರು ಮನೆಯಲ್ಲಿರು ಟಬ್, ಡ್ರಮ್ಗಳಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಕೋರಲಾಗಿದೆ. ಇನ್ನು ದೊಡ್ಡ ಗಣೇಶ ಮೂರ್ತಿ ವಿಸರ್ಜನೆಯನ್ನು ಮಾಡಲು ಕೆರೆಗಳ ಸಂರಕ್ಷಣೆ ಹಿತದೃಷ್ಠಿಯಿಂದ ಕಲ್ಯಾಣಿಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಬಿಬಿಎಂಪಿ ಸೂಚಿಸಿದೆ.
ಏಕಗವಾಕ್ಷಿಗೆ ಹೆಚ್ಚು ಅರ್ಜಿ ಬರುವ ಸಾಧ್ಯತೆ
ಕೋವಿಡ್ನಿಂದಾಗಿ ಕಳೆದ ಎರಡು ಮೂರು ವರ್ಷಗಳಿಂದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಅನುಮತಿಯನ್ನು ನಿರಾಕರಿಸಲಾಗಿತ್ತು. ಕಳೆದ ವರ್ಷ ಕೋವಿಡ್ನಿಂದ ವಾರ್ಡ್ಗೆ ಒಂದೇ ಗಣೇಶ ಪ್ರತಿಷ್ಠಾಪನೆಗೆ ಅನುಮತಿಯನ್ನು ನೀಡಲಾಗಿತ್ತು. ಆದರೆ ಈ ವರ್ಷ ಇಂಥಾ ಯಾವುದೇ ನಿಯಮವಿಲ್ಲದ ಕಾರಣ ಅದ್ದೂರಿ ಗಣೇಶೋತ್ಸವ ಆಚರಣೆಗೆ ಜನರು ಸಿದ್ದರಾಗಿದ್ದಾರೆ. ಇದರಿಂದಾಗಿಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಆಗ್ನಿಶಾಮಕ ಇಲಾಖೆಗಳನ್ನು ಒಳಗೊಂಡಂತೆ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರಗಳ ಮೂಲಕ ಪೂರ್ವಾನುಮತಿ ಪಡೆಯಲು ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆಗಳಿವೆ.