ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಆಚರಿಸುವ ಮುನ್ನ ಈ ಸುದ್ದಿ ಓದಿ
ಬೆಂಗಳೂರು, ಆಗಸ್ಟ್.21: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಬೆಂಗಳೂರಿನ ಮಂದಿ ಕಟ್ಟುನಿಟ್ಟಿನ ನಿಯಮಗಳ ನಡುವೆ ಈ ವರ್ಷ ಗೌರಿ-ಗಣೇಶ ಹಬ್ಬವನ್ನು ಆಚರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
Recommended Video
ಬೆಂಗಳೂರಿನ ಒಂದು ವಾರ್ಡ್ ನಲ್ಲಿ ಒಂದು ಗಣೇಶ ಮೂರ್ತಿಯನ್ನು ಮೂರು ದಿನಗಳ ಅವಧಿವರೆಗೂ ಮಾತ್ರ ಇರಿಸಲು ಅವಕಾಶ ನೀಡಲಾಗಿದೆ. ಶುಕ್ರವಾರ ಗೌರಿ ಹಬ್ಬ ಮತ್ತು ಮರುದಿನ ಅಂದರೆ ಶನಿವಾರ ಗಣೇಶ ಚತುರ್ಥಿಯನ್ನು ಆಚರಿಸಲು ರಾಜ್ಯ ಸರ್ಕಾರವು ಅನುಮತಿ ನೀಡಿದೆ.
ಕರ್ನಾಟಕದಲ್ಲಿ ಮೊಹರಂ ಆಚರಣೆಗೆ ಸರ್ಕಾರದ ಮಾರ್ಗಸೂಚಿ
ರಾಜ್ಯ ಸರ್ಕಾರವು ಈಗಾಗಲೇ ಗಣೇಶ ಚತುರ್ಥಿ ಆಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಗಸ್ಟ್.14ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅಧಿಸೂಚನೆ ಹೊರಡಿಸಿದ್ದರು. ಈ ಪೈಕಿ ಕೆಲವು ಅಂಶಗಳು ಬೆಂಗಳೂರಿನ 198 ವಾರ್ಡ್ ಗಳಲ್ಲೂ ಕಡ್ಡಾಯವಾಗಿ ಪಾಲನೆ ಆಗಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಗಣೇಶ ಚತುರ್ಥಿ ಆಚರಣೆಗೆ ಬಿಬಿಎಂಪಿ ಮಾರ್ಗಸೂಚಿ:
- ಬೆಂಗಳೂರಿನ 198 ವಾರ್ಡ್ ಗಳ ಪೈಕಿ ಒಂದು ವಾರ್ಡ್ ನಲ್ಲಿ ಒಂದು ಗಣೇಶ ಮೂರ್ತಿ ಕೂರಿಸುವುದಕ್ಕೆ ಮಾತ್ರ ಅನುಮತಿ.
- ಗಣೇಶ ಸಮಿತಿಗಳು, ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಆಯಾ ವಲಯದ ಜಂಟಿ ಆಯುಕ್ತರು ಮತ್ತು ಡಿಸಿಪಿ ಅನುಮತಿ ಪಡೆಯಬೇಕು.
- ಯಾವ ಸಮಿತಿಗಳು ಗಣೇಶ ಮೂರ್ತಿ ಕೂರಿಸಲು ಅನುಮತಿ ನೀಡಬೇಕು ಎನ್ನುವುದು ಅಧಿಕಾರಿಗಳಿಗೆ ಬಿಟ್ಟಿರುತ್ತದೆ.
- ಗಣೇಶ ಮೂರ್ತಿ ಕೂರಿಸಿದ ಮೂರು ದಿನಗಳ ಅವಧಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ, ಏಕಕಾಲಕ್ಕೆ ಗಣೇಶ ವಿಸರ್ಜನೆ ಮಾಡಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ನಾಲ್ಕು ಅಡಿ, ಹಾಗೂ ಮನೆಗಳಲ್ಲಿ ಎರಡು ಅಡಿ ಎತ್ತರ ಮೀರದಂತೆ ಪ್ರತಿಷ್ಠಾಪಿಸಬೇಕು.
- ಏಕಕಾಲಕ್ಕೆ 20ಕ್ಕಿಂತ ಹೆಚ್ಚು ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು ಕಡ್ಡಾಯವಾಗಿದೆ.
- ಮನೆಗಳಲ್ಲಿ ಗಣೇಶ ಮೂರ್ತಿ ಇರಿಸುವವರು ಸ್ವಂತ ಆವರಣದಲ್ಲಿ ಮೂರ್ತಿ ವಿಸರ್ಜನೆ ಮಾಡುವುದು.
- ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಯಿಂದ ಎಲ್ಲಾ ಅನುಮತಿಗಳನ್ನು ನೀಡಲಾಗುವುದು.
- ಅಧಿಕಾರಿಗಳು / ಸಂಸ್ಥೆಗಳು / ಸಂಘಗಳು ಅಧಿಕಾರಿಗಳು ಸೂಚಿಸುವ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಪಾಲಿಸಬೇಕು.
- ಜನಸಂದಣಿ ಸೇರುವುದನ್ನು ತಪ್ಪಿಸಲು ಈ ಬಾರಿ ಸಾಂಸ್ಕೃತಿಕ ಅಥವಾ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.
- ಗಣೇಶ ಪ್ರತಿಷ್ಠಾಪಿಸುವ ದಿನವೇ ಪ್ರತಿ ವಾರ್ಡ್ ನಲ್ಲಿ ವಿಸರ್ಜನೆಗೆ ಗೊತ್ತುಪಡಿಸಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
- ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಮಿಸಿದ ಮತ್ತು ಗೊತ್ತುಪಡಿಸಿದ ಕೃತಕ ಟ್ಯಾಂಕ್ಗಳಲ್ಲಿ ಅಥವಾ ಮೊಬೈಲ್ ಟ್ಯಾಂಕ್ಗಳಲ್ಲಿ ಮಾತ್ರ ವಿಗ್ರಹಗಳನ್ನು ವಿಸರ್ಜಿಸಬೇಕು.
- ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.
- ಸ್ಥಳಗಳಲ್ಲಿ ಅಧಿಕಾರಿಗಳು ನೀಡುವ ಎಲ್ಲಾ ಸೂಚನೆಗಳನ್ನು ನಾಗರಿಕರು ಅನುಸರಿಸಬೇಕು.