ಬೆಂಗಳೂರಿಗಾಗಿ ಥೀಮ್ ಸಾಂಗ್ ಹಾಡಿದ ಗಾಯಕ ಲಕ್ಕಿ ಅಲಿ...
ಬೆಂಗಳೂರು, ಜನವರಿ 24: ಸ್ವಚ್ಛ ಸರ್ವೇಕ್ಷಣೆ 2020 ರ ಅಭಿಯಾನದಲ್ಲಿ ಈ ಸಾರಿ ಅತ್ಯುತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಬೇಕು ಎಂದು ಹೊರಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿನೂತನ ಪ್ರಯೋಗಗಳನ್ನು ಮಾಡುತ್ತಿದೆ.
ಸ್ವಚ್ಛ ಸರ್ವೇಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸಲು ಬಿಬಿಎಂಪಿ, ಖ್ಯಾತ ಗಾಯಕ ಲಕ್ಕಿ ಅಲಿ ಅವರ ಮೊರೆ ಹೋಗಿದೆ. ಲಕ್ಕಿ ಅಲಿ ಅವರು ಹಾಡಿರುವ 3.17 ನಿಮಿಷದ 'ಜೊತೆಯಾಗೇ ಇರೋಣ' ಎಂಬ ಸ್ವಚ್ಛ ಸರ್ವೇಕ್ಷಣೆಯ ಧ್ಯೇಯ ಗೀತೆಯನ್ನು (ಥೀಮ್ ಸಾಂಗ್) ಹೊರ ತಂದಿದೆ. ಲಕ್ಕಿ ಅಲಿ ಜೊತೆಗೆ ಖ್ಯಾತ ಗಾಯಕ ವಾಸು ದೀಕ್ಷಿತ್ ಹಾಗೂ ಗಾಯಕಿ ಅರ್ಚನಾ ಉಡುಪ ಅವರು ದನಿಗೂಡಿಸಿದ್ದಾರೆ.
ಎಚ್ಚರಿಕೆ! ಎಲ್ಲೆಂದರಲ್ಲಿ ಕಸ ಹಾಕಿದರೆ ಬರಲಿದ್ದಾರೆ ಚಾರ್ಲಿಗಳು...
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮೇಯರ್ ಎಂ ಗೌತಮ್ ಕುಮಾರ್ ಅವರು, ಧ್ಯೇಯ ಗೀತೆಯನ್ನು ಬಿಡುಗಡೆ ಮಾಡಿ, 'ಈ ಸಾರಿ ಬೆಂಗಳೂರು ಖಂಡಿತವಾಗಿಯೂ ಸ್ವಚ್ಛ ಸರ್ವೇಕ್ಷಣೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಸ್ವಚ್ಛತೆಯಲ್ಲಿ ಹಿಂದೆ ಬಿದ್ದೆದೆ
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮೇಯರ್ ಎಂ ಗೌತಮ್ ಕುಮಾರ್ ಅವರು, "ಸ್ವಚ್ಛ ಸರ್ವೇಕ್ಷಣೆ 2020 ರಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಲು ಶ್ರಮಿಸುತ್ತಿದ್ದೇವೆ. ಬೆಂಗಳೂರನ್ನು ಸಂಪೂರ್ಣ ಕಸ ಮುಕ್ತ ನಗರವನ್ನಾಗಿ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ. ಇಂದೋರ್ ನಗರಕ್ಕೆ ಹೋಗಿ ಬಂದ ನಂತರ ನಮ್ಮ ಬೆಂಗಳೂರು ಸ್ವಚ್ಛತೆಯಲ್ಲಿ ಹಿಂದೆ ಬಿದ್ದೆದೆ ಎಂಬುದು ಗೊತ್ತಾಗಿದೆ'' ಎಂದು ಹೇಳಿದರು.
ಸ್ವಚ್ಛ ಸರ್ವೇಕ್ಷಣೆ ಕೇವಲ ಬಿಬಿಎಂಪಿ ಕೆಲಸ ಅಲ್ಲ
''ಬೆಂಗಳೂರು ಜನಸಂಖ್ಯೆ ಹೆಚ್ಚಿದೆ. ವಿಸ್ತೀರ್ಣ ಕಡಿಮೆ ಇದೆ. ಹೀಗಾಗಿ ನಮಗೆ ಕಸ ವಿಲೇವಾರಿ ಮಾಡುವುದು ಸವಾಲಿನ ಕೆಲಸ. ಸ್ವಚ್ಛ ಸರ್ವೇಕ್ಷಣೆ ಕೇವಲ ಬಿಬಿಎಂಪಿ ಕೆಲಸ ಅಲ್ಲ. ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಾವು ಕೇವಲ ಸ್ವಚ್ಛ ಸರ್ವೇಕ್ಷಣೆಗಾಗಿ ಅಂಕಗಳನ್ನು ಪಡೆಯಲು ಇಷ್ಟೆಲ್ಲಾ ಮಾಡುವುದಿಲ್ಲ. ಸ್ವಚ್ಛತೆಯ ಅಭಿಯಾನವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ'' ಎಂದು ಮೇಯರ್ ಹೇಳಿದರು.
'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...
ಬಿಬಿಎಂಪಿ ಆಯುಕ್ತರು ಹೇಳಿದ್ದೇನು?
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ''ಸ್ವಚ್ಛ ಸರ್ವೇಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಭಾರತ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ನಲ್ಲಿಯೂ ಬೆಂಗಳೂರು ಸ್ವಚ್ಛ ಸರ್ವೇಕ್ಷಣೆ ಅರಿವು ಮೂಡಿಸಿದ್ದೇವೆ. ಗೋಡೆಗಳಿಗೆ ಕನ್ನಡಿಗಳನ್ನು ಅಳವಡಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಊರು ಸ್ವಚ್ಛ ಬೆಂಗಳೂರು ಟ್ಯಾಗ್ ಲೈನ್ ಆರಂಭಿಸಿದ್ದೇವೆ. ಕಸ ಚೆಲ್ಲುವರ ಮೇಲೆ ಚಾರ್ಲಿಗಳು ಕಣ್ಣಿಟ್ಟು ದಂಡ ಹಾಕುವಂತೆ ಮಾಡಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅಭಿಯಾನ ಹಮ್ಮಿಕೊಂಡಿದ್ದೇವೆ'' ಎಂದು ಮಾಹಿತಿ ನೀಡಿದರು.
ಗಾಯಕ ಲಕ್ಕಿ ಅಲಿ ಏನಂದ್ರು?
ಗಾಯಕ ಲಕ್ಕಿ ಅಲಿ ಮಾತನಾಡಿ, ''ಐವತ್ತು ವರ್ಷದಿಂದ ಬೆಂಗಳೂರಿನೊಂದಿಗೆ ನಂಟು ಹೊಂದಿದ್ದೇನೆ. ಬೆಂಗಳೂರು ದೇಶದಲ್ಲೇ ಒಂದು ಸುಂದರ ನಗರ. ಆದರೆ, ಜನಸಂಖ್ಯೆ ಬೆಳೆದಂತೆ ಕಸದ ಸಮಸ್ಯೆ ಬಿಗಡಾಯಿಸುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ಜನರಿಗೆ ಪ್ರೇರಣೆ ಆಗುವಂತ ಗೀತೆ ಹಾಡಿ ಎಂದು ಬಿಬಿಎಂಪಿ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಕೊಂಡಿದ್ದೇನೆ. ಸ್ವಚ್ಚತಾ ಕಾರ್ಯಗಳನ್ನು ಮಾಡುವುದು ಕೇವಲ ಬಿಬಿಎಂಪಿ ಕೆಲಸ ಅಲ್ಲ, ಸಾರ್ವಜನಿಕರು ಸಹ ಇದರಲ್ಲಿ ಭಾಗಿಯಾಗಿ ತಮ್ಮ ನಗರವನ್ನು ಅಂದವಾಗಿ ಇಟ್ಟುಕೊಳ್ಳಲು ಶ್ರಮಿಸಬೇಕು'' ಎಂದು ಸಲಹೆ ನೀಡಿದರು. ಇದೇ ವೇಳೆ ಮೇಯರ್ ಹಾಗೂ ಆಯುಕ್ತರು ಗಾಯಕ ಲಕ್ಕಿ ಅಲಿ ಅವರಿಗೆ ಸನ್ಮಾನಿಸಿದರು
ಬೆಂಗಳೂರು ಚಿತ್ರಸಂತೆಯಲ್ಲಿ ಮಾರಾಟವಾದ ಕಲಾಕೃತಿಗಳು ಎಷ್ಟು ಗೊತ್ತಾ?
ಏನಿದು 'ಸ್ವಚ್ಛ ಸರ್ವೇಕ್ಷಣೆ'?
'ಸ್ವಚ್ಛ ಭಾರತ್' ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಇದಕ್ಕೆ ಪೂರಕವಾಗಿ 2016 ರಲ್ಲಿ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಯೋಜನಾ ಸಚಿವಾಲಯ 'ಸ್ವಚ್ಛ ಸರ್ವೇಕ್ಷಣೆ' ಆರಂಭಿಸಿತು. ಸಚಿವಾಲಯ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಯಾವ ನಗರ ಅತಿ ಹೆಚ್ಚು ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿದೆ ಎಂಬುದನ್ನು ಸರ್ವೇಯಲ್ಲಿ ಕಂಡುಕೊಂಡು ಅಂಕಗಳನ್ನು ನೀಡುತ್ತದೆ. ಅತಿ ಹೆಚ್ಚು ಅಂಕಗಳನ್ನು ಪಡೆದ ಟಾಪ್ 20 ನಗರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತದೆ.
2019 ರ ಸ್ವಚ್ಛ ಸರ್ವೇಕ್ಷಣೆ ಬಗ್ಗೆ
2019 ರಲ್ಲೂ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಆಗ ಇದರಲ್ಲಿ 400 ಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿದ್ದವು. ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 20 ನಗರಗಳನ್ನು ದೇಶದ ಸ್ವಚ್ಛ ನಗರಗಳು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಮಧ್ಯಪ್ರದೇಶದ ಇಂದೋರ್ 2019 ರ ದೇಶದ ನಂಬರ್ 1 ಸ್ವಚ್ಛ ನಗರವಾಗಿತ್ತು. ಅಂಬಿಕಾಪುರ ಎರಡನೇ ಸ್ಥಾನ ಪಡೆದಿದ್ದರೇ, ಕರ್ನಾಟಕದ ಮೈಸೂರು ಮೂರನೇ ಸ್ಥಾನ ಪಡೆದಿತ್ತು. ಬೆಂಗಳೂರು 194 ನೇ ಸ್ಥಾನ ಪಡೆದು ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ ಎಂಬುದು ಬಹಿರಂಗವಾಗಿತ್ತು.