ಲಾಕ್ ಡೌನ್ ; ವಲಸೆ ಕಾರ್ಮಿಕರ ನೆರವಿಗೆ ನಿಂತ ಬಿಬಿಎಂಪಿ
ಬೆಂಗಳೂರು, ಮಾರ್ಚ್ 30 : ಕೊರೊನಾ ಹರಡದಂತೆ ತಡೆಯಲು ಸಂಪೂರ್ಣ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿರುವುದು ವಲಸೆ ಕಾರ್ಮಿಕರು. ಆಹಾರ ಮತ್ತು ವಾಸ್ತವ್ಯಕ್ಕೆ ಜಾಗವಿಲ್ಲದೇ ಅವರು ಪರದಾಡುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಸೆ ಕಾರ್ಮಿಕರ ನೆರವಿಗೆ ನಿಂತಿದೆ. ಟ್ರಾಕ್ಟರ್ಗಳ ಮೂಲಕ ತಮ್ಮ ಊರುಗಳಿಗೆ ಹೊರಟಿದ್ದ ಎಲ್ಲಾ ಕಾರ್ಮಿಕರನ್ನು ತಡೆದು ಅವರಿಗೆ ಆಹಾರ ಮತ್ತು ವಸತಿಯ ವ್ಯವಸ್ಥೆ ಮಾಡಿಕೊಟ್ಟಿದೆ.
ಬೆಂಗಳೂರಿನ ಗಾಂಧಿನಗರದ ಕಾನಿಷ್ಕ ಹೋಟೆಲ್ ಬಳಿ ಇರುವ ಪಾಲಿಕೆ ಪ್ರೌಢಶಾಲೆಯನ್ನು ತಾತ್ಕಾಲಿಕವಾಗಿ ನಿರಾಶ್ರಿತ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಅಲ್ಲಿ ವಸತಿ ವ್ಯವಸ್ಥೆಯನ್ನು ಮಾಡಿದ್ದು, ಇಂದಿರಾ ಕ್ಯಾಂಟೀನ್ಗಳಿಂದ ಆಹಾರದ ಪೊಟ್ಟಣಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಸೋಮವಾರ ದಾಸರಹಳ್ಳಿ ವಲಯದ ಬಾಗಲಕುಂಟೆ ವಾರ್ಡ್-14ರ ವ್ಯಾಪ್ತಿಯಲ್ಲಿ 50 ವಲಸೆ ಕಾರ್ಮಿಕರು 3 ಟ್ರ್ಯಾಕ್ಟರ್ಗಳ ಮೂಲಕ ತಮ್ಮ ಊರುಗಳಿಗೆ ಹೊರಟಿದ್ದರು. ವಿಶೇಷ ಆಯುಕ್ತರಾದ (ಹಣಕಾಸು) ಲೋಕೇಶ್, ಜಂಟಿ ಆಯುಕ್ತರಾದ ನರಸಿಂಹಮೂರ್ತಿ ಅವರನ್ನು ತಡೆದರು.
ಬಳಿಕ ಅವರಿಗೆ ಕಾರ್ಮಿಕ ಇಲಾಖೆ ಸಮುದಾಯ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಿ, ಆಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಊರುಗಳಿಗೆ ತೆರಳಲು ಬಸ್, ರೈಲು ಇಲ್ಲದ ಕಾರಣ ಟ್ರಾಕ್ಟರ್ ಮೂಲಕವೇ ಕಾರ್ಮಿಕರು ಹೊರಟಿದ್ದರು.
ಕೊರೊನಾ ಸೋಂಕು ಹರಡದಂತೆ ತಡೆಯಲು ಬಿಬಿಎಂಪಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಬಿಬಿಎಂಪಿ ಇದಕ್ಕಾಗಿ 'ವಾರ್ ರೂಂ' ಸ್ಥಾಪನೆ ಮಾಡಿದೆ. ಸಂಸದ ಪಿ.ಸಿ.ಮೋಹನ್ ಹಾಗೂ ಕಂದಾಯ ಸಚಿವ ಆರ್.ಅಶೋಕ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.