ಜುಲೈ 1ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ ಪೌರ ಕಾರ್ಮಿಕರು
ಬೆಂಗಳೂರು, ಜೂನ್ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಸಂಘ ಮತ್ತು ಕ್ರಿಯಾ ಸಮಿತಿಯು ಜುಲೈ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯು ಸರ್ಕಾರವೇ ಅನುಮೋದನೆ ನೀಡಿರುವ ಗುಲಾಮಗಿರಿಯಂತೆ ತೋರುತ್ತಿದೆ. ಏಕೆಂದರೆ ನಮಗೆ ಯಾವುದೇ ಮೂಲಭೂತ ಆರೋಗ್ಯ, ಕುಡಿಯುವ ನೀರು, ಹೆರಿಗೆ ರಜೆ ಮತ್ತು ವಿಶ್ರಾಂತಿ ಕೊಠಡಿ ಸೇರಿದಂತೆ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ಹಲವು ಕೋರ್ಟ್ಗಳಲ್ಲಿ ಅರ್ಜಿ ಸಲ್ಲಿಕೆ ತಡೆಗೆ ಹೈಕೋರ್ಟ್ ಮಾರ್ಗಸೂಚಿ
ಸರ್ಕಾರಕ್ಕೆ ಈ ಬಗ್ಗೆ ಪದೇ ಪದೆ ಮನವಿ ಸಲ್ಲಿಸಿದರೂ ಯಾವೊಬ್ಬ ಶಾಸಕರಾಗಲಿ, ಸಚಿವರಾಗಲಿ ಅಥವಾ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಲ್ಲಾ ಗುತ್ತಿಗೆದಾರರು ಮತ್ತು ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ಕಾರ್ಯ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಪೌರಕಾರ್ಮಿಕರು ಪ್ರಸ್ತುತ ಗುತ್ತಿಗೆ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವ್ಯವಸ್ಥೆಯ ಬಗ್ಗೆ ಉಲ್ಲೇಖಿಸಿರುವ ಪ್ರತಿಭಟನಾಕಾರರು ತಮ್ಮ ಉದ್ಯೋಗವನ್ನು ಖಾಯಂಗೊಳಿಸಬೇಕು, ಪೌರ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಮೂಲಭೂತ ಸುರಕ್ಷತಾ ಕ್ರಮಗಳನ್ನು ಒದಗಿಸುವುದರ ಜೊತೆಗೆ ಘನತೆಯನ್ನು ನೀಡುವಂತೆ ಒತ್ತಾಯಿಸಲಾಗುತ್ತಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಹೊಂದಿರುವ ದೃಷ್ಟಿಕೋನ
ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಈ ಹಿಂದೆಯೂ ಸಹ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಸುರಕ್ಷತಾ ಕವಚ ಹಾಗೂ ಗುತ್ತಿಗೆ ಪದ್ಧತಿ ರದ್ದುಪಡಿಸುವಂತೆ ಈ ಹಿಂದೆ ನಡೆಸಿರುವ ಪ್ರತಿಭಟನೆಗಳಿಗೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಆ ಪ್ರತಿಭಟನೆಗಳಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದು ಅಧಿಕಾರಿಗಳ ಜಾತಿ ದೃಷ್ಟಿಕೋನದ ದ್ಯೋತಕವಾಗಿದೆ ಎಂದು ಸಂಘದ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ಕೊರೊನಾವೈರಸ್ ಕಾಲದಲ್ಲಿ ಕಾರ್ಮಿಕರಿಗೆ ಅವಮಾನ
ಇಡೀ ರಾಜ್ಯವು ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಬಳಲುತ್ತಿರುವ ಸಂದರ್ಭದಲ್ಲಿಯೂ ಪೌರ ಕಾರ್ಮಿಕರು ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದರು. ಅಪಾಯಕಾರಿ ವೈರಸ್ ಹರಡುವ ಭೀತಿ ನಡುವೆಯೂ ನಗರದ ನೈರ್ಮಲ್ಯಕ್ಕಾಗಿ ಶ್ರಮಿಸಿದರು. ಆದರೆ ಕೋವಿಡ್-19 ಸೋಂಕು ಕಾರ್ಮಿಕರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತು. ಕಾರ್ಮಿಕರು ರೋಗದ ಚಿಕಿತ್ಸೆಗೂ ಹಣವಿಲ್ಲದೇ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಮಧ್ಯೆ ಸಾರ್ವಜನಿಕರು ಮತ್ತು ಬಿಬಿಎಂಪಿ ಅಧಿಕಾರಿಗಳು ಈ ಪೌರ ಕಾರ್ಮಿಕರನ್ನು ಅನುಮಾನ ಹಾಗೂ ಕೊಳಕು ಎನ್ನುವ ಮನಸ್ಥಿತಿಯಲ್ಲಿಯೇ ನೋಡುತ್ತಿದ್ದರು.
ಪೌರ ಕಾರ್ಮಿಕರ ವೇತನ ನೂರರ ಲೆಕ್ಕದಲ್ಲಿ ಹೆಚ್ಚಳ
"ರಾಜ್ಯ ಸರ್ಕಾರವು ಪ್ರಸ್ತುತ ಪೌರ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಬಗ್ಗೆ ಭರವಸೆ ನೀಡಿದೆ. ಆದರೆ ಕಳೆದ ಎರಡು ವರ್ಷಗಳ ಸಂದಿಗ್ಧ ಪರಿಸ್ಥಿತಿಯಲ್ಲೂ ಕಾರ್ಮಿಕರ ವೇತನವನ್ನು ಚಿಲ್ಲರೇ ಲೆಕ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ನಮಗೆ ನೂರು ಇನ್ನೂರು ರೂಪಾಯಿ ಲೆಕ್ಕದಲ್ಲಿ ವೇತನವನ್ನು ಹೆಚ್ಚಳ ಮಾಡಿದ್ದಾರೆ," ಎಂದು ಕಾರ್ಮಿಕರೊಬ್ಬರು ತಿಳಿಸಿದ್ದಾರೆ. ನೈರ್ಮಲ್ಯ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಖಾತ್ರಿಪಡಿಸಬೇಕು ಮತ್ತು ಕಾರ್ಮಿಕರಿಗೆ ಮೂಲಭೂತ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ವಸತಿ ನೀಡಬೇಕು ಎಂದು ಸಂಘವು ಒತ್ತಾಯಿಸಿದೆ.
Recommended Video