ಬಿಬಿಎಂಪಿಯಲ್ಲಿ 'ಹಳೇ ಕಲ್ಲು– ಹೊಸ ಬಿಲ್ಲು' ಮಾದರಿಯ ಆಡಳಿತವಿದೆ: ಎಎಪಿ
ಬೆಂಗಳೂರು ಆಗಸ್ಟ್ 13: ಬೆಂಗಳೂರಿನ ರಸ್ತೆಗುಂಡಿಗೆ ಬಲಿಯಾಗುತ್ತಿರವವರ ಸಂಖ್ಯೆ ಏರಿಕೆ ಆಗುತ್ತಿದ್ದರೂ ಬಿಬಿಎಂಪಿ ಮತ್ತು ಸರ್ಕಾರ ಮಾತ್ರ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಅವರು ಕಿಡಿಕಾರಿದ್ದಾರೆ.
ಇತ್ತೀಚೆಗೆ ನಗರದಲ್ಲಿ ತಂದೆ ಜೊತೆ ಪುತ್ರನೋರ್ವ ದ್ವಿಚಕ್ರವಾಹದದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಗುಂಡಿಯಿಂದಾಗಿ ಅವಘಡ ಸಂಭವಿಸಿತ್ತು. ಇದರಿಂದ ಪುತ್ರ 10 ವರ್ಷದ ಬಾಲಕ ಜೀವನ್ ಎಂಬಾತ ಮೃತಪಟ್ಟಿದ್ದರು. ಈ ಕುರಿತು ಮೋಹನ್ ದಾಸರಿ ಪ್ರಕ್ರಿಯಿಸಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ (ಜೆಸಿಬಿ ಪಕ್ಷಗಳು) ಪಕ್ಷಗಳ ವಿರುದ್ಧ ಅವರು ಗುಡುಗಿದರು.
ನಗರದ ರಸ್ತೆಗುಂಡಿಗಳಿಂದ ಅವಘಡಗಳು ಸಂಭವಿಸುವುದು ಮುಂದುವರಿದರೂ, ಅದರಿಂದ ಸಾವು ನೋವು ಸಂಭವಿಸಿದರೂ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ. ಜನರ ಬಗ್ಗೆ ಪಾಲಿಕೆ ಅಧಿಕಾರಿಗಳಿಗಾಗಲಿ, ಸರ್ಕಾರಕ್ಕೆ ಆಗಲಿ ಕಿಂಚಿತ್ತೂ ಕಾಳಜಿ ಇಲ್ಲ ಎಂದರು.
ರಸ್ತೆ ಗುಂಡಿಗಳಿಗೆ ಅಲಂಕಾರ ಮಾಡಲು ಎಎಪಿ ಸಿದ್ಧ
ಆಡಳಿತಾರೂಢ ರಾಜ್ಯ ಬಿಜೆಪಿ ಭ್ರಷ್ಟಾಚಾರದಿಂದ ಸೃಷ್ಟಿಯಾಗಿದ್ದ ರಸ್ತೆಗುಂಡಿಗೆ ಮತ್ತೊಂದು ಜೀವ ಬಲಿಯಾಗಿದೆ. ಈಗ ಬಿಬಿಎಂಪಿಯು ರಸ್ತೆಗುಂಡಿಗಳ ಸಮೀಕ್ಷೆ ನಡೆಸಿ ಸುಮ್ಮನಾಗಬಹುದು. ಬಿಬಿಎಂಪಿ ಬಯಸಿದರೆ, ಗುಂಡಿಗಳಿಗೆ ಅಲಂಕಾರ ಮಾಡುವ ಮೂಲಕ ಸಮೀಕ್ಷೆಗೆ ಸಹಾಯ ಮಾಡಲು ಆಮ್ ಆದ್ಮಿ ಪಾರ್ಟಿ ಸಿದ್ಧವಿದೆ ಎಂದು ಬಿಬಿಎಂಪಿ ಆಡಳಿತ ವಿರುದ್ಧ ಮೋಹನ್ ದಾಸರಿ ಗರಂ ಆದರು.
ಬಿಬಿಎಂಪಿಯು ರಸ್ತೆಗುಂಡಿಗಳನ್ನು ಪತ್ತೆ ಹಚ್ಚುವ ಬದಲು ರಸ್ತೆ ನಿರ್ಮಿಸಿದ ಗುತ್ತಿಗೆದಾರ ಹಾಗೂ ಎಂಜಿನಿಯರ್ಗಳನ್ನು ಪತ್ತೆ ಹಚ್ಚಬೇಕಿದೆ. ಅವರ ವಿರುದ್ಧ ಕ್ರಮಕೈಗೊಂಡರೆ ಮಾತ್ರ ಈ ಸಮಸ್ಯೆ ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ದೂರಿದರು.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬ ಈ ಮೂರು ಜೆಸಿಬಿ ಪಕ್ಷಗಳು ಆಡಳಿತ ನಡೆಸಿದರೆ ರಸ್ತೆಗಳು ಕೂಡ ಜೆಸಿಬಿಯಲ್ಲಿ ಅಗೆದಂತೆ ಇರುತ್ತವೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳನ್ನು ಜನರು ನಿರೀಕ್ಷಿಸಬಹುದು. ಬಿಬಿಎಂಪಿ ಚುನಾವಣೆಯಲ್ಲಿ ಜಯಗಳಿಸಿದ ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನ ರಸ್ತೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಮೋಹನ್ ದಾಸರಿ ವಿಶ್ವಾಸ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ರಸ್ತೆ ಕಳಪೆ
Recommended Video
ಬಿಬಿಎಂಪಿಯಲ್ಲಿ 'ಹಳೇ ಕಲ್ಲು- ಹೊಸ ಬಿಲ್ಲು' ಮಾದರಿಯ ಆಡಳಿತವಿದೆ. ಇದಕ್ಕೆ ಅಂತ್ಯ ಹಾಡಲು ಜನರು ಕಟಿಬದ್ಧರಾಗಬೇಕಿದೆ. ಜಗತ್ತಿನ ಹಲವು ನಗರಗಳ ರಸ್ತೆಗಳು ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿವೆ. ಭಾರೀ ಮಳೆ ಬಂದರೂ ಹಾಳಾಗದಂತಹ ರಸ್ತೆಗಳು ವಿವಿಧೆಡೆ ನಿರ್ಮಾಣವಾಗುತ್ತಿವೆ. ಆದರೆ ಬೆಂಗಳೂರಿನ ರಸ್ತೆಗಳು ಮಾತ್ರ ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ. ಭ್ರಷ್ಟ ಆಡಳಿತವು ಅಂತ್ಯವಾಗಿ, ಪ್ರಾಮಾಣಿಕ ಆಡಳಿತ ಬರುವವರೆಗೂ ಬೆಂಗಳೂರಿನ ರಸ್ತೆಗಳು ಸುಧಾರಣೆಯಾಗಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.