ಬೆಂಗಳೂರು ನಗರದ ಹೊರ ವಲಯದಲ್ಲಿ ಶಾಲೆ-ಕಾಲೇಜು ತೆರೆಯಲಿದೆ ಬಿಬಿಎಂಪಿ
ಬೆಂಗಳೂರು, ಜೂನ್ 27: ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ)ಯಿಂದ 2006ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯಿತು. ಆದರೂ ಬೆಂಗಳೂರು ಕೇಂದ್ರ ಭಾಗದ ಹೊರತಾಗಿ ಬಿಬಿಎಂಪಿ ಶಾಲಾ ಕಾಲೇಜುಗಳು ಹೊರ ವಲಯದಲ್ಲಿ ತೆರೆದಿರಲಿಲ್ಲ. ಇದೀಗ ಬೆಂಗಳೂರು ಹೊರವಲಯದಲ್ಲೂ ಶಾಲಾ ಕಾಲೇಜು ತೆರೆಯಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು ಕೇಂದ್ರಭಾಗದಿಂದ ಹೊರಗಡೆಯು ಶಾಲಾ ಕಾಲೇಜುಗಳನ್ನು ತೆರೆಯಲು ಮುಂದಾಗಿದೆ. ಪಾಲಿಕೆಯ ಶಿಕ್ಷಣ ವಿಭಾಗ ಯೋಜನೆಯನ್ನು ರೂಪಿಸಿದ್ದು 2023-24ನೇ ಶೈಕ್ಷಣಿಕ ವರ್ಷದಿಂದ ನರ್ಸರಿಯಿಂದ ಪದವಿಪೂರ್ವ ಕಾಲೇಜು ( 12ನೇ ತರಗತಿ)ವೆರೆಗೂ ತೆರೆಯಲು ಸಿದ್ದವಾಗುತ್ತಿದೆ.
ಬಿಬಿಎಂಪಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣಗಳಲ್ಲಿ 160 ಪಾಲಿಕೆಯ ಶಾಲಾ ಕಾಲೇಜುಗಳಿವೆ. ಆದರೆ 2006-07ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು ಸೇರ್ಪಡೆಗೊಂಡವು. ಈ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಬೆಂಗಳೂರು ಕೇಂದ್ರ ಭಾಗದ ಹೊರಗಿನ ಪ್ರದೇಶದಲ್ಲಿ ನರ್ಸರಿಯಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ಒಂದೇ ಸೂರಿನಡಿ ಕಲ್ಪಿಸಲು ಪಾಲಿಕೆ ಸಿದ್ದಲಾಗಿದೆ.
ಶಾಸಕರು ಜನಪ್ರತಿನಿಧಿಗಳು ಸಹ ಬಿಬಿಎಂಪಿ ಶಾಲಾ ಕಾಲೇಜು ತೆರೆಯಲು ಕೇಳಿಕೊಂಡಿದ್ದಾರೆ. ಬಿಬಿಎಂಪಿ ಹಾಕಿಕೊಂಡಿರೋ ಯೋಜನೆಯಂತೆ ಬಿಬಿಎಂಪಿ ಶಾಲಾ ಕಾಲೇಜು ತೆರೆಯಲು ಲಗ್ಗೆರೆಯನ್ನು ಹೊರತು ಪಡಿಸಿ ಬೇರೆಲ್ಲೂ ಸ್ಥಳದ ಅವಕಾಶ ಸಿಕ್ಕಿಲ್ಲದೇ ಸೂಕ್ತ ಸ್ಥಳಕ್ಕಾಗಿ ಹುಡುಕಾಟವನ್ನು ನಡೆಸುತ್ತಿದೆ.
ನರ್ಸರಿಯಿಂದ 12ನೇ ತರಗತಿವರೆಗಿನ ಬಿಬಿಎಂಪಿ ಶಾಲೆ
ಬಿಬಿಎಂಪಿ ಮೊದಲ ಹಂತದಲ್ಲಿ 7 ಕಡೆ ಶಾಲಾ ಕಾಲೇಜುಗಳನ್ನು ತೆರೆಯಲು ಸನ್ನದ್ದವಾಗುತ್ತಿದೆ. ದಾಸರಹಳ್ಳಿ , ಬ್ಯಾಟರಾಯನಪುರ, ಕೆಆರ್ ಪುರ, ಬೆಂಗಳೂರು ದಕ್ಷಿಣ, ಆರ್ಆರ್ ನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ, ಅರಕೆರೆ, ವಿಜ್ಞಾನ ಪುರ, ರಘುನಹಳ್ಳಿ, ಲಗ್ಗೆರೆ, ಕೆಂಗೇರಿ, ಥಣಿಸಂದ್ರ, ಆಗರ, ಕಟ್ಟಿಗೇನ ಹಳ್ಳಿ, ಬಾಗಲೂರು ಕ್ರಾಸ್ಗಳಲ್ಲಿ ಸೂಕ್ತ ಕಡೆ ಬಿಬಿಎಂಪಿ ನರ್ಸರಿಯಿಂದ 12ತರಗತಿಯ ವರೆಗಿನ ಶಾಲೆಗಳು ಪ್ರಾರಂಭವಾಗಿವೆ. ಬಿಬಿಎಂಪಿ ಈ ಭಾಗಗಳಲ್ಲಿ ಶಾಲೆಯನ್ನು ತೆರೆಯಲು ಸೂಕ್ತ ಸ್ಥಳಕ್ಕಾಗಿ ಹುಡುಕಾಟವನ್ನು ನಡೆಸಿದ್ದಾರೆ. ಆದರೆ ಲಗ್ಗೆರೆಯನ್ನು ಹೊರತುಪಡಿಸಿ ಬಿಬಿಎಂಪಿಗೆ ಬೇರೆಲ್ಲೂ ಸೂಕ್ತ ಸ್ಥಳಾವಕಾಶ ಲಭ್ಯವಾಗಿಲ್ಲ.
77 ಕೋಟಿಗೆ ಸರ್ಕಾರದ ಅನುಮೋದನೆ
ಬಿಬಿಎಂಪಿ ಶಾಲೆಗಳನ್ನು ತೆರೆಯಲು ಸರ್ಕಾರ ಹಣಕಾಸು ನರವನ್ನು ನೀಡಲಿದೆ. ಹೊಸ ಶಾಲಾ ಕಾಲೇಜು ಆರಂಭಕ್ಕೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 77ಕೋಟಿ ಅನುದಾನಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಗೆ ಸರ್ಕಾರ ಈಗಾಗಲೇ ಅನುಮೋದನೆಯನ್ನು ನೀಡಿದೆ. ಬಿಬಿಎಂಪಿ ವಿಸ್ಕೃತ ಯೋಜನೆ ತಯಾರಿಸಿ ಮುಂದಿನ ಕ್ರಮ ಕೈಗೊಳ್ಳುವುದು ಬಾಕಿಯಿದೆ. 77 ಕೋಟಿ ಅನುದಾನದಲ್ಲಿ 72ಕೋಟಿಯನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ಉಳಿದ 5 ಕೋಟಿಯನ್ನು ಶಾಲಾ ಪೀಠೋಪಕರಣ ಲ್ಯಾಬ್, ಸ್ಮಾರ್ಟ್ ಕ್ಲಾಸ್ಗಳಿಗೆ ಖರ್ಚು ಮಾಡಲಿದೆ.
ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ
ಮುಖ್ಯಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ಶಾಲಾ ಕಾಲೇಜುಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 180ಕೋಟಿ ಮೊತ್ತದ ಯೋಜನೆಗೆ ಅನುಮೋದನೆಯನ್ನು ನೀಡಿದೆ. ಹೊಸ ಕೊಠಡಿ ನಿರ್ಮಾಣ, ಶಾಲೆಗ ಅಗತ್ಯವಿರುವ ಪರಿಕರಗಳನ್ನು ತೆಗೆದುಕೊಳ್ಳಲು ಈ ಹಣವನ್ನು ಉಪಯೋಗಿಸಬಹುದಾಗಿದೆ.
ಬಿಬಿಎಂಪಿ ಶಾಲೆಗಳಿಗೆ ಹೆಚ್ಚಿದ ಬೇಡಿಕೆ
ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಹಳ್ಳಿಯಲ್ಲಿ ಪ್ರಸಕ್ತ ವರ್ಷ ಪದವಿ ಪೂರ್ವ ಕಾಲೇಜು ಪ್ರಾರಂಭಿಸಿದ್ದು 200 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹೊಸ ವಲಯದಲ್ಲಿ ಶಾಲಾ ಕಾಲೇಜು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿ ಅಗತ್ಯ ಅನುದಾನ ನೀಡಲು ಅನುಮೋದನೆ ನೀಡಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್ ತಿಳಿಸಿದ್ದಾರೆ.