ಅಪಾಯ ತಂದೊಡ್ಡಬಹುದಾದ ಮರಗಳ ತೆರವಿಗೆ ಮೇಯರ್ ಆದೇಶ
ಬೆಂಗಳೂರು, ಜನವರಿ 24:ಅಪಾಯವನ್ನು ತಂದೊಡ್ಡಬಹುದಾದ ಮರಗಳನ್ನು ಕಡಿಯಲು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮಳೆ, ಗಾಳಿ ಎನ್ನದೆ ಮರಗಳು, ರೆಂಬೆಗಳು ಬಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯನ್ನು ಉಂಟು ಮಾಡಿದ್ದವು. ಒಂದು ವಾರದೊಳಗೆ ಇಂತಹ ಮರಗಳ ಬಗ್ಗೆ ವರದಿ ನೀಡುವಂತೆ ಮೇಯರ್ ಗಂಗಾಂಬಿಕೆ ಆದೇಶ ನೀಡಿದ್ದಾರೆ.
ದೇಶಿ ತಳಿ ಸಸಿ ನೆಡಲು ಬಿಬಿಎಂಪಿ ನಿರ್ಧಾರ
ಕಳೆದ ಬಾರಿ ಮಳೆ ಬಂದಾಗ ಮರ ಉರುಳಿ ಸಾವು ಸಂಭವಿಸಿರುವ ಘಟನೆಗಳು ಕಣ್ಣ ಮುಂದಿವೆ. ಇನ್ನೇನು ಬೇಸಿಗೆ ಪ್ರಾರಂಭವಾಗಲಿದ್ದು, ಗಾಳಿಯ ರಭಸಕ್ಕೆ ರೋಗಗ್ರಸ್ಥ ಹಾಗೂ ಆಯುಷ್ಯ ಮುಗಿದ ಮರಗಳು ಯಾವಾಗಾದರೂ ಉರುಳಬಹುದು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಹಳೆಯ ಮರಗಳ ಮಾರಣ ಹೋಮಕ್ಕೆ ಮುಂದಾಗಿದೆ. ಕೂಡಲೇ ನಗರದ ಎಲ್ಲ ಭಾಗದಲ್ಲಿ ಪರಿಶೀಲನೆ ನಡೆಸಿ ಅಳಿವಿನಂಚಿನಲ್ಲಿರುವ ಮರಗಳ ಪಟ್ಟಿ ಮಾಡಿ ವರದಿ ನೀಡಬೇಕೆಂದು ಮೇಯರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆ ಬಂದಾಗ ಉಂಟಾಗುವ ಅವಾಂತರ ತಡೆಯಲು ಎಚ್ಚೆತ್ತುಕೊಂಡಿರುವ ಪಾಲಿಕೆ ಅಪಾಯದ ಅಂಚಿನಲ್ಲಿರುವ ಮರಗಳನ್ನು ಅಧಿಕಾರಿಗಳು ವರದಿ ನೀಡಿದ ಕೂಡಲೇ ತೆರವುಗೊಳಿಸಲು ನಿರ್ಧರಿಸಿದೆ. ನಗರದ ಹಲವಾರು ಪ್ರದೇಶಗಳಲ್ಲಿ ರಸ್ತೆಬದಿ ಮರಗಳು ಹಳೆಯದಾಗಿದ್ದು, ಅದು ಯಾವಾಗ ಮುರಿದು ಬಿದ್ದು ಸಾವು-ನೋವು ತಂದೊಡ್ಡುವುದೋ ಎಂಬ ಆತಂಕ ಉಂಟಾಗಿದೆ.
ಮರ ಗಣತಿ ಮಾಡಲು ಕೊನೆಗೂ ಬಿಬಿಎಂಪಿಗೆ ಕಾಲ ಕೂಡಿ ಬಂತು!
ಇದ್ದಕ್ಕಿದ್ದಂತೆ ಮರಗಳು ಉರುಳಿ ವಾಹನ ಸವಾರರಿಗೆ ತೊಂದರೆಯಾಗುವುದು, ವಾಹನಗಳು ಜಖಂಗೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ನಗರದ ರಿಂಗ್ ರಸ್ತೆಯಲ್ಲಿ ಬೆಳಗಿನ ಜಾವ 1.55ರಲ್ಲಿ ಮರ ಉರುಳಿಬಿದ್ದು, ಕಾರು ಜಖಂಗೊಂಡಿತ್ತಲ್ಲದೆ ಇತರೆ ವಾಹನಗಳು ಸಂಚರಿಸಲು ತೊಂದರೆ ಉಂಟಾಗಿತ್ತು.
ತಕ್ಷಣ ಬಾಣಸವಾಡಿ ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾವಿಸಿ ಉರುಳಿಬಿದ್ದ ಮರವನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಮರ ಉರುಳಿ ಕಾರು ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದಲ್ಲಿ ಯಾವ ಯಾವ ಜಾತಿಯ ಮರಗಳಿವೆ, ಅವುಗಳಲ್ಲಿ ಔಷಧೀಯ ಮರಗಳು ಎಷ್ಟು, ಅವುಗಳ ಜೀವಿತಾವಧಿ ಎಷ್ಟು ಎಂಬುದರ ಬಗ್ಗೆ ಸರ್ವೆ ಮಾಡಬೇಕು. ಅದರಲ್ಲಿ ಅಳಿವಿನಂಚಿನಲ್ಲಿರುವ ಮರಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿ ಒಂದು ವಾರದೊಳಗೆ ಮರಗಳ ಪೂರ್ಣ ವರದಿ ನೀಡುವಂತೆ ಮೇಯರ್ ಸೂಚನೆ ನೀಡಿದ್ದಾರೆ.