ಕೋವಿಡ್ ರ್ಯಾಂಡಮ್ ಪರೀಕ್ಷೆ ನಿರಾಕರಣೆ: ಬಿಬಿಎಂಪಿ ಅಧಿಕಾರಿಗಳಿಂದ ಯುವಕನಿಗೆ ಥಳಿತ
ಬೆಂಗಳೂರು, ಮೇ 24: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದೇಶದಲ್ಲೇ ಹೆಚ್ಚಾಗಿ ವರದಿಯಾಗುತ್ತಿರುವುದು ರಾಜ್ಯ ಸರ್ಕಾರವನ್ನು ಚಿಂತೆಗೀಡು ಮಾಡಿದೆ.
ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೋವಿಡ್ ರ್ಯಾಂಡಮ್ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ ಯುವಕನ ಜೊತೆ ಬಿಬಿಎಂಪಿ ಅಧಿಕಾರಿಗಳು ವಾಗ್ವಾದ ನಡೆಸಿದ್ದಾರೆ. ನಂತರ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಬೆಂಗಳೂರು ನಗರದ ನಾಗರಥ್ಪೇಟೆ ಬಳಿ ಯುವಕನ ಮೇಲೆ ಅಧಿಕಾರಿಗಳು ಹಲ್ಲೆ ಮಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಇದಕ್ಕೆಲ್ಲ ಕಾರಣ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ರ್ಯಾಂಡಮ್ ಪರೀಕ್ಷೆಯನ್ನು ಹೆಚ್ಚು ಮಾಡಿದೆ. ಮೊದಲು ಬೆಂಗಳೂರು ಒಂದರಲ್ಲೇ ದಿನಕ್ಕೆ 89 ಸಾವಿರ ರ್ಯಾಪಿಡ್ ಆಂಟಿಜೆನ್ ಮತ್ತು ಆರ್ಟಿ-ಪಿಸಿಆರ್ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಈ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಈ ಸಂಖ್ಯೆ, ಮೂರನೇ ವಾರದ ಹೊತ್ತಿಗೆ ಸುಮಾರು ನಲವತ್ತು ಸಾವಿರಕ್ಕೆ ಇಳಿದಿತ್ತು. ಹಾಗಾಗಿ, ಹೊಸ ಸೋಂಕಿತರ ಸಂಖ್ಯೆಯೂ ಇಳಿಕೆಯಾಗಿತ್ತು.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕಮ್ಮಿಯಾಗಿಲ್ಲ, ಟೆಸ್ಟಿಂಗ್ ಸಂಖ್ಯೆ ಕಮ್ಮಿಯಾಗಿದೆ ಎಂದು ವಿರೋಧ ಪಕ್ಷಗಳು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಇನ್ನು, ಸಾವಿನ ಸಂಖ್ಯೆ ಇಳಿಮುಖವಾಗುತ್ತಿಲ್ಲ ಎಂದು ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತ ಅವರನ್ನು ಪ್ರಶ್ನಿಸಿದ್ದರು.
ಹೀಗಾಗಿ, ಮತ್ತೆ ರ್ಯಾಂಡಮ್ ಟೆಸ್ಟಿಂಗ್ ಅನ್ನು ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಿದೆ. ಶನಿವಾರದಿಂದ ಕೆಲವು ಅಪಾರ್ಟ್ಮೆಂಟ್, ಕಲಾಸಿಪಾಳ್ಯ, ಕೊಳೆಗೇರಿ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಬಿಬಿಎಂಪಿ ಆರಂಭಿಸಿದೆ.
"ಖಾಸಗಿ ಸಂಘಟನೆಗಳ ನೆರವಿನಿಂದ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಟೆಸ್ಟಿಂಗ್ ಹೆಚ್ಚಿಸಿ, ಕೊರೊನಾ ನಿಯಂತ್ರಣಕ್ಕೆ ತರಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದರು.
Random testing for covid19 leads to altercations in Bengaluru, BBMP officials seen manhandling a youth who refused to undergo a random #COVID19 test near nagarathpet. pic.twitter.com/FGcLXj8wUv
— Deepak Bopanna (@dpkBopanna) May 24, 2021
ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಮಿನಿ ಲಾಕ್ಡೌನ್ ಜಾರಿ ಮಾಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿಲ್ಲ. ಇದರ ನಡುವೆ ರಾಜ್ಯ ಸರ್ಕಾರ ದಿನಕಕ್ಕೊಂದು ನಿಯಮ ಜಾರಿ ಮಾಡುತ್ತಿದ್ದು, ಸಹಜವಾಗಿಯೇ ಜನರು ಗೊಂದಲದಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ಈಗಲೂ ದಿನಕ್ಕೆ ಸನಿಹ ೧೦ ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.
We regret the incident at Nagarathpet testing booth. There is no question of forceful testing.
— Gaurav Gupta,IAS (@BBMPCOMM) May 24, 2021
We condemn any physical altercation that has happened. Enquiry would be conducted to find out what led to this, who is responsible, and also to prevent any such recurrence.
ಕೋವಿಡ್ ಒಂದು ಮಹಾಮಾರಿ ಎನ್ನುವುದು ಗೊತ್ತಿದ್ದರೂ ಜನರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಜನರ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡಿ ಪರೀಕ್ಷೆ ಮಾಡದೇ, ಜನರಿಗೆ ಜಾಗೃತಿ ಮೂಡಿಸಿ ಕೋವಿಡ್ ಪರೀಕ್ಷೆ ನಡೆಸಬೇಕಾಗಿದೆ.